ಆತ್ಮೀಯತೆ ಸಾಧಿಸಿದರೆ ಪ್ರಗತಿ: ಸೋಮೇಶ್ವರ್‌

KannadaprabhaNewsNetwork | Published : Nov 20, 2024 12:35 AM

ಸಾರಾಂಶ

ಮಾವನ ಸಂಪನ್ಮೂಲ ವೃತ್ತಿನಿರತರು ಕಾರ್ಮಿಕರು ಅಥವಾ ನೌಕರರೊಂದಿಗೆ ಔಪಚಾರಿಕತೆ ಬಿಟ್ಟು ಆತ್ಮೀಯತೆ ಸಾಧಿಸಿಕೊಂಡು ಸಂಸ್ಥೆಯ ಪ್ರಗತಿಗೆ ಕಾರಣವಾಗಬೇಕು ಎಂದು ಥಟ್‌ ಅಂತ ಹೇಳಿ ಖ್ಯಾತಿಯ ಡಾ। ನಾ.ಸೋಮೇಶ್ವರ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾವನ ಸಂಪನ್ಮೂಲ ವೃತ್ತಿನಿರತರು ಕಾರ್ಮಿಕರು ಅಥವಾ ನೌಕರರೊಂದಿಗೆ ಔಪಚಾರಿಕತೆ ಬಿಟ್ಟು ಆತ್ಮೀಯತೆ ಸಾಧಿಸಿಕೊಂಡು ಸಂಸ್ಥೆಯ ಪ್ರಗತಿಗೆ ಕಾರಣವಾಗಬೇಕು ಎಂದು ಥಟ್‌ ಅಂತ ಹೇಳಿ ಖ್ಯಾತಿಯ ಡಾ। ನಾ.ಸೋಮೇಶ್ವರ ಸಲಹೆ ನೀಡಿದರು.

ಮಂಗಳವಾರ ನಗರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ 7ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಸಂಪನ್ಮೂಲ ವಿಭಾಗದವರು ಎಂದರೆ ಕಾರ್ಮಿಕರಲ್ಲಿ ಒಂದು ರೀತಿಯ ಭೀತಿ ಇರುತ್ತದೆ. ಅವರ ವಿಶ್ವಾಸವನ್ನು ಗಳಿಸಿಕೊಳ್ಳುವುದು ಕಷ್ಟ. ಆ ವಿಶ್ವಾಸ ಗಳಿಸಿಕೊಳ್ಳಬೇಕಾದರೆ ಕಾರ್ಮಿಕರ ಮಾತೃಭಾಷೆ, ಹೃದಯ ಭಾಷೆಯಾದ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಮಾನವ ಸಂಪನ್ಮೂಲ ವೃತ್ತಿ ನಿರತರು ಔಷಚಾರಿಕತೆಯಿಂದ ಆತ್ಮೀಯತೆ ಸಾಧಿಸಿಕೊಂಡರೆ ಸಂಸ್ಥೆಯ ಪ್ರಗತಿ ಅತ್ಯಂತ ಸುಲಭ. ಅದಕ್ಕೆ ಭಾಷೆ ಅತ್ಯಂತ ಮುಖ್ಯ ಎಂದರು.

ಭಾಷೆಯ ಮೂಲ ಉದ್ದೇಶ ಸಂವಹನ. ಮಾನವ ಸಂಪನ್ಮೂಲಕ್ಕೆ ಸಂಬಂಧಪಟ್ಟಂತೆ ಇಂಗ್ಲಿಷಿನ ಪ್ರಚಲಿತ ಸಾಹಿತ್ಯವನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದು ಶಾಸ್ತ್ರೀಯ ಸಾಹಿತ್ಯ, ಮತ್ತೊಂದು ಜನಪ್ರಿಯ ಸಾಹಿತ್ಯ. ಶಾಸ್ತ್ರೀಯ ಸಾಹಿತ್ಯವನ್ನು ವೃತ್ತಿ ನಿರತರು ಅಧ್ಯಯನ ಮಾಡಲು ಬಳಸುತ್ತಾರೆ. ಸಾಮಾನ್ಯ ಜನರಿಗೆ ಅದನ್ನು ಅಧ್ಯಯನ ಮಾಡುವುದು ಕಷ್ಟವಾಗುತ್ತದೆ. ಮಾನವ ಸಂಪನ್ಮೂಲ ವೃತ್ತಿಯಲ್ಲದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಮಾನವ ಸಂಪನ್ಮೂಲ ಕ್ಷೇತ್ರದ ಪ್ರಾಥಮಿಕ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದಕ್ಕೆ ಜನಪ್ರಿಯ ಸಾಹಿತ್ಯವನ್ನು ಪರಿಚಯಿಸಬೇಕಾಗುತ್ತದೆ ಎಂದು ಹೇಳಿದರು.

ಕಾರ್ಮಿಕರು ಸಂಸ್ಥೆಯ ಮುಖ್ಯಸ್ಥರೊಂದಿಗೆ ತೊಂದರೆಗಳನ್ನು ಹೇಳಿಕೊಳ್ಳಲು ತಮ್ಮದೇ ಆದ ಭಾಷೆಯಲ್ಲಿ ಸಂವಹನ ನಡೆಸುವುದು ಉತ್ತಮ ಪ್ರಕ್ರಿಯೆಯಾಗಿದೆ. ಇದರಿಂದ ಮಾನವ ಸಂಪನ್ಮೂಲ ಕೂಡ ಅಭಿವೃದ್ಧಿಯಾಗಿ ಸಂಸ್ಥೆಗಳು ಹಾಗೂ ಉನ್ನತಾಧಿಕಾರಿಗಳ ಏಳ್ಗೆಯೂ ಸಾಧ್ಯವಾಗಲಿದೆ. ದಿನನಿತ್ಯದ ವ್ಯವಹಾರದಲ್ಲಿ ಭಾಷೆಯನ್ನು ಸರಾಗವಾಗಿ ಬಳಸಿದರೆ ಮಾತ್ರ ಭಾಷೆ ಅತ್ಯುತ್ತಮವಾಗಿ ಬೆಳೆಯುತ್ತದೆ. ಭಾಷೆಯನ್ನು ಬೆಳೆಸಲು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಬಳಸುವ ಪರಿಕಲ್ಪನೆಗಳನ್ನು ತರ್ಜುಮೆ ಮಾಡಿ ನಿಘಂಟು ಅಥವಾ ಶಬ್ದಕೋಶ ರೂಪದಲ್ಲಿ ಸಾಹಿತ್ಯ ಸೃಷ್ಟಿಸಬೇಕಿದೆ. ಹಾಗಾದಾಗ ಮಾತ್ರ ಬಹುಶಃ ಕನ್ನಡ ಭಾಷೆಯನ್ನು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹುಲುಸಾಗಿ ಬೆಳೆಸಲು ಸಾಧ್ಯ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕರಾದ ರಾಜೀವ ವೇಲೂರ್‌, ಮ್ಯಾಕ್ಸಿ ಎಫ್‌ ಫೆರ್ನಾಂಡಿಸ್‌, ಆನಂದ ಅವರಿಗೆ ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕ ಪ್ರಶಸ್ತಿ- 2024 ಪ್ರದಾನ ಮಾಡಲಾಯಿತು.

ಯುವ ಸಾಧಕರಾದ ಶಿವಕುಮಾರ್, ವಿಶ್ವೇಶ್ವರ ಹೆಗಡೆ, ಸಂತೋಷ್ ಶೆಟ್ಟಿ, ಶ್ರೀರಾಮ್ ಪಟ್ಟಾರಿ, ಕೋಮಲ ಮೂರ್ತಿ, ಎನ್‌.ಶಿಲ್ಪ ಅವರಿಗೆ ಮಾನವ ಸಂಪನ್ಮೂಲ ಕ್ಷೇತ್ರದ ಯುವ ಸಾಧಕ ಪ್ರಶಸ್ತಿ- 2024 ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಲೀಕರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್‌, ಹಿರಿಯ ವಕೀಲ ಎಸ್‌.ಎನ್‌.ಮೂರ್ತಿ, ನಿರಾತಂಕ ಟ್ರಸ್ಟ್‌ ಕಾರ್ಯದರ್ಶಿ ಎಂ.ಎಚ್‌.ರಮೇಶ್‌ ಉಪಸ್ಥಿತರಿದ್ದರು.

Share this article