ಕನ್ನಡಪ್ರಭ ವಾರ್ತೆ ಗದಗ
ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದ ಶ್ರೀ ಗಜಾನನೋತ್ಸವ ಟ್ರಸ್ಟ್ ಕಮೀಟಿ ವತಿಯಿಂದ ನಗರದ ಮಸಾರಿ ಭಾಗದ ಶ್ರೀವರಸಿದ್ಧಿ ವಿನಾಯಕ ದೇವಸ್ಥಾನದಿಂದ ಗಣೇಶನ ಮೂರ್ತಿಯ ಭವ್ಯ ಮೆರವಣಿಗೆ ಅತ್ಯಂತ ವಿಜೃಂಭಣೆ ಹಾಗೂ ಉತ್ಸಾಹದಿಂದ ನೆರವೇರಿತು.
ಕಮೀಟಿಯ ಸದಸ್ಯರು, ಭಕ್ತಾದಿಗಳು, ಯುವಕರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಗಣೇಶನ ಮೆರವಣಿಗೆಯ ಮುಂಭಾಗದಲ್ಲಿ ಮಂಗಳವಾದ್ಯಗಳ ಮಧುರ ಧ್ವನಿಯೊಂದಿಗೆ ಯುವಕರು ನೃತ್ಯ ಮಾಡುತ್ತಾ, ಗಣಪತಿ ಬಪ್ಪ ಮೋರಯಾ, ಮಂಗಲ ಮೂರ್ತಿ ಮೋರಯಾ ಎಂಬ ಜಯ ಘೋಷಗಳೊಂದಿಗೆ ಬಣ್ಣ ಬಣ್ಣದ ಗುಲಾಲ್ ತೂರಿ ಯುವಜನತೆ ಸಂಭ್ರಮಿಸಿದರು.ಶ್ರೀಗಣೇಶ ಮೂರ್ತಿಯನ್ನು ನಿಗದಿಪಡಿಸಿದ ಎಪಿಎಂಸಿ ಆವರಣದಲ್ಲಿ ಸಾರ್ವಜನಿಕ ಮಂಟಪಕ್ಕೆ ತಲುಪಿಸಿದ ನಂತರ, ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಶಾಸ್ತ್ರೋಕ್ತವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮುಳಗುಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ಗಣೇಶ ಚತುರ್ಥಿ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಷ್ಠಾಪಿಸಲಾಗುವ ಸಾರ್ವಜನಿಕ ಗಣೇಶನ ಮೂರ್ತಿಗಳ ಮೆರವಣಿಗೆಯೂ ವೈಭವದಿಂದ ಜರುಗಿತು.ಪಟ್ಟಣದ ಹೃದಯ ಭಾಗ ಗಾಂಧಿಕಟ್ಟಿ ಬಳಿ ಗಜಸೇನೆ ಯುವಕ ಮಂಡಳಿಯಿಂದ ಪ್ರತಿಷ್ಠಾಪಿಸುವ ಮಹಾರಾಜ ಗಣಪತಿಯನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.ಇಲ್ಲಿಯ ಶ್ರೀ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅದ್ದೂರಿ ಮೆರವಣಿಗೆಯೊಂದಿಗೆ ಯುವಕರ ತಂಡ ಪಟಾಕಿ ಸಿಡಿಸುತ್ತಾ, ಗಣೇಶ ಮಹರಾಜ ಕೀ ಜೈ ಘೋಷಣೆಗಳನ್ನ ಕೂಗುತ್ತಾ ಸಂಭ್ರಮದಿಂದ ಬರಮಾಡಿಕೊಂಡು ಶ್ರದ್ಧಾ-ಭಕ್ತಿ, ಸಾಂಪ್ರದಾಯಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು.