ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯ ಮಹಾಲಿಂಗಪುರ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ರಬಕವಿಯ ಬಿ.ಎಂ.ಮಟ್ಟಿಕಲ್ಲಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-೪೮ ಕಾರ್ಯಕ್ರಮದಲ್ಲಿ ಜಮಖಂಡಿಯ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿಯವರ ಭವ್ಯ ಬದುಕಿನ ದಿವ್ಯ ಸೂತ್ರಗಳು ಕೃತಿ ಅವಲೋಕಿಸಿ ಮಾತನಾಡಿ, ಮನುಷ್ಯನಿಗೆ ವಿವೇಕದಿಂದ ಪಂಚೇಂದ್ರೀಯಗಳ ನಿಯಂತ್ರಣ ಸಾಧ್ಯವಿದೆ. ಚಂಚಲ ಮನಸ್ಸನ್ನು ನಿಯಂತ್ರಿಸಬೇಕು. ಇತಿಮಿತಿಗಳೊಂದಿಗೆ ನಮ್ಮನ್ನು ನಾವು ಸ್ವಯಂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮನುಷ್ಯನ ಜಡತ್ವ ಅಳಿಯಬೇಕು, ಚೈತನ್ಯ ಅರಳಬೇಕು ಎಂದು ಹೇಳಿದರು.
ಬಿ.ಎಂ. ಮಟ್ಟಿಕಲ್ಲಿ ಅಧ್ಯಕ್ಷತೆ ವಹಿಸಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕಸಾಪ ಕಾರ್ಯಚಟುವಟಿಕೆ, ಪುಸ್ತಕಾವಲೋಕನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಪರಿಷತ್ತಿನ ಕ್ರಿಯಾಶೀಲ ನಡೆಗೆ ಎಲ್ಲರ ಸಹಕಾರ ಸದಾವಿರುವುದೆಂದರು.ನಂತರ ನಡೆದ ಸಂವಾದದಲ್ಲಿ ಮಹಾದೇವ ಕವಿಶೆಟ್ಟಿ, ಎಂ.ಎಸ್. ಬದಾಮಿ, ಡಾ. ಬಿ.ಎನ್. ಬಾಗಲಕೋಟ, ಬಸವರಾಜ ದುಂಬಾಳೆ ಪ್ರಶ್ನೆಗಳನ್ನು ಕೇಳಿದಾಗ ಕೃತಿಕಾರರಾದ ಪ್ರೊ. ಬಸವರಾಜ ಕಡ್ಡಿಯವರು ಉತ್ತರಿಸಿದರು. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು. ಯಾವಾಗಲು ಆನಂದದಿಂದ ಇರುವುದೇ ಪರಮಾನಂದ ಎಂದರು.
ತೇರದಾಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ ಅತಿಥಿಗಳಾಗಿ ಆಗಮಿಸಿದ್ದರು. ಶಿವಾನಂದ ಬಾಗಲಕೋಟಮಠ, ಮೃತ್ಯುಂಜಯ ರಾಮದುರ್ಗ, ಇಂದುಧರ ಬೆಳಗಲಿ, ಸದಾಶಿವ ದೊಡ್ಡಪ್ಪಗೋಳ, ಮಲ್ಲೇಶಪ್ಪ ಕುಚನೂರ, ಉದ್ಯಮಿ ಬಸವರಾಜ ದಲಾಲ, ಈರಯ್ಯ ಹಿರೇಮಠ, ಯಶವಂತ ವಾಘ್ಮೋರೆ, ಈರಣ್ಣ ಗಣಮುಖಿ ಸೇರಿದಂತೆ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ಕಲಾವಿದರು, ಕಸಾಪ ಪದಾಧಿಕಾರಿಗಳು ಭಾಗವಹಿಸಿದ್ದರು.
ಮೌನಾಚರಣೆ : ಕಾರ್ಯಕ್ರಮದ ಮಧ್ಯೆ ಜಮಖಂಡಿಯ ಹಿರಿಯ ಸಾಹಿತಿಗಳು, ಜಾನಪದ ವಿದ್ವಾಂಸರೂ ಆದ ಡಾ. ಸಂಗಮೇಶ ಬಿರಾದಾರ ಅವರ ನಿಧನಕ್ಕೆ ಪುಸ್ತಕಾವಲೋಕನ-೪೮ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನವಾಚರಿಸಿ ಸಂತಾಪ ಸೂಚಿಸಿ¸ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಜಮಖಂಡಿ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ, ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಅವರ ವ್ಯಕ್ತಿತ್ವ, ಅವರ ಸಾಹಿತ್ಯ ಸೇವೆಯನ್ನು ಕುರಿತು ಸ್ಮರಿಸಿ, ಕಾರ್ಯಕ್ರಮ ಮೋಟಕುಗೊಳೊಸಲಾಯಿತು.