ಗದಗ: ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರು ಯೋಗದ ಬೇಡಿಕೆ ಕಂಡು ಅದನ್ನು ವ್ಯಾಪಾರೀಕರಣಗೊಳಿಸಿದ್ದಾರೆ. ಆದರೆ ಭಾರತವು ಜಗತ್ತಿಗೆ ನೀಡಿದ ಅಗ್ರಗಣ್ಯ ಕೊಡುಗೆಯಾಗಿರುವ ಯೋಗವು ಮೂಲತಃ ನಿಸ್ವಾರ್ಥ ಸೇವೆಯ ಸಂಕೇತವಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು. ನಗರದ ಜ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ನಡೆದ ಯಳಂದೂರು ಬಸವಲಿಂಗ ಸ್ವಾಮಿಗಳ ಅವರ ಸ್ಮಾರಕ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳನ್ನು ಸ್ಮರಿಸಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಹಾಗೂ ಆಯುರ್ವೇದದಂತ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಅನಿವಾರ್ಯತೆ ಇದೆ. ಇಷ್ಟು ದಿನ ದೈಹಿಕ ಬಳಲುವಿಕೆಗಾಗಿ ಮಾತ್ರ ಯೋಗ ಚಿಕಿತ್ಸಕ ಎಂದು ನಂಬಲಾಗಿತ್ತು, ಆದರೆ ಇತ್ತೀಚೆಗೆ ಯೋಗದ ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭಗಳ ಮಜಲುಗಳು ಅನಾವರಣಗೊಂಡಿವೆ. ಯೋಗ ಪಾಠಶಾಲೆಯು 50 ವಸಂತಗಳನ್ನು ಪೂರೈಸಿರುವುದು ಸಂತಸದ ಸಂಗತಿಯಾಗಿದ್ದು, ಕೆ.ಎಸ್. ಪಲ್ಲೇದ ಅವರ ಪರಿಶ್ರಮ ಹಾಗೂ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಇನ್ನೂ ಉತ್ತರೋತ್ತರ ಬೆಳೆಯಲಿ ಎಂದರು. ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯೋಗ ಈ ದೇಶದ ಆಸ್ತಿಯಾಗಿದ್ದು, ಈ ಹಿಂದೆ ಭಾರತಕ್ಕೆ ಸೀಮಿತವಾಗಿದ್ದ ಯೋಗವು ಇಂದು ಪ್ರಧಾನಿಗಳ ವಿಶೇಷ ಆಸಕ್ತಿಯಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದರು.
ಕವಿವಿ ಯೋಗ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ ಅವರ ಕುರಿತಾದ ದಿ ಯೋಗಾ ಏಂಜೆಲ್ ಅಭಿನಂದನಾ ಗ್ರಂಥವು ಲೋಕಾರ್ಪಣೆಗೊಳಿಸಲಾಯಿತು.
ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ನರರೋಗ ತಜ್ಞ ಡಾ. ಸಂತೋಷ ಎನ್.ಎಸ್. ಅವರು, ಯೋಗ ಹಾಗೂ ಧ್ಯಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹುಬ್ಬಳ್ಳಿ ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೊ.ಬಿ.ಎಲ್. ದೇಸಾಯಿ ಮಾತನಾಡಿದರು. ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮಿಗಳು ಸಮ್ಮುಖ ವಹಿಸಿದ್ದರು.ಯೋಗಾಚಾರ್ಯ ಕೆ.ಎಸ್ ಪಲ್ಲೇದ, ಡಾ. ಮಲ್ಲಿಕಾರ್ಜುನ ಐಹೊಳಿ, ಎಂ.ಎಸ್. ಶಿರಿಯಣ್ಣವರ, ಡಾ.ವಿ.ಎಂ. ಮುಂದಿನಮನಿ, ಐ.ಬಿ. ಕೊಟ್ಟರಶೆಟ್ಟರ, ಎಂ.ಪಿ. ರಮೇಶ, ಶ್ರೀಕಂಠ ಚೌಕಿಮಠ, ಚಂದ್ರಮೌಳಿ ನಾಯ್ಕರ್, ಶೇಖಣ್ಣ ಕವಳಿಕಾಯಿ, ಸಂಗಮೇಶ ಮೇಲ್ಮುರಿ, ಅಮರೇಶ ಅಂಗಡಿ, ಐ.ಬಿ. ಬೆನಕೊಪ್ಪ, ಡಾ. ಧನೇಶ ದೇಸಾಯಿ, ಎಂ.ಎಸ್. ಅಂಗಡಿ, ವಿನೋದ ಚಪ್ಪರಳ್ಳಿಮಠ ಸೇರಿದಂತೆ ಯೋಗಪಾಠಶಾಲೆಯ ವಿದ್ಯಾರ್ಥಿಗಳು, ಯೋಗಾಸಕ್ತರು ಇದ್ದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಪಾಠಶಾಲೆಯ ಯೋಗಸಾಧಕರು, ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.