ಭಾನುವಾರ ಆರ್.ಟಿ.ನಗರ ಪಾಂಚಜನ್ಯ ಸಭಾಂಗಣದಲ್ಲಿ ಶಿವರಾಮ ಕಾರಂತ ವೇದಿಕೆ ಮತ್ತು ವಿನಾಯಕ ದೇವಸ್ಥಾನ ಸಮಿತಿಯಿಂದ ನಡೆದ ‘ಗಂಗಾಧರ ಚಿತ್ತಾಲ-ನೂರರ ನೆನಪು’ ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾಶ್ಚಿಮಾತ್ಯ ಕಾವ್ಯ ಚಿಂತನೆಯು ದೇವರ ಅಸ್ತಿತ್ವದಲ್ಲಿ ನಂಬಿಕೆ ಇರಲಿ, ಇಲ್ಲದಿರಲಿ, ಬದುಕು ಕೊನೆಯವರೆಗೂ ಚೈತನ್ಯ ಶೀಲವಾಗಿರಬೇಕು. ಸಾಮಾಜಿಕವಾಗಿ ಎಲ್ಲರಿಗೂ ಒಳ್ಳೆಯದಾಗುವಂತೆ ಚೈತನ್ಯವನ್ನು ಬಳಸಬೇಕು ಎಂಬ ಪ್ರಭಾವವನ್ನು ಪೌರಾಹಿತ್ಯದ ಮೇಲೆ ಬೀರಿದೆ ಎಂದು ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ತಿಳಿಸಿದ್ದಾರೆ.
ಭಾನುವಾರ ಆರ್.ಟಿ.ನಗರ ಪಾಂಚಜನ್ಯ ಸಭಾಂಗಣದಲ್ಲಿ ಶಿವರಾಮ ಕಾರಂತ ವೇದಿಕೆ ಮತ್ತು ವಿನಾಯಕ ದೇವಸ್ಥಾನ ಸಮಿತಿಯಿಂದ ನಡೆದ ‘ಗಂಗಾಧರ ಚಿತ್ತಾಲ-ನೂರರ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಂಗಾಧರ ಚಿತ್ತಾಲರ ಕಾವ್ಯವವನ್ನು ಗಮನಿಸಿದಾಗ ಅವರಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರೋತ್ತರ ಕಾಲದಲ್ಲಿ ಸಾಮಾಜಿಕ, ರಾಜಕೀಯ ಚಿಂತನೆ ಬಲಿಷ್ಠವಾಗಿದ್ದಿದ್ದನ್ನು ಗುರುತಿಸಬಹುದು 1948ರಲ್ಲಿ ಅವರ ಮೊದಲ ಕವನ ಸಂಕಲನ ಬಂದಿತ್ತು. ಸ್ವಾತಂತ್ರ್ಯ ಬಂದಾಗ ಭ್ರಮನಿರಸನೆಯ ನೆಲೆ, ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತನೆಯ ಕಾಲದಲ್ಲಿ ಚಿತ್ತಾಲರ ವಿಚಾರಗಳು ಬಲಿಷ್ಠವಾಗಿದ್ದವು ಎಂದು ತಿಳಿಸಿದರು.
ಅವರು ಅನುಭಾವದ ನೆಲೆಯನ್ನು ಅವರು ದೈವ ನಂಬಿಕೆಯಿಂದ ಆಚರಿಸದೆ, ಭರವಸೆಯ ನಂಬಿಕೆಯಿಂದ ಅಳೆಯುತ್ತಾರೆ. ಪ್ರತಿಯೊಬ್ಬರಿಗೂ ಸಾವಿದೆ. ಆದರೆ ಜೀವ ಇರುವವರೆಗೆ ಜೀವನದ ಪ್ರತಿ ಹಂತದಲ್ಲೂ ಚಿಗುರುತ್ತದೆ ಎಂದು ಅವರು ಹೇಳುತ್ತಾರೆ ಎಂದು ಹೇಳಿದರು.
ಸಾಹಿತ್ಯದ ಚಿಂತನಾ ವಿಧಾನವು ತತ್ವ ಶಾಸ್ತ್ರಕ್ಕೆ ಸಂಬಂಧಿಸಿರುತ್ತದೆ. ತಾಂತ್ರಿಕತೆಯನ್ನು ಉಂಟುಮಾಡಿದ್ದು ತತ್ವಜ್ಞಾನ ಎಂಬುದನ್ನು ಮರೆಯಬಾರದು. ಪಾಶ್ಚಾತ್ಯದಲ್ಲಿ ಕಾವ್ಯ ಹೇಗೆ ಹುಟ್ಟುತ್ತದೆ ಎಂಬ ಚಿಂತನೆ ಹೆಚ್ಚು. ಹುಟ್ಟಿದ ಕಾವ್ಯ ಸಹೃದಯರಿಗೆ ಹೇಗೆ ತಲುಪುತ್ತದೆ ಎಂಬ ಚಿಂತನೆ ನಮ್ಮಲ್ಲಿ ಹೆಚ್ಚಾಗಿ ನಡೆಯುತ್ತದೆ. ಸಹೃದಯ ಚಿಂತನೆಯ ಮೂಲಕ ಕಾವ್ಯ ಹೇಗೆ ಹುಟ್ಟುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿದುಕೊಳ್ಳಲಾಗುತ್ತದೆ ಎಂದರು.
ಹಿರಿಯ ಲೇಖಕ ಆರ್.ಲಕ್ಷ್ಮೀನಾರಾಯಣ ಉಪನ್ಯಾಸ ನೀಡಿದರು. ವೇದಿಕೆಯ ಅಧ್ಯಕ್ಷರಾದ ದೀಪಾ ಫಡ್ಕೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.