‘ಅಂತ್ಯ ಸಂಸ್ಕಾರ ಧಾಮ’ ಎಂಬ ಕಲ್ಪನೆಯೊಂದಿಗೆ ಇಂದ್ರಾಳಿ ರುದ್ರಭೂಮಿಯಲ್ಲಿ 15 ಲಕ್ಷ ರು. ವೆಚ್ಚದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲು ಮತ್ತು ಪಾರ್ಥಿವ ಶರೀರದ ಅಭ್ಯಂಜನಕ್ಕೆ ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ, ಶೌಚಾಲಯ ಸಹಿತ ಸ್ನಾನಗೃಹ, ವ್ಯವಸ್ಥಾಪಕರಿಗೆ ಕೊಠಡಿ, ವಿದ್ಯುತ್ ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೆಲವೊಮ್ಮೆ ಜೀವನದಲ್ಲಾಗುವ ಅನಿರೀಕ್ಷಿತ ಘಟನೆಗಳು ಸಮಾಜ ಸೇವೆಗೆ ಪ್ರೇರೇಪಿಸುತ್ತವೆ. ಇದೇ ರೀತಿ ಉಡುಪಿ ತಾಲೂಕಿನ ಪೆರ್ಣಂಕಿಲ ಗ್ರಾಮದ ಬೆಲ್ಪತ್ರೆ ಗಣೇಶ್ ನಾಯಕ್ ಅವರು ತಮ್ಮ ಸಹೋದರ ದಿ.ಸಂಜೀವ್ ನಾಯಕ್ ಅವರ ಅಂತ್ಯಸಂಸ್ಕಾರದ ವೇಳೆ ಉಡುಪಿಯ ಇಂದ್ರಾಳಿಯಲ್ಲಿರುವ ರುದ್ರಭೂಮಿಯಲ್ಲಿನ ಕೊರತೆಗಳನ್ನು ಗಮನಿಸಿ, ಅದನ್ನು ಸರಿಪಡಿಸಲು ವಿಶೇಷ ಯೋಜನೆಯನ್ನು ಕಾರ್ಯಾಗತಗೊಳಿಸಿದ್ದಾರೆ.ಅದರಂತೆ ‘ಅಂತ್ಯ ಸಂಸ್ಕಾರ ಧಾಮ’ ಎಂಬ ಕಲ್ಪನೆಯೊಂದಿಗೆ ಇಂದ್ರಾಳಿ ರುದ್ರಭೂಮಿಯಲ್ಲಿ 15 ಲಕ್ಷ ರು. ವೆಚ್ಚದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲು ಮತ್ತು ಪಾರ್ಥಿವ ಶರೀರದ ಅಭ್ಯಂಜನಕ್ಕೆ ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ, ಶೌಚಾಲಯ ಸಹಿತ ಸ್ನಾನಗೃಹ, ವ್ಯವಸ್ಥಾಪಕರಿಗೆ ಕೊಠಡಿ, ವಿದ್ಯುತ್ ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುತ್ತಿದ್ದಾರೆ.
10ರಂದು ಲೋಕಾರ್ಪಣೆ:ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ದಶಮ ಸಂಭ್ರಮದ ಅಂಗವಾಗಿಯೂ ಗಣೇಶ್ ನಾಯಕ್ ಮತ್ತು ಶೈಲಾ ನಾಯಕ್ ದಂಪತಿ ತಮ್ಮ ವೈವಾಹಿಕ ಸ್ವರ್ಣ ಮಹೋತ್ಸವದ ವರ್ಷದ ಕೊಡುಗೆಯಾಗಿಯೂ ನಿರ್ಮಿಸಲ್ಪಟ್ಟ ಈ ಅಂತ್ಯಸಂಸ್ಕಾರ ಧಾಮದ ಲೋಕಾರ್ಪಣೆ ಸಮಾರಂಭ ಡಿ.10ರಂದು ಬೆಳಗ್ಗೆ 11 ಗಂಟೆಗೆ ನೆರವೇರಲಿದೆ.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ನಗರಸಭಾಧ್ಯಕ್ಷ ಪ್ರಭಾಕರ್ ಪೂಜಾರಿ, ರೋಟರಿ ಪ್ರಮುಖರಾದ ಸಿಎ ದೇವಾನಂದ್ ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.