ಅತ್ಯುತ್ಸಾಹ, ಅನುತ್ಸಾಹ ಬದಲು ಸದೋತ್ಸಾಹ ಇರಲಿ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 02, 2025, 12:00 AM IST
ಅಡ್ಕ ಗೋಪಾಲಕೃಷ್ಣ ಭಟ್ ಬರೆದಿರುವ ಹವಿನುಡಿ ಸಂಚಿ ಎಂಬ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡುತ್ತಿರುವುದು  | Kannada Prabha

ಸಾರಾಂಶ

ಅತ್ಯುತ್ಸಾಹ ಹಾಗೂ ಅನುತ್ಸಾಹ ಎರಡೂ ತಪ್ಪು; ಇದರ ಬದಲು ಜೀವನಕ್ಕೆ ಸದಾ ಚೈತನ್ಯ ನೀಡುವ ಸದೋತ್ಸಾಹ ಇರಬೇಕು

ಗೋಕರ್ಣ: ಅತ್ಯುತ್ಸಾಹ ಹಾಗೂ ಅನುತ್ಸಾಹ ಎರಡೂ ತಪ್ಪು; ಇದರ ಬದಲು ಜೀವನಕ್ಕೆ ಸದಾ ಚೈತನ್ಯ ನೀಡುವ ಸದೋತ್ಸಾಹ ಇರಬೇಕು ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ ವ್ರತ ಕೈಗೊಂಡಿರುವ ಶ್ರೀಗಳು ೨೨ನೇ ದಿನವಾದ ಶುಕ್ರವಾರ ಮುಳ್ಳೇರಿಯಾ ಮಂಡಲದ ನೀರ್ಚಾಲು, ಚಂದ್ರಗಿರಿ, ಈಶ್ವರಮಂಗಲ, ಕುಂಬಳೆ, ಪೆರಡಾಲ ಮತ್ತು ಪಳ್ಳತಡ್ಕ ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಯಾವುದೇ ಕಾರ್ಯದ ಆರಂಭದಲ್ಲಿ ಇರುವ ಉತ್ಸಾಹ ಕೊನೆಯವರೆಗೂ ಇರಬೇಕು. ಇದು ನಮ್ಮ ಕಾರ್ಯಕರ್ತರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬರನ್ನು ಮಠದ ಸೇವೆಯಲ್ಲಿ ತೊಡಗಿಸಲು ಹಿರಿಯ ಕಾರ್ಯಕರ್ತರು ಶ್ರಮ ವಹಿಸಬೇಕು. ಎಲ್ಲರೂ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.

ಮಠ ಹತ್ತಿರ ಎಂಬ ಭಾವನೆ ಇದ್ದರೆ ಎಷ್ಟು ದೂರದಿಂದಲೂ ಶಿಷ್ಯಭಕ್ತರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಮಠ ಮತ್ತು ಶಿಷ್ಯರ ನಡುವಿನ ಸಂಬಂಧ ಆತ್ಮದ ಸಂಬಂಧ. ಈ ಭಾಗ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿದ ಹಲವು ಕಾರ್ಯಕರ್ತರನ್ನು ಶ್ರೀಮಠಕ್ಕೆ ಕೊಡುಗೆಯಾಗಿ ನೀಡಿದೆ. ಹೊಸ ತಲೆಮಾರು ಕೂಡ ಈ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಆಶಿಸಿದರು. ೨೫ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮಹಿಳೋದಯ ಸಂಘಟನೆ ಇಡೀ ಸಮಾಜಕ್ಕೆ ಮಾದರಿ ಎಂದರು.

ಅಡ್ಕ ಗೋಪಾಲಕೃಷ್ಣ ಭಟ್ ಬರೆದಿರುವ ಹವಿನುಡಿ ಸಂಚಿ ಎಂಬ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿ, ಮರೆತು ಹೋಗುವ ಕನ್ನಡಪದಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ಕಾರ್ಯ ಶ್ಲಾಘನೀಯ ಎಂದರು. ಹಳೆಯ ಶಬ್ದಗಳು, ಗಾದೆಗಳು ಅಜ್ಜನ ಆಶೀರ್ವಾದ ರೂಪದಲ್ಲಿ ಸಮಾಜಕ್ಕೆ ಲಭ್ಯವಾಗಿದೆ ಎಂದರು. ಕುಂಬಳೆ ಸೀಮೆಯಲ್ಲಿರುವ ಹವಿಗನ್ನಡದ ಅಪರೂಪದ ಶಬ್ದಗಳ ಕೋಶ ಇದಾಗಿದ್ದು, ಸಾವಿರಕ್ಕೂ ಹೆಚ್ಚು ಪದಗಳನ್ನು ಒಳಗೊಂಡಿದೆ. ಈ ಶಬ್ದಗಳನ್ನು ಬಳಸಿ, ಬೆಳೆಸಬೇಕು ಎಂದು ಸೂಚಿಸಿದರು. ಆಯಾ ಪ್ರಾಂತ್ಯಗಳ ಹಳೆಯ ಶಬ್ದಗಳನ್ನು ಉಳಿಸಬೇಕು ಎಂದು ಸಲಹೆ ಮಾಡಿದರು.

ದಿನಕ್ಕೊಂದು ಇಂಗ್ಲಿಷ್ ಪದ ಬಿಡುವ ಅಭಿಯಾನದಲ್ಲಿ ಟೂತ್‌ಬ್ರಷ್ ಪದವನ್ನು ಬಿಡೋಣ ಎಂದು ಸಲಹೆ ನೀಡಿದರು. ಇದಕ್ಕೆ ಪರ್ಯಾಯವಾಗಿ, ಹಲ್ಲುಜ್ಜುಕ ಎಂಬ ಪದ ಕೋಶದಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿ ಕೂರ್ಚ ಎಂಬ ಪದ ಇದೆ. ಆದ್ದರಿಂದ ಟೂತ್‌ಬ್ರಷ್ ಗೆ ದಂತಕೂರ್ಚ ಎಂಬ ಶಬ್ದ ಬಳಸಬಹುದು ಎಂದು ಅಭಿಪ್ರಾಯಪಟ್ಟರು.

ಮೊದಲು ಶಬ್ದಗಳನ್ನು ಬದಲಿಸಿ ಆ ಬಳಿಕ ಅದರ ಬಳಕೆಗೂ ತಿಲಾಂಜಲಿ ಇಡೋಣ. ನಮ್ಮ ಬಗ್ಗೆ, ನಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಲಿ ಎಂದು ಆಶಿಸಿದರು.

ಮಹಾಮಂಡಲ ಉಪಾಧ್ಯಕ್ಷ ಶಾಂತಾರಾಮ ಹೆಗಡೆ ಹಿರೇಮನೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಡಾ.ಡಿ.ಪಿ.ಭಟ್, ಗುರುಕುಲಗಳ ಸಮಿತಿ ಅಧ್ಯಕ್ಷ ಅರುಣ್ ಹೆಗಡೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ