ಮುಂಡಗೋಡ: ಕರ್ನಾಟಕ ಏಕಿಕರಣದಲ್ಲಿ ಸಾಕಷ್ಟು ಜನರ ಶ್ರಮವಿದ್ದು, ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣ ಇವೆರಡೂ ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಎಂದು ತಹಸೀಲ್ದಾರ್ ಶಂಕರ ಗೌಡಿ ಹೇಳಿದರು.
೨೦೦೦ಕ್ಕೂ ಹೆಚ್ಚು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಶಾಸ್ತ್ರೀಯ ಭಾಷೆ ನಮ್ಮದಾಗಿದೆ. ಕನ್ನಡದ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಿರಬೇಕು. ಕನ್ನಡ ನಾಡನ್ನು ಭುವನೇಶ್ವರಿ ತಾಯಿ ಎಂದು ಆರಾಧಿಸುತ್ತೇವೆ. ಭಾಷೆಯನ್ನು ಮಾತನಾಡಲು, ವ್ಯವಹರಿಸಲು ಹಾಗೂ ಜ್ಞಾನ ಪಡೆಯಲು ಉಪಯೋಗಿಸುತ್ತೇವೆ. ಯಾವುದೇ ಒಂದು ಭಾಷೆ ಎಷ್ಟು ಜನೋಪಯೋಗಿಯಾಗಿದೆ ಎಂಬುವುದರ ಆಧಾರದ ಮೇಲೆ ನಿಂತಿರುತ್ತದೆ. ನಾವು ಹಲವು ಭಾಷೆಗಳ ಪಾಂಡಿತ್ಯ ಹೊಂದಬಹುದು. ಆದರೆ, ಆಡುವ ಭಾಷೆ ಒಂದೇ ಅದು ಕನ್ನಡವಾಗಿರಬೇಕು ಎಂದು ಕರೆ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಪಪಂ ಸದಸ್ಯ ಅಶೋಕ ಚಲವಾದಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಮುಂಡಗೋಡ ಆರಕ್ಷಕ ವೃತ್ತ ನಿರೀಕ್ಷಕ ರಂಗನಾಥ ನೀಲಮ್ಮನವರ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಸದಸ್ಯ ಶ್ರೀಕಾಂತ ಸಾನು, ಗೌಸ್ ಮಕಾಂದಾರ, ರಜಾ ಪಠಾಣ, ಚಂದ್ರಶೇಖರ ಕರಿಗಾರ, ಮಂಜುನಾಥ ಪಾಟೀಲ, ನಾಗರಾಜ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.ಬಿಇಒ ಸುಮಾ ಸ್ವಾಗತಿಸಿದರು. ಕೆ.ಕೆ. ಕರುವಿನಕೊಪ್ಪ ಹಾಗೂ ಅಶೋಕ ಶಂಕ್ರಿಕೊಪ್ಪ ನಿರೂಪಿಸಿದರು. ಸಮನ್ವಯಾಧಿಕಾರಿ ರಮೇಶ ಅಂಬಿಗೇರ ವಂದಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಟಿಬೇಟಿಯನ್ ವಿದ್ಯಾರ್ಥಿಗಳು ಕೂಡ ಕರ್ನಾಟಕ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿತು. ಮೆರವಣಿಗೆಯಲ್ಲಿ ತಾಲೂಕಿನ ಚಿಗಳ್ಳಿ ಹುಲಿಗೆಮ್ಮ ಗ್ರಾಮಾಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ 500 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶಿಸಲಾಯಿತು.