ಸಾಲೂರು ಮಠದಲ್ಲಿ ನೂರಾರು ದೇವರ ಗುಡ್ಡರಿಗೆ ದೀಕ್ಷೆ

KannadaprabhaNewsNetwork | Published : Feb 25, 2025 12:47 AM

ಸಾರಾಂಶ

ಹನೂರು ಮಲೆಮಾದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಶ್ರೀಗಳಿಂದ ನೂರಾರು ದೇವರ ಗುಡ್ಡರು ದೀಕ್ಷೆ ಪಡೆದು ಶ್ರೀಗಳಿಂದ ಆಶೀರ್ವಚನ ಪಡೆದರು.

ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಶ್ರೀ ಸಾಲೂರು ಬೃಹನ್ಮಠದಲ್ಲಿ ನೂರಾರು ದೇವರಗುಡ್ಡ ಭಕ್ತರಿಗೆ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿಜೀ ದೀಕ್ಷೆ ನೀಡಿ ಉಪದೇಶಿಸಿ ಆಶೀರ್ವಾದ ಮಾಡಿದರು. ಬಳಿಕ ದೇವರ ಗುಡ್ಡರ ಪರಂಪರೆ ಮತ್ತು ಸಂಪ್ರದಾಯದ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಅನಾದಿಕಾಲದಿಂದಲೂ ಶ್ರೀಮಠದಲ್ಲಿ ದೇವರಗುಡ್ಡ ದೀಕ್ಷೆ ಪಡೆಯುವುದು ವಾಡಿಕೆ ಮತ್ತು ಸಂಪ್ರದಾಯವಾಗಿದೆ. ಉನ್ನತಾಧಿಕಾರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಜಾತಿ-ಧರ್ಮ ಮುಕ್ತವಾಗಿ ದೀಕ್ಷೆ ಪಡೆಯುತ್ತಾರೆ. ಮಹದೇಶ್ವರರ ಸಂಕಲ್ಪದಂತೆ ಎಲ್ಲರೂ ಸಮಾನರು ಅನ್ನುವ ಸಂಕೇತವೂ ಈ ಪದ್ಧತಿಯಾಗಿದೆ ಎಂದರು.

ದೇವರ ಗುಡ್ಡರ ಪರಿಕಲ್ಪನೆ ಬಹಳ ವಿಶಿಷ್ಟವಾದದ್ದು, ದೇವರಗುಡ್ಡರ ದೀಕ್ಷೆ ಎಂದರೆ ಲಿಂಗಧಾರಣೆಯಲ್ಲ, ರುದ್ರಾಕ್ಷಿಧಾರಣೆ ಜತೆಗೆ ಮಹದೇಶ್ವರರ ಕಾಯಕ ಮತ್ತು ಆಚಾರದ ಶಿವದೀಕ್ಷೆಯಾಗಿರುತ್ತದೆ. ಅಂದರೆ ಇವರು ಒಂದು ರೀತಿಯಲ್ಲಿ ಮಹದೇಶ್ವರರ ವಿಚಾರಗಳನ್ನು, ತತ್ವಗಳನ್ನು ಎಲ್ಲಾ ಊರು ಕೇರಿಗಳಲ್ಲಿ ಸುತ್ತಾಡಿ ಪ್ರಚಾರ ಮಾಡುತ್ತಾರೆ. ಬಗಲಲ್ಲಿ ಬೆತ್ತ, ಹೆಗಲಿಗೆ ಜೋಳಿಗೆ ಹಾಗೂ ಕೈಯಲ್ಲಿ ಕಂಸಾಳೆಯನ್ನು ಹಿಡಿದು ಊರೂರು ಬಿಕ್ಷಾಟನೆಗೆ ತಿರುಗಿ ಪ್ರಚಾರ ಮಾಡುತ್ತಾರೆ. ಊರೂರು ಬಿಕ್ಷಾಟನೆಗೆ ತಿರುಗಿ ಮಹದೇಶ್ವರ ಕಾವ್ಯವನ್ನು ಹಾಡುತ್ತಾ ಪ್ರಚಾರ ಮಾಡುತ್ತಾರೆ ಎಂದರು.

ಸೋಮವಾರ ಮತ್ತು ಶುಕ್ರವಾರ ಸಾಮಾನ್ಯವಾಗಿ ಗುಡ್ಡನಿಗೆ ದೀಕ್ಷೆ ನೀಡಲಾಗುತ್ತದೆ. ಮಹದೇಶ್ವರ ಒಕ್ಕಲಿನ ಯಾವುದೇ ಜನಾಂಗದವರಾದರೂ ಕೂಡ ಗುಡ್ಡ ದೀಕ್ಷೆ ಪಡೆಯಬಹುದು. ಈ ದೀಕ್ಷೆ ಪಡೆದವರು ಸಾಮಾನ್ಯವಾಗಿ ದುಶ್ಚಟಗಳಿಂದ ದೂರವಾಗಿದ್ದುಕೊಂಡು ಸನ್ಮಾರ್ಗಿಗಳಾಗಿ ಬಾಳುವರು. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯ ಹಾಗೂ ಯೌವನದಲ್ಲಿ ಗುಡ್ಡರನ್ನಾಗಿ ಮಾಡುತ್ತಾರೆ. ಒಂದು ದಿನದ ಸಂಪಾದನೆಯನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ಸಲ್ಲಿಸುವುದು ಇವರ ವಾಡಿಕೆಯಾಗಿದೆ ಎಂದರು.

ಪ್ರಸ್ತುತ ಮಹದೇಶ್ವರ ಕಾವ್ಯ ಜಗತ್ತಿನ ಪ್ರಮುಖ ಮಹಾಕಾವ್ಯಗಳಲ್ಲಿ ಒಂದೆದು ಗುರುತಿಸಲ್ಪಟ್ಟಿರುವುದಕ್ಕೆ ದೇವರ ಗುಡ್ಡರ ಕಾಣಿಕೆ ಅಮೋಘವಾದುದಾಗಿದೆ. ದೇವರ ಗುಡ್ಡರನ್ನು ಬಿಡಿಸುವುದು ಶ್ರೀ ಸಾಲೂರು ಮಠದಲ್ಲಿಯೇ. ಇಲ್ಲಿ ಪೀಠಾಧಿಪತಿಗಳು ದೇವರ ಗುಡ್ಡರಿಗೆ ದೀಕ್ಷೆಯನ್ನು ನೀಡಿ ಉಪದೇಶಿಸುತ್ತಾರೆ. ಅದರಂತೆ ಅವರು ಮಹದೇಶ್ವರರ ಕಾಯಕ- ದಾಸೋಹ ತತ್ವಗಳನ್ನು ಪಾಲಿಸಿಕೊಂಡು ಸಂಸ್ಕಾರಯುತರಾಗಿ ಬಾಳುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ನೂರಾರು ದೇವರ ಗುಡ್ಡರು ದೀಕ್ಷೆ ಪಡೆದು ಶಾಲೂರು ಶ್ರೀಗಳಿಂದ ಆಶೀರ್ವಚನ ಪಡೆದರು.

ದಾಸೋಹ ವ್ಯವಸ್ಥೆ:

ಸಾಲೂರು ಮಠದಲ್ಲಿ ಬರುವಂತ ಭಕ್ತಾದಿಗಳಿಗೆ ಹಾಗೂ ದೇವರ ಗುಡ್ಡರಿಗೆ ಶ್ರೀಮಠದಲ್ಲಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಶ್ರೀಮಠದ ಶ್ರೀಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಭಕ್ತರಿಗೆ ಪ್ರಸಾದ ಬಡಿಸುವ ಮೂಲಕ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

Share this article