ಕನ್ನಡಪ್ರಭ ವಾರ್ತೆ ಮುಧೋಳ
ಸಚಿವ ಸ್ಥಾನ ಕಳೆದುಕೊಂಡರೂ ಪರವಾಗಿಲ್ಲ. ಒಳ ಮೀಸಲಾತಿಗಾಗಿ ಪಟ್ಟು ಹಿಡಿದಿದ್ದ ಸಚಿವ ಆರ್.ಬಿ. ತಿಮ್ಮಾಪೂರ ಅವರ ಹೋರಾಟದ ಫಲವಾಗಿಯೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.ನಗರದ ಹೃದಯ ರೋಗ ತಜ್ಞ ಡಾ.ವಿ.ಎನ್. ನಾಯಕ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾದಿಗ ಸಮಾಜದ ಹೋರಾಟಗಾರರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಚಿವ ಆರ್.ಬಿ. ತಿಮ್ಮಾಪೂರ ಅವರ ಅವಿರತ ಪರಿಶ್ರಮ ಮತ್ತು ಬದ್ಧತೆ ಈ ಯಶಸ್ಸಿಗೆ ಕಾರಣವಾಗಿದೆ. ಒಳ ಮೀಸಲಾತಿ ಮಾದಿಗ ಸಮಾಜದ ದೀರ್ಘ ಕಾಲದ ಪ್ರಮುಖ ಬೇಡಿಕೆ ಬೇಡಿಕೆ ಆಗಿತ್ತು. ಈ ಬೇಡಿಕೆ ಈಡೇರಿಸಲು ಸಚಿವ ತಿಮ್ಮಾಪೂರ ಅವರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು. ತಮ್ಮ ಸಚಿವ ಸ್ಥಾನದ ಬಗ್ಗೆಯೂ ಚಿಂತಿಸದೆ ಸಮಾಜದ ಹಿತಾಸಕ್ತಿಗೆ ಆದ್ಯತೆ ನೀಡಿದರು. ಅವರ ಈ ಬಲವಾದ ನಿಲುವು ಸರ್ಕಾರದ ನಿರ್ಧಾರದ ಮೇಲೆ ಪ್ರಭಾವ ಬೀರಿ, ಅಂತಿಮವಾಗಿ ಒಳ ಮೀಸಲಾತಿ ಜಾರಿಗೆ ಬಂದಿದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಡಾ.ಉದಯ ನಾಯಕ, ರಾಜೂಗೌಡ ಪಾಟೀಲ, ಗೋವಿಂದಪ್ಪ ಗುಜ್ಜನವರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನವರ, ಎಸ್.ಪಿ. ದಾನಪ್ಪಗೋಳ, ಹೋರಾಟಗಾರರಾದ ಗಣೇಶ ಮೇತ್ರಿ, ಮಹಾದೇವ ರೂಗಿ, ಸದಾಶಿವ ಮೇತ್ರಿ, ಡಾ.ಎಂ. ಸದಾಶಿವ, ನಗರ ಸಭೆ ಸದಸ್ಯರಾದ ಭೀಮಶಿ ಮೇತ್ರಿ, ಸತೀಶ ಗಾಡಿ, ಮಹಾದೇವ ಚಿಕ್ಕೂರ, ಸಂಜು ಪೂಜಾರಿ ಸೇರಿದಂತೆ ಅನೇಕ ಮುಖಂಡರು ಮತ್ತು ಹೋರಾಟಗಾರರು ಉಪಸ್ಥಿತರಿದ್ದರು.