ಅನಾದಿ ಕಾಲದಿಂದಲೂ ಕನ್ನಡಕ್ಕೆ ಸಂಸ್ಕೃತದ ಪ್ರಭಾವ: ಡಾ.ಪರಮಶಿವಮೂರ್ತಿ

KannadaprabhaNewsNetwork |  
Published : Mar 02, 2024, 01:51 AM IST
ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. | Kannada Prabha

ಸಾರಾಂಶ

ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗದ ವತಿಯಿಂದ ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕನ್ನಡಕ್ಕೆ ಸಂಸ್ಕೃತದ ಪ್ರಭಾವ ಅನಾದಿ ಕಾಲದಿಂದಲೂ ಆಗಿದೆ. ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಕನ್ನಡ ಸಾಹಿತ್ಯದ ಪ್ರತಿಯೊಂದು ವಿಚಾರದಲ್ಲೂ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಂಪಿ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗದ ವತಿಯಿಂದ ನಡೆದ ಶ್ರೀ ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾಷಾಂತರ ಪ್ರಕ್ರಿಯೆ ಇಂದು ಜೀವನದ ಎಲ್ಲ ಸಂದರ್ಭಗಳಲ್ಲಿ ನಾವು ಮಾಡಿಕೊಳ್ಳುತ್ತೇವೆ. ಅರ್ಥವಾಗದ ಮತ್ತು ಅರ್ಥವಾಗುವ ಭಾಷೆಗಳ ನಡುವೆ ಮಾತ್ರ ಅನುವಾದಗಳಲ್ಲ, ನಮಗೆ ತಿಳಿದಿರುವ ಭಾಷೆಯಾದರೂ ಮಾನಸಿಕವಾಗಿ ಅನುವಾದಗಳು ಬೇಕಾಗುತ್ತವೆ. ಯಾಕೆಂದರೆ ಇಂದು ಸ್ಥಳೀಯ ಭಾಷೆಗಳಲ್ಲೂ ಸಾಕಷ್ಟು ವ್ಯತ್ಯಾಸಗಳು ಇರುವುದರಿಂದ ಅನುವಾದಗಳು ಮಾತ್ರವಲ್ಲ ಪರಸ್ಪರ ಭಾಷಿಕ ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದು ಅಗತ್ಯವೆನಿಸುತ್ತದೆ ಎಂದರು.

ದತ್ತಿ ಉಪನ್ಯಾಸವನ್ನು ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕ, ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಅವರು ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ ಎಂಬ ವಿಚಾರವಾಗಿ ನೀಡಿದರು. ದಂಡಿ, ಬಾಮಹ, ಕಾಳಿದಾಸ, ಭವಭೂತಿ ಮುಂತಾದ ಸಂಸ್ಕೃತ ಕವಿಗಳಿಂದ ಕನ್ನಡದ ಕವಿಗಳು ಪಡೆದುಕೊಂಡ ಎಲ್ಲ ಅಂಶಗಳನ್ನು ವಿವರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ ವಹಿಸಿಕೊಂಡು, ಇಂದು ಜಾಗತಿಕವಾಗಿ ಆಧುನಿಕ ಅಂಶಗಳು ಪ್ರಬಲವಾಗಿ ಬೆಳೆದರೂ ಪರಸ್ಪರ ಭಾಷೆಗಳ ಕೊಡುಗೆಯನ್ನು ಸ್ಮರಿಸಬೇಕು. ಇಂದು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆ ಸಂಸ್ಕೃತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಹಲವು ಪದಗಳು ಕನ್ನಡದಿಂದ ಮಾಯವಾದರೂ ಸೇರ್ಪಡೆಗಳು ಆಗುತ್ತಲೇ ಇವೆ ಎಂದರು.

ದತ್ತಿನಿಧಿ ಸಂಸ್ಥಾಪಕ ಪ್ರೊ. ಎ.ವಿ.ನಾವಡರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಆಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮೋಹನ ಕುಂಟಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಎಸ್.ಆರ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಪ್ರೊ.ನಾಗಭೂಷಣ ವಂದಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ