ಸಂಡೂರು: ಭಾರತ ಜ್ಞಾನದ ತವರು ಮನೆಯಾಗಿದೆ ಎಂದು ಗದಗ ಮತ್ತು ವಿಜಯಪುರದ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ಹಲವು ಪಾಶ್ಚಾತ್ಯ ವಿದ್ವಾಂಸರು ಭಾರತೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ದೇಶದ ನಾಗರಿಕತೆಯನ್ನು ಉಳಿಸುವುದು ಸಂಸ್ಕೃತಿ ಎಂದರು.
ಭಾರತೀಯತೆಯ ಬೇರು ಇಲ್ಲಿನ ಅಧ್ಯಾತ್ಮದಲ್ಲಿದೆ. ಭಾರತ ಬೆಳಕಿನ ನಾಡು. ಫೈಥಾಗೋರಸ್ ಅಧ್ಯಯನ ಮಾಡಿದ್ದು ಕಾಶಿ ಪಟ್ಟಣದಲ್ಲಿ. ದೇಶದ ಪ್ರತಿಯೊಬ್ಬರೂ ಭಾರತೀಯ ಸಂಸ್ಕೃತಿ ತಿಳಿಯಬೇಕು. ನಮ್ಮ ಪೂರ್ವಜರು ಮಹಾನ್ ಸಾಧಕರು. ಸದಾಚಾರವಿಲ್ಲದ ಧರ್ಮವಿಲ್ಲ. ನಮ್ಮ ಆಚಾರ ಸದಾಚಾರದಿಂದ ಕೂಡಿರಬೇಕು. ಸಂಸ್ಕಾರದಿಮದ ನಮಗೆ ಎರಡನೇ ಜನ್ಮ ದೊರೆಯಲಿದೆ. ಋಷಿ ಎಂದರೆ, ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವವನು ಎಂದರ್ಥ. ಸದಾಚಾರದಿಂದಲೇ ಧರ್ಮ ಗೆಲ್ಲಲಿದೆ ಎಂದರು.ಜನತೆ ಭಾರತೀಯ ಸಂಸ್ಕೃತಿಯನ್ನು ತಿಳಿದು, ಅದನ್ನು ಪಾಲಿಸಬೇಕು. ಪ್ರತಿಯೊಬ್ಬರೂ ತಂದೆತಾಯಿಗಳ ಸೇವೆ ಮಾಡಬೇಕು. ಪ್ರತಿ ಮನೆಯಲ್ಲಿ ಒಂದು ಗ್ರಂಥಾಲಯವಿರಬೇಕು ಎಂದು ತಿಳಿಸಿದರು.
ಸಹನಾ ಶಾಸ್ತ್ರಿ, ಕೆ.ಕೊಟ್ರೇಶ್, ಕೆ.ಉಮೇಶ್ ಆಚಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಿ.ಎಂ. ಮಹಾಂತೇಶ್ ಸ್ವಾಗತಿಸಿದರು. ಬಣಕಾರ ಬಸವರಾಜ ಕಾರ್ಯಕ್ರಮ ನಿರೂಪಿಸಿದರು.
ಸದಾನಂದ ಸ್ವಾಮೀಜಿ, ವಿಕಾಸ ಅಕಾಡೆಮಿಯ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ, ಸಂಚಾಲಕ ಕರಡಿ ಯರಿಸ್ವಾಮಿ, ಮುಖಂಡರಾದ ಪ್ರಭುದೇವ ಕಪ್ಪಗಲ್, ಸಿ.ಎಂ. ಶಿಗ್ಗಾವಿ, ಬಸವರಾಜ ಮಸೂತಿ, ಸದಾಶಿವಪ್ಪ ಕವಿತಾಳ, ಜಿ. ವೀರೇಶ್, ಕೆ. ಕುಮಾರಸ್ವಾಮಿ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.