ನೇಹಾ ಹಿರೇಮಠ ಹತ್ಯೆ ಬಳಿಕ ಮುಖ್ಯಮಂತ್ರಿ ಭೇಟಿಯಾಗಿದ್ದ ವೇಳೆ ತ್ವರಿತ ನ್ಯಾಯಾಲಯ ರಚಿಸಿ ನಾಲ್ಕು ತಿಂಗಳೊಳಗಾಗಿ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, 9 ತಿಂಗಳು ಕಳೆದರೂ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಿಲ್ಲ ಎಂದು ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಹುಬ್ಬಳ್ಳಿ:
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಪ್ರಭಾವಿ ಶಾಸಕರೋರ್ವರ ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ 10 ದಿನಗಳ ಒಳಗೆ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ಹತ್ಯೆ ಬಳಿಕೆ ಮುಖ್ಯಮಂತ್ರಿ ಭೇಟಿಯಾಗಿದ್ದ ವೇಳೆ ತ್ವರಿತ ನ್ಯಾಯಾಲಯ ರಚಿಸಿ ನಾಲ್ಕು ತಿಂಗಳೊಳಗಾಗಿ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, 9 ತಿಂಗಳು ಕಳೆದರೂ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಿಲ್ಲ. ಕೂಡಲೇ ತ್ವರಿತ ನ್ಯಾಯಾಲಯ ರಚಿಸಬೇಕು. ಅಂಜುಮನ್ ಇಸ್ಲಾಂ ಹಾಗೂ ಮುಸ್ಲಿಂ ಮುಖಂಡರು ಕೊಲೆಗಡುಕನ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಓರ್ವ ಮುಸ್ಲಿಂ, ಓರ್ವ ಹಿಂದು ವಕೀಲರು ಆರೋಪಿ ಪರ ವಕಾಲತ್ತು ವಹಿಸಿದ್ದಾರೆ. ಈ ಕೂಡಲೇ ಇವರನ್ನು ಬಹಿಷ್ಕರಿಸಬೇಕು. ಇಲ್ಲದಿದ್ದರೆ ವಕೀಲರ ಮನೆಯ ಎದುರು ಪ್ರತಿಭಟನೆ ನಡೆಸಲಾಗುವುದು. ಬಿವಿಬಿ ಕಾಲೇಜಿನಿಂದ ನ್ಯಾಯಾಲಯದವರೆಗೆ ಮೌನ ಪ್ರತಿಭಟನೆ ಮಾಡುತ್ತೇವೆ ಎಂದರು.
42 ಲವ್ ಜಿಹಾದ್:
ನೇಹಾ ಹತ್ಯೆ ಬಳಿಕ ರಾಜ್ಯದಲ್ಲಿ 42 ಲವ್ ಜಿಹಾದ್ ಪ್ರಕರಣಗಳು ನಡೆದಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕು ಅಧ್ಯಕ್ಷ ಬಸು ದುರ್ಗದ ಸೇರಿದಂತೆ ಹಲವರಿದ್ದರು.
ವಿರೋಧಿಗಳ ಕೈವಾಡ?:
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ವಿರೋಧಿಗಳ ಕೈವಾಡವಿರುವ ಶಂಕೆಯಿದೆ. ಈ ಕುರಿತು ಸಮಗ್ರ ತನಿಖೆಯಾಗಲಿ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.