ಕುಮಟಾ; ಜ್ಞಾನ ಸಂಪಾದನೆಗೆ ಸಾಹಿತ್ಯಾಸಕ್ತಿ ಅತ್ಯಗತ್ಯ. ಕಾವ್ಯಕ್ಕೆ ಜ್ಞಾನದ ಪರಿಧಿಯನ್ನು ವಿಸ್ತರಿಸುವ ಮಹಾಶಕ್ತಿ ಇದೆ. ಸಾಹಿತ್ಯದ ವಿಸ್ತಾರವಾದ ಅನುಭವ ತಮ್ಮದಾಗಿಸಿಕೊಳ್ಳಲು ಇಂತಹ ವಿಭಿನ್ನ ಸಾಹಿತ್ಯಿಕ ಕಾರ್ಯಕ್ರಮಗಳು ನೆರವಾಗಲಿದೆ ಎಂದು ಹಿರಿಯ ಸಾಹಿತಿ ಟಿ.ಜಿ. ಭಟ್ ಹಾಸಣಗಿ ಹೇಳಿದರು.
ಜ್ಞಾನ ಸಂಪಾದನೆಯ ತುಡಿತದಿಂದ ಪ್ರತಿನಿತ್ಯ ಹೆಚ್ಚೆಚ್ಚು ಓದಬೇಕು. ಇಂಥ ಕಾರ್ಯಕ್ರಮಗಳ ಮೂಲಕ ಜ್ಞಾನದ ವಿನಿಮಯವಾಗಬೇಕು. ಇದರಿಂದ ಬದುಕಿನ ದೃಷ್ಟಿಕೋನ ವಿಶಾಲವಾಗುತ್ತದೆ. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೊಸಹೊಸ ವಿಚಾರ ಕಲಿಯಬಹುದು ಎಂದರು.ಸಾಹಿತಿ ವೆಂಕಟೇಶ್ ಬೈಲೂರು ಆಶಯ ಮಾತುಗಳನ್ನಾಡಿ, ಎಲ್ಲರನ್ನು ಒಂದುಗೂಡಿಸುವ, ಒಡೆದ ಮನಸ್ಸುಗಳನ್ನು ಕಟ್ಟುವ ಶಕ್ತಿ ಕಾವ್ಯಕ್ಕೆ ಇದೆ. ಕಾವ್ಯ ಅನುಭವ ಜನ್ಯವಾದಾಗ ಶಾಶ್ವತವಾಗಿ ನೆಲೆಯಾಗುತ್ತದೆ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ಪರಿಷತ್ತಿನ ಕಾರ್ಯಕ್ರಮವು ಸಾಮಾನ್ಯ ಜನರಿಗೂ ತಲುಪುವಂತಾಗಬೇಕು. ಯುಗಾದಿ ಸಂಭ್ರಮದ ಕವಿಗೋಷ್ಠಿ ಸಾಹಿತ್ಯ ಪರಿಷತ್ತಿನ ಹೊಸ ಹೊಸ ಕಾರ್ಯ ಸಾಧನೆಗೆ ಮೊದಲ ಮೆಟ್ಟಿಲಾಗಲಿ. ಯುಗಾದಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ಮುಂದಿನ ಯುಗಾದಿಯೊಳಗೆ ಒಂದೊಂದು ಸಂಕಲನ ತರುವಂತಾಗಲಿ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಭಟ್ ಸೂರಿ ಮಾತನಾಡಿ, ಕವಿತ್ವಕ್ಕೆ ಭದ್ರ ಬುನಾದಿ ಬೇಕು. ನೂತನ ಅಧ್ಯಕ್ಷರ ಸಾಹಿತ್ಯ ಸಂಘಟನೆಯ ಪಯಣ ತಾಲೂಕಿನಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗಲಿ ಎಂದರು.
ಕವಿಗೋಷ್ಠಿಯಲ್ಲಿ ಬಾಲುಪಟಗಾರ, ಟಿ.ಬಿ.ಗೌಡ, ದಯಾನಂದ ಬಳಗು, ರಾಜು ನಾಯ್ಕ, ಸಂಧ್ಯಾ ಅಘನಾಶಿನಿ, ಸಂಧ್ಯಾರಾಣಿ ಪಟಗಾರ, ಪ್ರವೀಣ ಕರ್ಕಿಕರ, ತನುಜಾ ನಾಯಕ, ಗಣೇಶ ಜೋಶಿ, ದಿವಾಕರ ಅಘನಾಶಿನಿ, ಪಚ್ಚು ಪಟಗಾರ, ವಿಜಯ ಗುನಗ ಕಾವ್ಯವಾಚನ ಮಾಡಿದರು.