ಸುಧಾರಿತ ಫಿಲ್ಟರೇಶನ್ ತಂತ್ರಜ್ಞಾನಗಳಿಗೆ ಭಾರತ ನಿರ್ಣಾಯಕ ಕೇಂದ್ರ

KannadaprabhaNewsNetwork |  
Published : May 22, 2026, 01:30 AM IST
9999 | Kannada Prabha

ಸಾರಾಂಶ

ಫಿಲ್ಟರೇಶನ್ ಪರಿಹಾರ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮಾನ್‌ ಹುಮ್ಮೆಲ್‌ , ತುಮಕೂರಿನಲ್ಲಿ ತನ್ನ ಹೊಸ ಅತ್ಯಾಧುನಿಕ ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನು ಆರಂಭಿಸಿದೆ.ಅಂತರಸನಹಳ್ಳಿಯ ಕೈಗಾರಿಕಾ ವಲಯದಲ್ಲಿ ನೂತನ ನಾವೀನ್ಯತೆ ಕೇಂದ್ರ ಗುರುವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ, ತುಮಕೂರು ಫಿಲ್ಟರೇಶನ್ ಪರಿಹಾರ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮಾನ್‌+ಹುಮ್ಮೆಲ್‌ , ತುಮಕೂರಿನಲ್ಲಿ ತನ್ನ ಹೊಸ ಅತ್ಯಾಧುನಿಕ ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನು ಆರಂಭಿಸಿದೆ.ಅಂತರಸನಹಳ್ಳಿಯ ಕೈಗಾರಿಕಾ ವಲಯದಲ್ಲಿ ನೂತನ ನಾವೀನ್ಯತೆ ಕೇಂದ್ರ ಗುರುವಾರ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾನ್‌+ ಹುಮ್ಮೆಲ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುದೀಶ್ ಕರಿಂಬಿಂಗಲ್, ಮಾನ್‌+ ಹುಮ್ಮೆಲ್‌ ಟ್ರಾನ್ಸ್‌ಪೋರ್ಟೇಷನ್‌ ವಿಭಾಗದ ಅಧ್ಯಕ್ಷ ಹಸ್ಮೀತ್‌ ಕೌರ್‌, ನಾನ್‌ ಎಕ್ಸಿಕ್ಯೂಟಿವ್‌ ಅಧ್ಯಕ್ಷ ಥಾಮಸ್‌ ಫಿಷರ್‌, ಹೆವಿ ಡ್ಯೂಟಿ ವಿಭಾಗದ ಅಧ್ಯಕ್ಷ ಮತ್ತು ಜನರಲ್‌ ಮ್ಯಾನೇಜರ್‌ ಹೆರಾಲ್ಡ್‌ ಸ್ಪೇತ್‌ ಉಪಸ್ಥಿತರಿದ್ದರು.

ಜರ್ಮನಿಯ ಹೊರಗೆ ಮಾನ್‌+ಹುಮ್ಮೆಲ್‌ ಕಂಪೆನಿಯ ಅತ್ಯಂತ ದೊಡ್ಡ ಅಭಿವೃದ್ಧಿ ಕೇಂದ್ರ ಇದಾಗಿದೆ. ಎಂಜಿನಿಯರಿಂಗ್, ನಾವೀನ್ಯತೆ ಮತ್ತು ಸುಧಾರಿತ ಫಿಲ್ಟರೇಶನ್ ತಂತ್ರಜ್ಞಾನಗಳಿಗೆ ಭಾರತವನ್ನು ಒಂದು ನಿರ್ಣಾಯಕ ಕೇಂದ್ರವನ್ನಾಗಿ ಇದು ಬಲಪಡಿಸಲಿದೆ. ತುಮಕೂರು ಹೊಸ ಕೇಂದ್ರವು ಸುಧಾರಿತ ಸಂಶೋಧನಾ ಪ್ರಯೋಗಾಲಯಗಳು, ಪರೀಕ್ಷಾ ಮೂಲಸೌಕರ್ಯಗಳು, ಡಿಜಿಟಲ್ ಎಂಜಿನಿಯರಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ ಎಲ್ಲವನ್ನೂ ಒಂದೇ ಸೂರಿನಡಿ ಸಂಯೋಜಿಸಲಿದೆ. ಜಾಗತಿಕ ಉತ್ಪನ್ನ ಅಭಿವೃದ್ಧಿ ಮತ್ತು ಗ್ರಾಹಕ-ಕೇಂದ್ರಿತ ನಾವೀನ್ಯತೆಯನ್ನು ತ್ವರಿತಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಒಂದು ಜಾಗತಿಕ ನಾವೀನ್ಯತೆಯ ಎಂಜಿನ್ ಆಗಿ, ಈ ಕೇಂದ್ರವು ಭಾರತದ ಬಲಿಷ್ಠ ಎಂಜಿನಿಯರಿಂಗ್ ಇಕೋಸಿಸ್ಟಮ್‌ ಬಳಸಿಕೊಂಡು, ಮಾರುಕಟ್ಟೆಗೆ ಉತ್ಪನ್ನಗಳನ್ನು ವೇಗವಾಗಿ ತಲುಪಿಸಲು ಮತ್ತು ವಿಶ್ವಾದ್ಯಂತ ಇರುವ ಗ್ರಾಹಕರೊಂದಿಗೆ ಸಹಯೋಗ ಬಲಗೊಳಿಸಲು ಅನುವು ಮಾಡಿಕೊಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್‌+ಹುಮ್ಮೆಲ್‌ ಸಮೂಹದ ಟ್ರಾನ್ಸ್‌ಪೋರ್ಟೇಷನ್‌ ವಿಭಾಗದ ಅಧ್ಯಕ್ಷ ಹಸ್ಮೀತ್‌ ಕೌರ್‌ ಅವರು ಭಾರತದಲ್ಲಿನ ಹೊಸ ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವು ಮಾನ್‌+ ಹುಮ್ಮೆಲ್‌ನ ಜಾಗತಿಕ ನಾವೀನ್ಯತೆಯ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಭಾರತವು ಎಂಜಿನಿಯರಿಂಗ್ ಪ್ರತಿಭೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಜರ್ಮನಿಯ ಹೊರಗಿನ ನಮ್ಮ ಅತಿ ದೊಡ್ಡ ಅಭಿವೃದ್ಧಿ ಕೇಂದ್ರಕ್ಕೆ ಇದು ಸಹಜ ಆಯ್ಕೆಯಾಗಿದೆ. ಈ ಕೇಂದ್ರವು ನಮ್ಮ ನಾವೀನ್ಯತೆಯ ಸಾಮರ್ಥ್ಯಗಳನ್ನು ವೇಗಗೊಳಿಸುವುದಲ್ಲದೆ, ವಿಶ್ವಾದ್ಯಂತ ಇರುವ ಗ್ರಾಹಕರಿಗೆ ಸುಸ್ಥಿರ ಮತ್ತು ವಿಸ್ತರಿಸಬಹುದಾದ ಫಿಲ್ಟರೇಶನ್ ಪರಿಹಾರಗಳನ್ನು ತಲುಪಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದು ತಂತ್ರಜ್ಞಾನದ ಮೂಲಕ ಸ್ವಚ್ಛ ಮತ್ತು ಆರೋಗ್ಯಕರ ಭವಿಷ್ಯವನ್ನು ರೂಪಿಸುವ ನಮ್ಮ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದರು.ಮಾನ್‌+ ಹುಮ್ಮೆಲ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುದೀಶ್ ಕರಿಂಬಿಂಗಲ್ ಅವರು ಮಾತನಾಡಿ, ತುಮಕೂರಿನ ಈ ಹೊಸ ಸೌಲಭ್ಯವು, ಜಾಗತಿಕವಾಗಿ ಮಾನ್‌+ ಹುಮ್ಮೆಲ್‌ ಸಂಸ್ಥೆಗೆ ಭಾರತವು ಒಂದು ಕಾರ್ಯತಂತ್ರದ ಬೆಳವಣಿಗೆ ಮತ್ತು ಎಂಜಿನಿಯರಿಂಗ್ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಭಾರತೀಯ ಎಂಜಿನಿಯರಿಂಗ್ ತಂಡವು ನಮ್ಮ ಜಾಗತಿಕ ಉತ್ಪನ್ನ ಅಭಿವೃದ್ಧಿಯಲ್ಲಿ ಗಾಢವಾಗಿ ತೊಡಗಿಸಿಕೊಂಡಿದೆ. ಈ ಕೇಂದ್ರವು ಭಾರತವನ್ನು ಕೇವಲ ಒಂದು ಬೆಂಬಲ ಕೇಂದ್ರದಿಂದ ಕಾರ್ಯತಂತ್ರದ ಎಂಜಿನಿಯರಿಂಗ್ ಶಕ್ತಿ ಕೇಂದ್ರವಾಗಿ ಪರಿವರ್ತಿಸುತ್ತದೆ. ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವ ನಾವೀನ್ಯತೆಯನ್ನು ಇದು ಮುನ್ನಡೆಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ತುಮಕೂರಿನ ಈ ಸೌಲಭ್ಯವು ಇಂಧನ-ದಕ್ಷತೆಯ ಫಿಲ್ಟರೇಶನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಉತ್ಪನ್ನಗಳ ಲೈಫ್‌ಸೈಕಲ್‌ ಎಮಿಷನ್‌ ಕಡಿಮೆ ಮಾಡುವುದು ಮತ್ತು ಮರುಬಳಕೆ ಹಾಗೂ ಪರಿಸರಸ್ನೇಹಿ ಉತ್ಪನ್ನ ವಿನ್ಯಾಸ ಸೇರಿದಂತೆ ಸರ್ಕ್ಯುಲರ್‌ ಸೊಲ್ಯೂಷನ್ಸ್‌ಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜ ಬದಲಾಗದಿದ್ದರೆ ಗುಲಾಮಗಿರಿ ಬರುತ್ತೆ: ಬಿ.ವೀರಪ್ಪ
ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನೀರಿಗಾಗಿ ಪರದಾಟ