ಚಿತ್ರದುರ್ಗ: ಶಿಕ್ಷಕರು ಪಾಠ ಮಾಡಬೇಕು, ವಿದ್ಯಾರ್ಥಿಗಳು ಓದ ಬೇಕು, ಪೋಷಕರು ಅದನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಬೇಕು ಆಗ ಮಾತ್ರ ಒಂದು ಶಿಕ್ಷಣ ಸಂಸ್ಥೆ ಉತ್ತಮ ಸಂಸ್ಥೆಯಾಗಲು ಸಾಧ್ಯವಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಕಲಿಸಬೇಕಿದೆ. ಇಂದಿನ ದಿನಮಾನದಲ್ಲಿ ಅಂಕಗಳ ಜೊತೆಗೆ ಮೌಲ್ಯಯುತ ಸಂಸ್ಕಾರದ ಅಗತ್ಯ ಇದೆ. ಇಲ್ಲಿನ ಸಂಸ್ಥೆ ಇಂತಹ ಕಾರ್ಯಕ್ರಮ ಮಕ್ಕಳಿಗೆ ಕಲಿಸುವುದರ ಮೂಲಕ ಸಂಸ್ಕಾರವಂತರನ್ನಾಗಿ ಮಾಡುತ್ತಿದೆ. ಒಂದು ಶಿಕ್ಷಣ ಸಂಸ್ಥೆಯ ಯಶಸ್ವಿಗೆ ಅಲ್ಲಿನ ಆಡಳಿತ ಮಂಡಳಿ, ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಪಾತ್ರ ಹೆಚ್ಚಿನದಾಗಿದೆ ಎಂದರು.
ಬಡತನದಲ್ಲಿ ಶಿಕ್ಷಣವನ್ನು ಪಡೆದ ಹಲವಾರು ಜನತೆ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಬಡತನದಲ್ಲಿ ಶಿಕ್ಷಣವನ್ನು ಪಡೆದಿರುವ ಇವರು ಮುಂದಿನ ಜೀವನದಲ್ಲಿ ಉನ್ನತವಾದ ಸ್ಥಾನಕ್ಕೆ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹಾ ಕಡು ಬಡತನದಲ್ಲಿ ಇದ್ದು, ಈಗ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ದೇಶದ ಎಲ್ಲಾ ಜನತೆಗೂ ಸಹಾ ಉಚಿತ ಲಸಿಕೆ ನೀಡುವುದರ ಮೂಲಕ ದೇಶವನ್ನು ಕೋವಿಡ್ನಿಂದ ಕಾಪಾಡಿದ್ದಾರೆ ಎಂದರು.ಇಂದಿನ ಮಕ್ಕಳು ಮುಂದಿನ ದೇಶದ ಪ್ರಜೆಗಳು ಅವರನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡುವುದು ಚಿಕ್ಕ ವಯಸ್ಸಿನಲ್ಲಿಯೇ ಆಗಬೇಕಿದೆ. ಆದ್ದರಿಂದ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡುವುದರ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ವಿಜಯಕುಮಾರ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡುವುದರ ಮೂಲಕ ನಗರಕ್ಕೆ ಉತ್ತಮವಾದ ಕೂಡುಗೆ ನೀಡಿದ್ದಾರೆ. 35 ವರ್ಷದಲ್ಲಿ ಲಕ್ಷಾಂತರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಿದ್ದಾರೆ. ಮಕ್ಕಳಲ್ಲಿ ಬುದ್ಧಿವಂತಿಕೆ ಇದೆ ಅದನ್ನು ಹೊರ ತೆಗೆಯುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಸುನೀತಾ ವಿಜಯಕುಮಾರ್, ಆಕಾಡೆಮಿಕ್ ಆಡಳಿತಾಧಿಕಾರಿಗಳಾದ ಡಾ.ಸ್ವಾಮಿ ಭಾಗವಹಿಸಿದ್ದರು.ವಿದ್ಯಾರ್ಥಿಗಳಾದ ತ್ರಿಶಾ ಮತ್ತು ಅನಿಷಾ ಪ್ರಾರ್ಥಿಸಿದರೆ, ಶಿಕ್ಷಕಿ ಚಿನ್ನಾಂಬೆ ಸ್ವಾಗತಿಸಿದರು, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಯರಾದ ಸಂಪತ್ ಕುಮಾರ್ ಶಾಲಾ ವರದಿಯನ್ನು ವಾಚನ ಮಾಡಿದರು, ಶಿಕ್ಷಕರಾದ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.