ಶಾಸಕ ಬಸವರಾಜ ರಾಯರಡ್ಡಿ ಅವರು ಕೇವಲ ಒಂದುವರೆ ವರ್ಷದಲ್ಲಿ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ತಂದು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ.
ಯಲಬುರ್ಗಾ:
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮಾಜಿ ಸಚಿವ ಹಾಗೂ ಸಿಎಂ ಆರ್ಥಿಕ ಸಲಹೆಗಾರರ, ಶಾಸಕ ಬಸವರಾಜ ರಾಯರಡ್ಡಿ ಅವರ ಕೊಡುಗೆ ಅಪಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮುಖಂಡರು, ಅಭಿಮಾನಿಗಳು ಶುಕ್ರವಾರ ಬಸವರಾಜ ರಾಯರಡ್ಡಿ ಅವರ ೬೮ನೇ ಜನ್ಮದಿನದ ನಿಮಿತ್ತ ಕೇಕ್ ಕತ್ತರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ರಾಯರಡ್ಡಿಯವರ ಜನಪರ ಅಭಿವೃದ್ದಿ ಕೊಡುಗೆಯನ್ನು ಮೆರೆಯಲು ಸಾಧ್ಯವಿಲ್ಲ ಎಂದರು.
ಶಾಸಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ವ್ಯಕ್ತಿತ್ವದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹ ಜನನಾಯಕನಿಗೆ ಭಗವಂತ ಆಯುಷ್ಯ, ಆರೋಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ವೀರನಗೌಡ ಬಳೂಟಗಿ ಹಾಗೂ ಬಿ.ಎಂ. ಶಿರೂರ ಮಾತನಾಡಿ, ಶಾಸಕರು ಕೇವಲ ಒಂದುವರೆ ವರ್ಷದಲ್ಲಿ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ತಂದು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಎಂದರು.
ರೆಡ್ಕ್ರಾಸ್ ಸಂಸ್ಥೆ ಪಿಆರ್ಒ ದೇವೇಂದ್ರಪ್ಪ ಹಿಟ್ನಾಳ, ಸಂಸ್ಥೆ ತಾಲೂಕಾಧ್ಯಕ್ಷ ಡಾ. ಸಿ.ಎಸ್. ದಾನರಡ್ಡಿ, ಉಪಾಧ್ಯಕ್ಷ ಶಿವಕುಮಾರ ದಿವಟರ್ ಮಾತನಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಂಪಲು, ಬ್ರೇಡ್ ಹಾಗೂ ಪಕ್ಷದ ಕಾರ್ಯಾಲಯದಲ್ಲಿ ಬಡ ಮಕ್ಕಳಿಗೆ ನೋಟ್ಬುಕ್ ವಿತರಣೆ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರ, ರಕ್ತದಾನ ಮಾಡಿದವರಿಗೆ ಆರೋಗ್ಯ ವಿಮಾ ಪಾಲಿಸಿ ವಿತರಣೆ, ಕ್ಷೇತ್ರದ ಜೋಪಡಿ ನಿವಾಸಿಗಳಿಗೆ ಸೊಳ್ಳೆಪರದೆ ವಿತರಿಸಲಾಯಿತು. ೧೦೦ಕ್ಕೂ ಹೆಚ್ಚು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಯರಡ್ಡಿ ಅವರ ೬೮ನೇ ಹುಟ್ಟು ಹಬ್ಬಕ್ಕೆ ವಕೀಲರಾದ ಪಿ.ಆರ್. ಹಿರೇಮಠ ಎನ್ನುವವರು ಸತತ ೬೮ನೇ ಬಾರಿ ರಕ್ತದಾನ ಮಾಡಿ ಪ್ರಶಂಸೆಗೆ ಪಾತ್ರರಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.