ತಲೆನೋವಾದ ಕೈಗಾರಿಕಾ ತ್ಯಾಜ್ಯ ವಿಲೇವಾರಿ!

KannadaprabhaNewsNetwork |  
Published : May 14, 2025, 01:46 AM IST
12ಡಿಡಬ್ಲೂಡಿ6ಕೈಗಾರಿಕಾ ತಾಜ್ಯ ವಿಲೇವಾರಿ ಅಥವಾ ನಿರ್ವಹಣಾ ಘಟಕ ಇಲ್ಲದಿರುವ ಕಾರಣ ರಸ್ತೆ ಬದಿಯಲ್ಲಿ ಹಾಕಿರುವ ತಾಜ್ಯ. | Kannada Prabha

ಸಾರಾಂಶ

ಪ್ರತಿಯೊಂದು ಕೈಗಾರಿಕೆಗಳಲ್ಲಿ ಸಿದ್ಧ ವಸ್ತುಗಳ ಉತ್ಪಾದನೆಯೊಂದಿಗೆ ತ್ಯಾಜ್ಯವೂ ಉತ್ಪಾದನೆ ಆಗುವುದು ಸಾಮಾನ್ಯ. ಉತ್ಪಾದನಾ ವಸ್ತುಗಳು ಮಾರಾಟವಾಗಿ ಹೋಗುತ್ತವೆ. ಅಂತೆಯೇ ತ್ಯಾಜ್ಯವನ್ನು ಅಷ್ಟೇ ಜತನದಿಂದ ವಿಲೇವಾರಿ ಮಾಡುವುದು ಕೈಗಾರಿಕೋದ್ಯಮಿಗಳ ಕರ್ತವ್ಯ. ಆದರೆ, ತ್ಯಾಜ್ಯ ವಿಲೇವಾರಿ ಅಥವಾ ನಿರ್ವಹಿಸಲು ಬೇಲೂರಿನಲ್ಲಿ ಯಾವುದೇ ತಂತ್ರಜ್ಞಾನ ಅಥವಾ ವ್ಯವಸ್ಥೆಯೇ ಇಲ್ಲದಿರುವುದು ಬೇಸರದ ಸಂಗತಿ.

ಬಸವರಾಜ ಹಿರೇಮಠ

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿಯೇ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಬೇಲೂರು ಕೈಗಾರಿಕಾ ಪ್ರದೇಶವು ಹತ್ತಾರು ಮೂಲಭೂತ ಸೌಕರ್ಯಗಳಿಂದ ನಲಗುತ್ತಿದೆ. ಅದರಲ್ಲೂ ಕೈಗಾರಿಕೆಗಳಿಂದ ಹೊರ ಬಂದ ತ್ಯಾಜ್ಯವನ್ನು ವಿಲೇವಾರಿ ಮಾಡುವುದೇ ಕೈಗಾರಿಕೋದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪ್ರತಿಯೊಂದು ಕೈಗಾರಿಕೆಗಳಲ್ಲಿ ಸಿದ್ಧ ವಸ್ತುಗಳ ಉತ್ಪಾದನೆಯೊಂದಿಗೆ ತ್ಯಾಜ್ಯವೂ ಉತ್ಪಾದನೆ ಆಗುವುದು ಸಾಮಾನ್ಯ. ಉತ್ಪಾದನಾ ವಸ್ತುಗಳು ಮಾರಾಟವಾಗಿ ಹೋಗುತ್ತವೆ. ಅಂತೆಯೇ ತ್ಯಾಜ್ಯವನ್ನು ಅಷ್ಟೇ ಜತನದಿಂದ ವಿಲೇವಾರಿ ಮಾಡುವುದು ಕೈಗಾರಿಕೋದ್ಯಮಿಗಳ ಕರ್ತವ್ಯ. ಆದರೆ, ತ್ಯಾಜ್ಯ ವಿಲೇವಾರಿ ಅಥವಾ ನಿರ್ವಹಿಸಲು ಬೇಲೂರಿನಲ್ಲಿ ಯಾವುದೇ ತಂತ್ರಜ್ಞಾನ ಅಥವಾ ವ್ಯವಸ್ಥೆಯೇ ಇಲ್ಲದಿರುವುದು ಬೇಸರದ ಸಂಗತಿ.

ನಿರ್ವಹಣಾ ಘಟಕವಿಲ್ಲ: ಬೇಲೂರು ಕೈಗಾರಿಕಾ ಪ್ರದೇಶದಿಂದ ಹೊರ ಬರುವ ತ್ಯಾಜ್ಯವನ್ನು ನಿರ್ವಹಣೆ ಮಾಡಲು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಇಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವಾಗಲೇ ಬರೋಬ್ಬರಿ 30 ಎಕರೆ ಜಾಗವನ್ನು ಮೀಸಲು ಇಟ್ಟಿದೆ. ದುರಂತದ ಸಂಗತಿ ಏನೆಂದರೆ, ಅಲ್ಲಿ ನಿರ್ವಹಣಾ ಘಟಕ ಸ್ಥಾಪಿಸದೇ ಇರುವುದು.

ಅಪಾಯಕ್ಕೆ ದಾರಿ: ಮೊದಲು ಬೇಲೂರು ಕೈಗಾರಿಕಾ ಪ್ರದೇಶದ 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳಿದ್ದು, ಇದೀಗ ಬೇಲೂರಿಗೆ ಹೊಂದಿಕೊಂಡು ಐದಾರು ವರ್ಷಗಳಲ್ಲಿ ಮುಮ್ಮಿಗಟ್ಟಿ ಹಾಗೂ ಕೋಟೂರು ಕೈಗಾರಿಕಾ ಪ್ರದೇಶ ಸಹ ಸ್ಥಾಪನೆಯಾಗಿದ್ದು, 500ಕ್ಕೂ ಹೆಚ್ಚು ಕೈಗಾರಿಕೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಯಾವ ಕೈಗಾರಿಕೆಗಳು ಸಹ ತ್ಯಾಜ್ಯವನ್ನು ನಿರ್ವಹಿಸಲಾಗದೇ ಎಲ್ಲೆಂದರಲ್ಲಿ ತಾಜ್ಯವನ್ನು ಎಸೆದು ಹೋಗಲಾಗುತ್ತಿವೆ. ತ್ಯಾಜ್ಯ ನಿರ್ವಹಣೆ ಇಲ್ಲದ ಹಿನ್ನೆಲೆಯಲ್ಲಿ ಅದೆಷ್ಟೋ ಕಂಪನಿಗಳು ಇಲ್ಲಿ ಬರುತ್ತಿಲ್ಲ. ಜತೆಗೆ ಆಗಾಗ ಈ ತಾಜ್ಯಕ್ಕೆ ಬೆಂಕಿ ಹೊತ್ತುಕೊಳ್ಳುವುದರಿಂದ ಯಾವಾಗ ಯಾವ ಅಪಾಯ ಕಾದಿದಿಯೋ ಗೊತ್ತಿಲ್ಲ. ತ್ಯಾಜ್ಯ ಎಸೆಯುವ ಪ್ರದೇಶದಲ್ಲಿ ಬಿಪಿಸಿಎಲ್‌, ಎಚ್‌ಪಿಸಿಎಲ್‌ ಘಟಕಗಳಿದ್ದು, ಒಂದು ವೇಳೆ ಬೆಂಕಿ ಅನಾಹುತ ಉಂಟಾದರೆ ಇಡೀ ಧಾರವಾಡ ನಗರಕ್ಕೆ ಹಾನಿಯಾಗುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಕೂಡಲೇ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಬೇಕು ಎಂಬುದು ಧಾರವಾಡ ಇಂಡಿಸ್ಟ್ರೀಯಲ್‌ ಗ್ರೋಥ್‌ ಸೆಂಟರ್‌ನ ಆಗ್ರಹ.

ನೀರು, ವಿದ್ಯುತ್‌ ಕೊರತೆ: ಪ್ರತಿಯೊಂದು ಕೈಗಾರಿಕೆಯ ಶುರುವಾತಿಗೆ ನೀರು ಹಾಗೂ ವಿದ್ಯುತ್‌ ಬಗ್ಗೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಪಡೆಯುವ ಕೆಐಎಡಿಬಿ ಅಷ್ಟು ಪ್ರಮಾಣದಲ್ಲಿ ನೀರು, ವಿದ್ಯುತ್‌ ನೀಡುತ್ತಿಲ್ಲ. ಕೈಗಾರಿಕೆಗಳನ್ನು ನಡೆಸಲು ಅಗತ್ಯವಾಗಿಬೇಕಾದ ನೀರು, ವಿದ್ಯುತ್‌ ಕೊರತೆಯಾಗುತ್ತಿದ್ದು ಕೆಐಎಡಿಬಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಳೆದ 23 ದಿನಗಳಿಂದ ಬೇಲೂರಿನಲ್ಲಿ ನೀರಿನ ಸಮಸ್ಯೆಯಾಗಿದೆ. ಸ್ಪಂದನೆ ಇಲ್ಲ. ಇನ್ನು, ಪ್ರತ್ಯೇಕ ವಿದ್ಯುತ್‌ ಬೇಕಾದಲ್ಲಿ ಪ್ರತ್ಯೇಕ ಟ್ರಾನ್ಸಫಾರ್ಮರ್‌ ಹಾಕಿಕೊಳ್ಳಿ ಎನ್ನುತ್ತಿದ್ದಾರೆ. ಇದರಿಂದ ಆರ್ಥಿಕ ಹೊರೆಯಾಗಲಿದೆ ಎಂದು ಉದ್ಯಮಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಇದರೊಂದಿಗೆ ಗಟಾರುಗಳು ಒಡೆದು ಹೋಗಿವೆ. ರಸ್ತೆಗಳು ಹಾಳಾಗಿವೆ. ಮಳೆಗಾಲದಲ್ಲಿ ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ. ಬೇಲೂರಿನ ವಿವಿಧ ಕೈಗಾರಿಕೆಗಳಿಗೆ ಬರುವ ಕಾರ್ಮಿಕರಿಗೆ ಬಸ್ಸಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಹೀಗೆ ಬೇಲೂರು ಕೈಗಾರಿಕಾ ಪ್ರದೇಶ ಇಲ್ಲಗಳ ನಡುವೆ ನಡೆಯುತ್ತಿದ್ದು, ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂಬುದು ಇಲ್ಲಿಯ ಕೈಗಾರಿಕೋದ್ಯಮಿಗಳ ಆಗ್ರಹ.

ನಿರ್ವಹಣಾ ಘಟಕ ಸ್ಥಾಪನೆಯಾಗಲಿ: ಬಣ್ಣಕ್ಕೆ ಬಳಸುವ ರೆಸಿನ್ಸ್‌ ತಯಾರಿಸುವ ಕಂಪನಿ ನಮ್ಮದಾಗಿದ್ದು, ತಾಜ್ಯ ವಿಲೇವಾರಿಯನ್ನು ಇಷ್ಟು ವರ್ಷ ಕಾಲ ತುಮಕೂರಿನ ತಾಜ್ಯ ನಿರ್ವಹಣಾ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ರಾಯಚೂರು ಕೈಗಾರಿಕಾ ಪ್ರದೇಶದಲ್ಲಿರುವ ನಿರ್ವಹಣಾ ಘಟಕಕ್ಕೆ ಕಳುಹಿಸಲಾಗುತ್ತಿದೆ. ಬೇಲೂರಿನಲ್ಲಿಯೇ 30 ಎಕರೆ ಜಾಗವಿದ್ದು, ನಿರ್ವಹಣಾ ಘಟಕ ಸ್ಥಾಪಿಸಲು ಮೀನಮೇಷ ಏತಕ್ಕೆ ತಿಳಿಯುತ್ತಿಲ್ಲ?. ಎಂದು ಕೈಗಾರಿಕೋದ್ಯಮಿ ರವಿ ದುದುಗಿ ತಿಳಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ