ಕೇಂದ್ರ ಪುರಸ್ಕೃತ ಯೋಜನೆಯಡಿ ರೈತರಿಗೆ ಕೃಷಿ ಉಪಕರಣಗಳ ವಿತರಣೆ, ಚಿಕ್ಕಮಗಳೂರಿನ ಕೃಷಿ ಇಲಾಖೆಯಲ್ಲಿ ನಡೆದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರೈತರ ಹಿತವೇ ದೇಶದ ಹಿತ, ಸರ್ಕಾರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಯಡಿ ಸವಲತ್ತು ವಿತರಣಾ ಕಾರ್ಯ ಕ್ರಮದಲ್ಲಿ ರೈತರಿಗೆ ಕೃಷಿ ಉಪಕರಣಗಳ ವಿತರಣೆ ಮಾಡಿ ಮಾತನಾಡಿದರು. ಭಾರತ ಕೃಷಿ ಪ್ರಧಾನವಾದ ದೇಶ. ಶೇ. 50 ಕ್ಕಿಂತಲೂ ಹೆಚ್ಚು ಭೌಗೋಳಿಕ ಪ್ರದೇಶ ಮಳೆ ಅವಲಂಬಿತ ಕೃಷಿ ಭೂಮಿಯಾಗಿದ್ದು, ಅತಿವೃಷ್ಠಿ, ಅನಾವೃಷ್ಠಿಯಂತ ಹವಾಮಾನ ವೈಪರಿತ್ಯದಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸುವಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೆಳೆಹಾನಿಯಾಗಿದೆ. ಬೆಳೆ ಹಾನಿಯಾಗಿರುವ ರೈತರನ್ನು ಗುರುತಿಸಿ ಪರಿಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಲವಾರು ಮಳೆ ಆಶ್ರಿತ ಕೃಷಿ ಬೆಳೆಗಳಿದ್ದು, ಮಳೆ ಕೊರತೆಯಿಂದಾಗಿ ರೈತರು ಕಡಿಮೆ ಇಳುವರಿ ಅಥವಾ ಬೆಳೆ ಯನ್ನು ಕಳೆದುಕೊಳ್ಳುವ ಸಂದಿಗ್ದ ಪರಿಸ್ಥಿತಿ ಉಂಟಾಗುತ್ತಿವೆ. ಈ ಜ್ವಲಂತ ಸಮಸ್ಯೆ ಪರಿಹರಿಸಲು ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪುಗೊಳಿಸುವ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆ ಉತ್ತಮ ಪಡಿಸುವುದು ಮತ್ತು ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ರೈತರು ಕೃಷಿ ಜೊತೆಗೆ ಕೃಷಿ ಉಪ ಕಸುಬುಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಉಪ ಕಸುಬುಗಳಿಂದ ಬರುವ ಆದಾಯ ಕೃಷಿ ಮತ್ತು ಇನ್ನಿತರ ಕಾರ್ಯಗಳಿಗೆ ವ್ಯಯಿಸಬಹುದು. ಇಲಾಖೆಯಿಂದ ಉತ್ತಮ ಗುಣಮಟ್ಟದ ಬೀಜ ಹಾಗೂ ವಿವಿಧ ತಳಿಗಳ ಸಸಿಗಳನ್ನು ರೈತರಿಗೆ ನೀಡ ಲಾಗುತ್ತಿದೆ. ರೈತರು ತಮ್ಮ ಕೃಷಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಇಳುವರಿ ಪಡೆಯಬೇಕು. ರೈತರ ಹಿತಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಮಾಹಿತಿ ಪಡೆದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ ಮಾತನಾಡಿ, ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಬದು, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ ಸೆಟ್, ಲಘು ನೀರಾವರಿ ಹಾಗೂ ತಂತಿ ಬೇಲಿಯಂತಹ ಒಟ್ಟಾರೆ 6 ಕಡ್ಡಾಯ ಪಾಕೇಜ್ ರೂಪದ ಘಟಕಗಳಿವೆ. ಕನಿಷ್ಠ ಒಂದು ಎಕರೆ ಸಾಗುವಳಿ ಭೂಮಿ ಹೊಂದಿದ ರೈತರು ಇದರ ಫಲಾನುಭವಿಗಳಾಗಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಸಬಾ ಹೋಬಳಿ ಅಲ್ಲಂಪುರ, ಬೀಕನಹಳ್ಳಿ, ಬಾಳೆಹಳ್ಳಿ, ಹುಳಿಯಾರಹಳ್ಳಿ, ಕರ್ಕಿಪೇಟೆ, ಬಿಳೇಕಲ್ಲು, ಹಂಪಾಪುರ, ಐನಹಳ್ಳಿ ಸೇರಿದಂತೆ ಕೆಲವು ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರದೇಶದ ಸುಮಾರು 250ಕ್ಕೂ ಹೆಚ್ಚು ರೈತರು ಕೃಷಿ ಚಟುವಟಿಕೆ ಅಳವಡಿಸಿಕೊಂಡಿದ್ದು, ಬಡ ರೈತರ ಸುಸ್ಥಿರ ಕೃಷಿಗೆ ಈ ಯೋಜನೆ ಸಹಕಾರಿಯಾಗಿದೆ ಎಂದರು.
ವಿತರಣಾ ಕಾರ್ಯಕ್ರಮದ ಜೊತೆಗೆ ಶಾಸಕರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪೋನ್ ಇನ್ ಕಾರ್ಯಕ್ರಮದ ಮೂಲಕ ಸುಮಾರು 4400 ರೈತರೊಂದಿಗೆ ಸಂವಾದ ನಡೆಸಿ ಯೋಜನೆ ಉದ್ದೇಶ ಹಾಗೂ ಅರ್ಹತೆ ಮಾಹಿತಿ ಒದಗಿಸಿ ಅವರ ಸಮಸ್ಯೆ ಆಲಿಸಿ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಸಹಾಯಕ ಕೃಷಿ ನಿರ್ದೇಶಕಿ ಸಿ. ಸುಜಾತಾ, ವೆಂಕಟೇಶ್ ಚೌಹಣ್, ತಿಮ್ಮೆಗೌಡ ಪಾಟೀಲ್ ಉಪಸ್ಥಿತರಿದ್ದರು.
25 ಕೆಸಿಕೆಎಂ 4ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಶುಕ್ರವಾರ ಕೇಂದ್ರ ಪುರಸ್ಕೃತ ಯೋಜನೆಯಡಿ ರೈತರಿಗೆ ಕೃಷಿ ಉಪಕರಣಗಳನ್ನು ವಿತರಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸುಜಾತಾ, ಕೃಷಿ ಅಧಿಕಾರಿ ವೆಂಕಟೇಶ್ ಚೌಹಣ್, ಸಹಾಯಕ ಕೃಷಿ ಅಧಿಕಾರಿ ಸಿ. ಸುಜಾತಾ ಇದ್ದರು.