ಹಿಪ್ಪರಗಿ ಬ್ಯಾರೇಜ್ ಎಲ್ಲ ನೂತನ ಗೇಟ್‌ಗಳ ಅಳವಡಿಸಿ: ಶಾಸಕ ಜಗದೀಶ ಗುಡಗುಂಟಿ

KannadaprabhaNewsNetwork |  
Published : Jan 20, 2026, 03:15 AM IST
ಹಿಪ್ಪರಗಿ ಬ್ಯಾರೇಜ್ ಬಳಿಯಲ್ಲಿ ಸೋಮವಾರದಂದು ಶಾಸಕ ಸಿದ್ದು ಸವದಿ ಸಾವಿರಾರು ರೈತರೊಡನೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

೧೬ ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನಿಂದ ಸತತ ನೀರು ಹೊರಹೋಗುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ನಿದ್ರೆಯಿಂದ ಏಳಲಿಲ್ಲ. ಬದಲಾಗಿ ವಿಜಯಪುರ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ನೀರಾವರಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇವಲ ೫೦ ಕಿಮೀ ಕ್ರಮಿಸಿ ಜಲಾಶಯ ವೀಕ್ಷಿಸದೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಎಂದಿನ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೧೬ ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನಿಂದ ಸತತ ನೀರು ಹೊರಹೋಗುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ನಿದ್ರೆಯಿಂದ ಏಳಲಿಲ್ಲ. ಬದಲಾಗಿ ವಿಜಯಪುರ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ನೀರಾವರಿ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇವಲ ೫೦ ಕಿಮೀ ಕ್ರಮಿಸಿ ಜಲಾಶಯ ವೀಕ್ಷಿಸದೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಎಂದಿನ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.ಹಿಪ್ಪರಗಿ ಜಲಾಶಯದ ಬಳಿ ಈ ಭಾಗದ ರೈತರು, ನಾಗರಿಕರು ಆಯೋಜಿಸಿದ್ದ ಪ್ರತಿಭಟನೆಯನ್ನಯನ್ನುದ್ದೇಶಿಸಿ ಮಾತನಾಡಿ, ಜಗತ್ತಿನ ಯಾವುದೇ ಜಲಾಶಯದ ಮೇಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ಹಿಪ್ಪರಗಿ ಬ್ಯಾರೇಜ್ ಮೇಲಿನ ರಸ್ತೆ ರಾಜ್ಯ ಹೆದ್ದಾರಿಯಂತೆ ಸದಾ ಗಿಜಿಗಿಡುತ್ತಿರುತ್ತದೆ. ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಸೇತುವೆ ಮೇಲೆ ಬಂದಾಗ ಉಯ್ಯಾಲೆಯಾಡುತ್ತದೆ. ಇದು ಸೇತುವೆ ಕ್ಷಮತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದ್ದು, ಯಾವುದೇ ಸಂದರ್ಭದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯಿದೆ ಎಂದು ಆರೋಪಿಸಿದರು.೨೦೦೯ರಲ್ಲಿ ಪರ್ಯಾಯವಾಗಿ ₹೧೦೦ ಕೋಟಿ ವೆಚ್ಚದಲ್ಲಿ ಆರಂಭಿಸಿದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ₹೬೦ಕೋಟಿ ಅನುದಾನ ಹಿಂದಿನ ಬಿಜೆಪಿ ಸರ್ಕಾರ ನೀಡಿತ್ತಾದರೂ ಪ್ರವಾಹ ಸಂದರ್ಭದಲ್ಲಿ ನೀರು ತುಂಬಿದ್ದರಿಂದ ಮತ್ತೆ ಹೆಚ್ಚುವರಿ ಅನುದಾನದಲ್ಲಿ ಹತ್ತು ಹೆಚ್ಚುವರಿ ಪಿಲ್ಲರ್‌ಗಳನ್ನು ನಿರ್ಮಿಸಿ ಕಾಮಗಾರಿ ನಡೆಸಲು ಮಂಜೂರಾತಿ ದೊರೆತಿದೆ. ಸದ್ಯದ ಸರ್ಕಾರ ಕಾಮಗಾರಿಗೆ ಮುಂದಾಗದ್ದರಿಂದ ರಸ್ತೆ ಸಹಿತ ಸೇತುವೆ ಕಾಮಗಾರಿ ಪಳಿಯುಳಿಕೆಯಂತೆ ಸ್ಥಗಿತಗೊಂಡಿದೆ ಎಂದು ದೂರಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ೧೬ ದಿನಗಳಿಂದ ಜಲಾಶಯದಲ್ಲಿನ ನೀರು ಸೋರಿಕೆ ನಿಂತಿಲ್ಲ. ಇದಕ್ಕೆ ಯಾವೊಬ್ಬ ಸಚಿವರೂ ಸ್ಪಂದಿಸುತ್ತಿಲ್ಲ. ೨೩ ವರ್ಷಗಳಿಂದ ಅವೇ ಗೇಟ್‌ಗಳು, ಸರಿಯಾದ ನಿರ್ವಹಣೆಯೂ ಇಲ್ಲದೆ ತೇಪೆ ಹಚ್ಚುವ ಮೂಲಕ ಮುಕ್ತಾಯಗೊಳಿಸಿದರೆ ನೀರು ಸಂಗ್ರಹಣೆ ಸಾಧ್ಯವಾಗದು. ಮಹಾ ಸರ್ಕಾರದಿಂದ ನೀರು ಬಿಡಿಸಿದರೂ ಶಿಥಿಲವಾದ ಗೇಟ್‌ಗಳು ತಾಳುವ ಸ್ಥಿತಿಯಲ್ಲಿಲ್ಲ. ಹೊಸ ಗೇಟ್‌ಗಳನ್ನು ಅಳವಡಿಸಿ, ಕ್ರೇನ್ ದುರಸ್ತಿಗೊಳಿಸಿದ ಬಳಿಕ ನೀರು ಸಂಗ್ರಹಣೆ ಸಾಧ್ಯವಿದೆ. ತಕ್ಷಣ ಬೇಸಿಗೆಯೊಳಗೆ ಜಲಾಶಯದ ಎಲ್ಲ ಗೇಟ್‌ ಅಳವಡಿಸಿ, ಮುಂದಿನ ಮಳೆಗಾಲಕ್ಕಾದರೂ ನೀರು ಸಂಗ್ರಹಿಸಲು ಸಮರೋಪಾದಿಯಲ್ಲಿ ಕಾರ್ಯ ಮಾಡಬೇಕು. ಡ್ಯಾಂನ ಗುತ್ತಿಗೆ ನೌಕರರಿಗೆ ಕಳೆದ ೧೦ ತಿಂಗಳ ವೇತನ ಪಾವತಿಸಬೇಕು. ಡ್ಯಾಂ ನಿರ್ವಹಣೆಯನ್ನು ಅಥಣಿ ವಿಭಾಗದಿಂದ ಬೇರ್ಪಡಿಸಿ ಸ್ಥಳೀಯ ಅಭಿಯಂತರರಿಗೆ ವಹಿಸಬೇಕು. ಮೊದಲಿದ್ದ ೯ ತಾಂತ್ರಿಕ ಹುದ್ದೆ ಮರಳಿಸಬೇಕು. ಇಲ್ಲವಾದಲ್ಲಿ ಕೃಷ್ಣಾ ವ್ಯಾಪ್ತಿಯ ಪ್ರದೇಶದ ಮನೆಗೊಬ್ಬರಂತೆ ನಾಗರಿಕರು ಮತ್ತು ರೈತರೊಡನೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಭಾನುವಾರದಿಂದ ರೈತರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತ ಸೋಮಲಿಂಗ ಪೂಜಾರಿ ನಮ್ಮ ಬೆಳೆಗಳಿಗೆ ಇದೀಗ ನೀರು ಅವಶ್ಯವಿದ್ದು, ಇದರಿಂದ ಕೋಟ್ಯಂತರ ಮೌಲ್ಯದ ಬೆಳೆ ಕಣ್ಣೆದುರೇ ನಾಶವಾಗುವಂತಾಗಿದೆ. ಬೇಕಾಬಿಟ್ಟಿ ಜಲಾಶಯದಿಂದ ನೀರು ಹೊರಬಿಡುವ ಅಧಿಕಾರಿಗಳ ಕ್ರಮದಿಂದ ಜಲಕ್ಷಾಮವಾಗುತ್ತಿದೆಯೆಂದು ದೂರಿದರು.

ಜಮಖಂಡಿ ತಹಸೀಲ್ದಾರ ಹಾಗೂ ಅಥಣಿಯ ಎಡಬ್ಲುಇ ನಾಗರಾಳ ಮಾತನಾಡಿ, ನದಿ ನೀರು ತಕ್ಷಣ ಖಾಲಿಯಾಗದಿರಲು ಜಿಲ್ಲಾಧಿಕಾರಿಗಳ ಆದೇಶದನ್ವಯ ವಿದ್ಯುತ್ ಕಡಿತ ಮಾಡಿದ್ದು, ಜಲಾಶಯದ ಒಳಹರುವು ಪ್ರಮಾಣಕ್ಕನುಸಾರ ಹೊರಬಿಡುವ ಮತ್ತು ಸಂಗ್ರಹಿಸಲಾಗುತ್ತದೆಂದರು. ಉಭಯ ಶಾಸಕರು ಜಮಖಂಡಿ ತಹಸೀಲ್ದಾರ ಮೂಲಕ ಸಿಎಂ ಸಿದ್ಧರಾಮಯ್ಯಗೆ ಮನವಿ ಸಲ್ಲಿಸಿ, ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸರ್ಕಾರ ಜಗ್ಗದಿದ್ದಲ್ಲಿ ಮುಂದಿನ ಹೋರಾಟ ಮತ್ತದರ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

ಈ ವೇಳೆ ರಬಕವಿ-ಬನಹಟ್ಟಿ, ಜಮಖಂಡಿ, ತೇರದಾಳ, ಮಹಾಲಿಂಗಪುರ ಪ್ರದೇಶಗಳ ಸಹಸ್ರಾರು ರೈತರು, ಡಾ.ಧನಪಾಲ ಯಲಟ್ಟಿ, ಪ್ರವೀಣ ನಾಡಗೌಡ, ಆನಂದ ಕಂಪು, ಶಂಕರ ಪಾಟೀಲ, ಪ್ರವೀಣ ನಾಡಗೌಡ, ಸತೀಶ ಹಜಾರೆ, ಭುಜಬಲಿ ವೆಂಕಟಾಪುರ, ಸುರೇಶ ಅಕ್ಕಿವಾಟ, ಶಿವಪ್ಪ ಬಾಗಲಕೋಟ, ಪರಪ್ಪ ಪಾಲಭಾಂವಿ, ಹನುಮಂತ ತೇಲಿ, ಶ್ರೀಶೈಲ ಬೀಳಗಿ, ಅಜಯ ಕಡಪಟ್ಟಿ, ಮಹಾದೇವ ಕೊಟ್ಯಾಳ, ಶೇಖರ ಅಂಗಡಿ, ಪ್ರವೀಣ ದಬಾಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ