ಹಾನಗಲ್ಲ: ಕುಡಿಯುವ ನೀರಿನ ಸಮಸ್ಯೆಗೊಳಗಾದ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯಿತಿಯ ಕಾಲ್ವೆಯಲ್ಲಾಪುರ ಗ್ರಾಮದ ಮನೋಹರ ನಗರಕ್ಕೆ ತಹಸೀಲ್ದಾರ್ ಎಸ್.ರೇಣುಕಾ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ನೀರಿನ ಬವಣೆಯನ್ನು ಆಲಿಸಿದ್ದಾರೆ.
ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ನೀರು ಪೂರೈಕೆಯಲ್ಲಾದ ಅನಾನುಕೂಲವನ್ನು ಸರಿಪಡಿಸಲು ಬಾಳಂಬೀಡ ಪಿಡಿಒ ಟಿ.ಬಿ. ಮುಗಾನವರ ಅವರನ್ನು ಸ್ಥಳಕ್ಕೆ ಕರೆಸಿ ಕೂಡಲೇ ನಳದ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಪೈಪ್ ಒಡೆದಿದೆ ಎಂದು ನೆಪ ಹೇಳಿ ನಳದ ಮೂಲಕ ನೀರು ಹರಿಸುವುದನ್ನು ನಿಲ್ಲಿಸಿರುವುದಕ್ಕೆ ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್ ಎಸ್. ರೇಣುಕಾ ಒಂದು ದಿನದಲ್ಲಿ ಎಲ್ಲವನ್ನು ಸರಿಪಡಿಸಲು ಸೂಚಿಸಿದ್ದಾರೆ.
ಇನ್ನೊಂದೆಡೆ ಜಲಜೀವನ ಮಿಶನ್ ಅನುಷ್ಠಾನಾಧಿಕಾರಿ ಚಂದ್ರಶೇಖರ ನೆಗಳೂರ ಇದೇ ಕಾಲ್ವೆಯಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಅವೈಜ್ಞಾನಿಕವಾಗಿ ಕೊಳವೆ ಭಾವಿಗೆ ಕೇಬಲ್ ಜೋಡಣೆ ಹಾಗೂ ವೈರಿಂಗ್ ಅವ್ಯವಸ್ಥೆ ಪರಿಶೀಲಿಸಿ ಕೂಡಲೆ ಸರಿಪಡಿಸಲು ಪಿಡಿಒಗೆ ಸೂಚಿಸಿದ್ದಾರೆ.