ಕನ್ನಡಪ್ರಭ ವಾರ್ತೆ ಹನೂರು
ಸಾಲೂರು ಬೃಹನ್ಮಠದ ಡಾ.ಶಾಂತಮಲ್ಲಿಕಾರ್ಜುನ ಶ್ರೀಗಳ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆದವು.
ತಲಕಾವೇರಿಯಲ್ಲಿ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವಾಗುವಂತೆ ಗೌರಿ ಹಬ್ಬದ ದಿನ ಮಹದೇಶ್ವರ ಬೆಟ್ಟದ ಅಂತರಗಂಗೆಯ ಗೌರಿ ಹೊಂಡದಲ್ಲಿ ನೀರು ಜಿನುಗುವುದು ಇಲ್ಲಿನ ಮತ್ತೊಂದು ವಿಶೇಷ. ಹಾಗಾಗಿ ಬೇಡಗಂಪಣ ಅರ್ಚಕರು ಉಪವಾಸವಿದ್ದು, ಪ್ರತಿ ವರ್ಷ ಗೌರಿ ಹಬ್ಬದ ದಿನದಂದು ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಶ್ರೀಗಳ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸ್ವರ್ಣ ಗೌರಿ ವ್ರತದಂದು ಬೇಡಗಂಪಣ ಅರ್ಚಕರು, ಸಾಲೂರು ಶ್ರೀ ಹಾಗೂ ಭಕ್ತ ರೊಂದಿಗೆ ಮೆರವಣಿಗೆಯ ಮೂಲಕ ಅಂತರಗಂಗೆಯ ಸಮೀಪದ ಗೌರಿ ಹೊಂಡಕ್ಕೆ ತೆರಳಿ ಶ್ರೀಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ನೀರು ಜಿನುಗುತ್ತಿದ್ದಂತೆಯೇ ಹೊಂಡಕ್ಕೆ ಬಾಗಿನ ಅರ್ಪಿಸಲಾಗುತ್ತದೆ. ಬಳಿಕ ಮಾದಪ್ಪನ ಅಭಿಷೇಕಕ್ಕೆ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸಕ್ಕೆ ಹೊಂಡದ ನೀರನ್ನು ತುಂಬಿ ಬಿಲ್ವಾರ್ಚನೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.ಗೌರಿ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪಲ್ಲಕ್ಕಿಯಲ್ಲಿ ಕೂರಿಸಿ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸವನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಪ್ರದಕ್ಷಿಣೆ ಹಾಕಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಯಿತು.
ನೀರು ತುಂಬಿದ ಕಳಸವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ 5 ದಿನಗಳ ಕಾಲ ಬೇಡಗಂಪಣರು ಕ್ಷೇತ್ರದ ಸಾಂಪ್ರದಾಯದಂತೆ ಪೂಜೆ ನೆರವೇರಿಸಲಾಗುತ್ತದೆ. ಮೊದಲ ದಿನ ಮೊಣ್ಣೆಪಾಲಿನವರು 2ನೇ ದಿನ ಪ್ರಾಧಿಕಾರ ವತಿಯಿಂದ ಗೌರಿ ಕಳಸಕ್ಕೆ ಪೂಜೆ ನಡೆಯಲಿದೆ. ಮೂರನೇ ದಿನ ದೊಡ್ಡಪಾಲಿನ ಬೇಡಗಂಪಣ ಕುಲದವರು, 4ನೇ ದಿನ ಚಿಕ್ಕಪಾಲು ಮನೆತನದವರು ಹಾಗೂ ಕೊನೆಯ ದಿನ ಸಾಲೂರು ಬೃಹನ್ಮಠದ ವತಿಯಿಂದ ಪಡಿತರ ಸೇವೆಸಲ್ಲಿಸಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ವಿಶೇಷ ಪೂಜೆ ನೆರವೇರಿಸಿ ಅಂತರಗಂಗೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.