ಮಡಬೂರು ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಭೋಜನ ಶಾಲೆ ಉದ್ಘಾಟನೆ, ಹರಕೆ ಮನೆ ಶಂಕು ಸ್ಥಾಪನೆ, ಗೌರವ ಸಮರ್ಪಣೆ
ಭಾರತ ದೇಶ ಧಾರ್ಮಿಕ ತಳಹದಿಯ ಮೇಲೆ ನಿಂತಿದ್ದು ಯಾರೂ ಧರ್ಮದ ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಭಾನುವಾರ ಮಡಬೂರಿನ ದಾನಿವಾಸ ದುರ್ಗಾಂಬ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಶಾಲೆ ಉದ್ಘಾಟನೆ, ಹರಕೆ ಮನೆ ಶಂಕುಸ್ಥಾಪನೆ ಹಾಗೂ ಗೌರವ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದಲ್ಲಿ ಇರುವ ಎಲ್ಲಾ ಧರ್ಮ, ಜಾತಿ, ಜನಾಂಗಗಳು ಧರ್ಮ ಗುರುಗಳ ಮಾರ್ಗದರ್ಶನದಿಂದ ಒಟ್ಟಾಗಿ ಇದ್ದೇವೆ. ಆದರೆ, ಪ್ರಪಂಚದ ಯಾವ ದೇಶದಲ್ಲೂ ನಮ್ಮ ದೇಶದಲ್ಲಿದ್ದಂತೆ ಶಾಂತಿ ವಾತಾವರಣ ಇಲ್ಲವಾಗಿದೆ. ನಮ್ಮ ಪೂರ್ವಿಕರು ಹಾಗೂ ಹಿರಿಯರ ಹೆಸರಿನಲ್ಲಿ ನೀಡುವ ದಾನದಿಂದ ಅವರ ಹೆಸರನ್ನು ಶಾಶ್ವತವಾಗಿಡುವ ಕೆಲಸವನ್ನು ದಾನಿಗಳು ಮಾಡಿದ್ದಾರೆ ಎಂದರು.ಮಡಬೂರಿನ ದುರ್ಗಾಂಬ ದೇವಸ್ಥಾನದಲ್ಲಿರುವ ಸಭಾ ಭವನದಲ್ಲಿ ಸಾಹಿತ್ಯ ಸಮ್ಮೇಳನ, ಕೃಷಿ ಸಮ್ಮೇಳನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಸಿ.ಎಸ್.ಆರ್ ಹಾಗೂ ಶಾಸಕರ ನಿಧಿಯಿಂದ ಇಲ್ಲಿನ ದುರ್ಗಾಂಬ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.
ಅತಿಥಿಯಾಗಿದ್ದ ಬೆಂಗಳೂರಿನ ಅಮ್ಮ ಫೌಂಡೇಷನ್ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಣ ಇದ್ದವರು ಶಾಲೆ, ದೇವಸ್ಥಾನಗಳಿಗೆ ಜಮೀನು ದಾನ ಮಾಡುತ್ತಿದ್ದರು. ಮಡಬೂರಿನ ವನಮಾಲಮ್ಮ ಬೋಜನಶಾಲೆಗೆ ₹10 ಲಕ್ಷ ನೀಡಿದ್ದಾರೆ. ಅವರ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿದೆ. ದಾನ ಕೊಡುವ ಮನಸ್ಸು ಬಂದಾಗ ದಾನ ನೀಡಬೇಕು. ಆದರೆ, ದಾನ ನೀಡುವಾಗ ಅಪಾತ್ರರಿಗೆ ನೀಡಬಾರದು ಎಂದರು.
ಸಭೆ ಅಧ್ಯಕ್ಷತೆಯನ್ನು ದಾನಿವಾಸ ಶ್ರೀ ದುರ್ಗಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಸಿ.ದಿವಾಕರ ವಹಿಸಿದ್ದರು. ಅತಿಥಿ ಗಳಾಗಿ ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷೆ ನೀಲಮ್ಮ, ದಾನಿ ಎಂ.ಬಿ. ವನಮಾಲ ಲಕ್ಷ್ಮಣಗೌಡ, ದಾನಿವಾಸ ಶ್ರೀ ದುರ್ಗಾಂಬ ದೇವಸ್ಥಾನದ ಸಮಿತಿ ಸದಸ್ಯರಾದ ಎಸ್.ಎಸ್.ಶಾಂತಕುಮಾರ್, ಎಲ್.ಎಂ.ಸತೀಶ್, ಎಚ್.ಸಿ.ಪ್ರವೀಣ್,ಜಿ.ಟಿ.ಸೋಮಣ್ಣ, ಎನ್.ಕೆ.ಕಿರಣ್, ಬಿ.ಟಿ.ಪ್ರಕಾಶ್, ಸತೀಶ್ ಇದ್ದರು.