ಕನ್ನಡಪ್ರಭ ವಾರ್ತೆ ಧಾರವಾಡ
ಕಳೆದ ಒಂದು ದಶಕದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುತ್ತಿದ್ದು, 2047ರಲ್ಲಿ ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಸೆಂಟ್ರಲ್ ಲರ್ನಿಂಗ್ ಥಿಯೇಟರ್, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಹಾಗೂ ಮುಖ್ಯ ದ್ವಾರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
2022ರಲ್ಲಿ ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ದೇಶದಲ್ಲಿ ಅಮೃತಕಾಲ ಆರಂಭವಾಗಿದೆ. ಇನ್ಮುಂದೆ 2047ರ ಹೊತ್ತಿಗೆ ಭಾರತದಲ್ಲಿ ಗೌರವಕಾಲ ನಿರ್ಮಿಸುವ ಜವಾಬ್ದಾರಿ ಇಂದಿನ ಯುವ ಜನರ ಮೇಲಿದೆ ಎಂದರು.ಭಾರತ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ವಾಂಟಂ ಕಂಪ್ಯೂಟಿಂಗ್ಗೆ ₹6 ಸಾವಿರ ಕೋಟಿ ಮತ್ತು ಗ್ರೀನ್ ಹೈಡ್ರೋಜನ್ ಮಿಶನ್ಗೆ ₹90 ಸಾವಿರ ಕೋಟಿ ಮೀಸಲು ಇಡಲಾಗಿದೆ. ದೇಶದ ಬೆನ್ನೆಲುಬಾಗಿರುವ ಯುವಕರು ತಮಗೆ ದೊರೆಯುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಗಮನಾರ್ಹ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು ಎಂದರು.
ಡಿಜಿಟಲ್ ವ್ಯವಹಾರಗಳಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಭಾರತಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಮೆಚ್ಚುಗೆ ದೊರೆತಿದೆ. ಕಳೆದ ವರ್ಷ ಜಗತ್ತಿನ ಒಟ್ಟು ಡಿಜಿಟಲ್ ವ್ಯವಹಾರದಲ್ಲಿ ಶೇ. 50ರಷ್ಟು ಪಾಲು ಭಾರತದ್ದಾಗಿದೆ ಎಂದ ಅವರು, ಕೋಟ್ಯಾಂತರ ಜನರಿಗೆ ಬ್ಯಾಂಕ್ ಖಾತೆ ತೆರೆಯುವ ಅವಕಾಶ ಸಿಕ್ಕಿದ್ದು ಈ ಸಾಧನೆಗೆ ಕಾರಣ. ಒಂದು ದಶಕದ ಹಿಂದೆ 500 ದಶಲಕ್ಷ ಜನರಿಗೆ ಬ್ಯಾಂಕ್ ಜೊತೆಗೆ ಯಾವುದೇ ಸಂಪರ್ಕ ಇರಲಿಲ್ಲ. ಈಗ ಒಂದು ನೂರು ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ನೇರ ಹಣ ವರ್ಗಾವಣೆ ಮೂಲಕ ₹3 ಲಕ್ಷ ಕೋಟಿ ಹಣವನ್ನು11 ಕೋಟಿ ರೈತರಿಗೆ ತಲುಪಿಸಲಾಗಿದೆ. ಇದರಲ್ಲಿ ಒಂದು ಪೈಸೆಯಷ್ಟು ಕೂಡಾ ಭ್ರಷ್ಟಾಚಾರ ಆಗಿಲ್ಲ ಎಂದು ಉಪರಾಷ್ಟ್ರಪತಿಗಳು ಪ್ರಶಂಸೆ ವ್ಯಕ್ತಪಡಿಸಿದರು.ಹಸರೀಕರಣಕ್ಕೆ ಒತ್ತು
ದೇಶದಲ್ಲಿ ಹಸಿರೀಕರಣಕ್ಕೆ ಪೂರಕ ವಾತಾರವಣ ನಿರ್ಮಿಸಲು ಆದ್ಯತೆ ನೀಡಲಾಗುತ್ತಿದ್ದು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸೌರ ವಿದ್ಯುತ್ ಬಳಸಲು ಬೃಹತ್ ಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ. 2025ರಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ದೇಶದಲ್ಲಿ ಸೌರವಿದ್ಯುತ್ ಉತ್ಪಾದನೆ 25 ಪಟ್ಟು ಹೆಚ್ಚಾಗಿದ್ದು, ದೇಶ 72 ಸಾವಿರ ಮೆಗಾ ವ್ಯಾಟ್ ಸೌರವಿದ್ಯುತ್ ಉತ್ಪಾದಿಸುತ್ತಿದೆ ಎಂದರು.ಆತ್ಮನಿರ್ಭರ ಭಾರತದ ಅಂಗವಾಗಿ ಸ್ವದೇಶ ಉತ್ಪಾದನೆಗೆ ಮಹತ್ವ ನೀಡಲಾಗುತ್ತಿದ್ದು, ಮೊದಲು ವಿದೇಶಗಳಿಂದ ಆಮದು ಮಾಡುತ್ತಿದ್ದ ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಪರರಾಷ್ಟ್ರಗಳಿಗೆ ರಫ್ತು ಮಾಡುವ ಮಟ್ಟಕ್ಕೆ ದೇಶ ಆತ್ಮನಿರ್ಭರವಾಗುತ್ತಿದೆ. ಇದು ಗಮನಾರ್ಹ ಸಾಧನೆ ಎಂದು ಅವರು ಹೇಳಿದರು.
ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು. ದೇಶಕ್ಕೆ ತ್ಯಾಗ-ಬಲಿದಾನದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟು ಇದೀಗ ಯುವಕರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಕಾರಣೀಕರ್ತರಾದವರನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಸುದೇಶ ಜಗದೀಪ ಧನಕರ್ ವೇದಿಕೆ ಮೇಲಿದ್ದರು. ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್ ದೇಸಾಯಿ ಸ್ವಾಗತಿಸಿದರು.
ಕೆಲವು ಶಕ್ತಿಗಳಿಂದ ದೇಶದಲ್ಲಿ ಕ್ಷುಲ್ಲಕ ರಾಜಕೀಯಭಾರತದ ಪ್ರಗತಿಯನ್ನು ಸಹಿಸಲಾಗದ ಕೆಲವು ಶಕ್ತಿಗಳು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ದೇಶ ವಿರೋಧಿ ಆಖ್ಯಾನಗಳನ್ನು ಪ್ರತಿಪಾದಿಸುತ್ತಿವೆ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನೂತನ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕ್ಷೀಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿದಿನವೂ ಒಂದೊಂದು ಔಚಿತ್ಯಪೂರ್ಣ ಬೆಳವಣಿಗೆಯನ್ನು ಕಾಣುತ್ತಿದೆ. ಇಡೀ ವಿಶ್ವ ಭಾರತದ ಕಡೆಗೆ ಬೆರಗಿನಿಂದ ನೋಡುತ್ತಿದೆ. ಇದನ್ನು ಸಹಿಸಲಾಗದೇ ಕೆಲವರು ದೇಶದ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.ಭಾರತ ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದ್ದು, ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ. ದೇಶದ ಯುವಕರಿಗೆ ಭವ್ಯ ಭವಿಷ್ಯ ಕಾದಿದ್ದು ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಸದುಪಯೋಗಪಡಿಸಿ ತಮ್ಮ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ದೇಶದ ಎಲ್ಲ ಪ್ರಜೆಗಳು ಅದರಲ್ಲೂ ಯುವ ಜನಾಂಗ ದೇಶಾಭಿಮಾನ ಬೆಳೆಸಿಕೊಂಡು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪ್ರತಿಯೊಬ್ಬರು ದೇಶದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಉಪರಾಷ್ಟ್ರಪತಿಗಳು ಹೇಳಿದರು.ದೇಶದಲ್ಲಿ ಆಗುತ್ತಿರುವ ಸಕಾರಾತ್ಮಕ ಬೆಳವಣಿಗೆಗಳು ದೇಶದ ಭಾಗ್ಯವನ್ನು ಬದಲಿಸುತ್ತಿದ್ದು, ವಿಶ್ವದ ಬಂಡವಾಳಗಾರರಿಗೆ ಬಂಡವಾಳ ಹೂಡಲು ಭಾರತ ಒಂದು ಅನುಕೂಲಕರ ತಾಣವಾಗಿದೆ ಎಂದು ನುಡಿದರು.