ಕನ್ನಡಪ್ರಭವಾರ್ತೆ ಚಿತ್ರದುರ್ಗ
ಮಹಿಳೆಯೂ ದೇಶ ಆಳಬಹುದು ಎನ್ನುವುದು ವಿಶ್ವಕ್ಕೆ ತೋರಿಸಿಕೊಟ್ಟ ದಿಟ್ಟ ಮಹಿಳೆ ಇಂದಿರಾಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಬಣ್ಣಿಸಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಕಷ್ಟ ಕಾಲದಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಇಂದಿರಾಗಾಂಧಿ ಅವರನ್ನು ದೇಶ ಎಂದಿಗೂ ಮರೆಯುವುದಿಲ್ಲ. ಬಡವರಿಗಾಗಿ ಅನೇಕ ಯೋಜನೆ ನೀಡಿದ ಇಂದಿರಾಗಾಂಧಿ ದೇಶದ ಐಕ್ಯತೆಗಾಗಿ ಪ್ರಾಣ ತ್ಯಾಗ ಮಾಡಿದರು. ದೇಶ ವಿಭಜನೆಗಾಗಿ ಸಿಖ್ಖರು ಹೋರಾಟ ನಡೆಸಿದ ಸಂದರ್ಭದಲ್ಲಿ ಪಂಜಾಬ್ನ ಸ್ವರ್ಣಮಂದಿರದಲ್ಲಿ ಅಡಗಿಕೊಂಡಿದ್ದ ಉಗ್ರರ ಬ್ಲೂಸ್ಟಾರ್ ಆಪರೇಷನ್ ಮೂಲಕ ಸದೆಬಡಿದ ಕಾರಣಕ್ಕಾಗಿ ಅಂಗರಕ್ಷಕರಿಂದಲೆ ಹತ್ಯೆಗೀಡಾದರು. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಅಪ ಪ್ರಚಾರದಲ್ಲಿ ತೊಡಗಿರುವುದು ಸುಳ್ಳು ಎಂದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮಾಂಜನೇಯಲು ಮಾತನಾಡಿ, ಕಾರ್ಯಕರ್ತರೆ ನಿಜವಾಗಿಯೂ ಪಕ್ಷಕ್ಕೆ ಬಲ. ಪಕ್ಷಕ್ಕೆ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವುದು ಮುಖ್ಯವಲ್ಲ. ನಿಷ್ಟೆಯಿಂದ ಯಾರು ಪಕ್ಷಕ್ಕೆ ದುಡಿಯುತ್ತಾರೋ ಅಂತಹವರಿಗೆ ಒಂದಲ್ಲ ಒಂದು ದಿನ ಅಧಿಕಾರ ಸಿಗುತ್ತದೆ. ಅದಕ್ಕಾಗಿ ಪಕ್ಷದ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ, ಇಂದಿರಾಗಾಂಧಿ ವಿಶ್ವ ಕಂಡ ಶ್ರೇಷ್ಟ, ದಿಟ್ಟ ಮಹಿಳೆ. ಬಡವರಿಗಾಗಿ ಅನೇಕ ಕಾರ್ಯಕ್ರಮ ಜಾರಿಗೆ ತಂದರು. ಹದಿನೇಳು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಅವರು ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವನು ಬ್ಯಾಂಕ್ನಲ್ಲಿ ವ್ಯವಹರಿಸುವಂತ ಅವಕಾಶ ಕಲ್ಪಿಸಿದರು. ಇಂದಿರಾಗಾಂಧಿ ಆಶಯದಂತೆ ರಾಜ್ಯ ಸರ್ಕಾರ ಐದು ಉಚಿತ ಗ್ಯಾರೆಂಟಿಗಳನ್ನು ಜನತೆಗೆ ನೀಡಿದೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್ ಮಾತನಾಡಿ, ಕಾಂಗ್ರೆಸ್ಗೆ ತ್ಯಾಗ ಬಲಿದಾನದ ಇತಿಹಾಸವಿದೆ. ಇಂದಿರಾಗಾಂಧಿಯ ಹಾದಿಯಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಇಂದಿರಾಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ಬಡವರ ಬಗ್ಗೆ ಅಪಾರವಾದ ಕಾಳಜಿಯಿಟ್ಟುಕೊಂಡಿದ್ದ ಇಂದಿರಾಗಾಂಧಿ ಅಂಗರಕ್ಷಕರಿಂದಲೆ ಹತರಾದರು. ಕಾಂಗ್ರೆಸ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಕೋಮುವಾದಿ ಬಿಜೆಪಿ ಯಾರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿಲ್ಲ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ, ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವುಗಳಲ್ಲಿ ಗರೀಭಿ ಹಠಾವೋ ಮುಖ್ಯವಾದುದು. ಬಡವನು ಬ್ಯಾಂಕ್ನಲ್ಲಿ ವ್ಯವಹರಿಸುವಂತೆ ಮಾಡಿದ ಕೀರ್ತಿ ಇಂದಿರಾಗಾಂಧಿಗೆ ಸಲ್ಲುತ್ತದೆ. ಬರಗಾಲದಲ್ಲಿ ವಿದೇಶದಿಂದ ಕೆಂಪು ಜೋಳ, ಗೋಧಿ ತರಿಸಿಕೊಂಡು ಬಡವರ ಹೊಟ್ಟೆ ತುಂಬಿಸಿದರು. ಉಳುವವನೆ ಭೂಮಿಯ ಒಡೆಯ ಎನ್ನುವ ಕಾಯಿದೆ ಜಾರಿಗೆ ತಂದು ಬಡವನೂ ಭೂ ಮಾಲೀಕನಾಗುವಂತೆ ಮಾಡಿದ್ದು ಇಂದಿರಾಗಾಂಧಿ ಎಂದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಗ್ಯಾರೆಂಟಿ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಆರ್.ಪ್ರಕಾಶ್, ಅಸಂಘಟಿತ ಕಾರ್ಮಿಕ ವಿಭಾಗದ ಜಂಟಿ ಕಾರ್ಯದರ್ಶಿ ಪರ್ವಿನ್, ಭಾಗ್ಯಮ್ಮ, ಬಸಮ್ಮ, ನಾಗರಾಜ್ ಪೈಲೇಟ್, ಜಿ.ವಿ.ಮಧುಗೌಡ, ಹೆಚ್.ಶಬ್ಬೀರ್ಭಾಷ, ದೇವರಾಜ್, ಪರಮೇಶ್ವರಪ್ಪ ಇದ್ದರು.