ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಶಿಕ್ಷಣ ಪರಿಚಯ
ಪುಸ್ತಕ, ಬ್ಯಾಗ್ ಹಾಗೂ ಹೋಂ ವರ್ಕ್ ನ ಹೊರೆ ಇಲ್ಲದ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಶಿಕ್ಷಣವನ್ನು ಕಡೂರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಲಕ್ಷ್ಮೀಶ ಪಿ.ಶಿರಹಟ್ಟಿ ತಿಳಿಸಿದರು.ವಿಜಯಲಕ್ಷ್ಮಿ ನಗರದ ಜ್ಞಾನ ಗಂಗೋತ್ರಿ ಪಿಯು ಕಾಲೇಜಿನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಬ್ರಿಟನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತಿಳುವಳಿಕೆ ಒಪ್ಪಂದದೊಂದಿಗೆ (ಎಂಒಯು- ಮೆಮೊರಾಂಡಮ್ಸ್ ಆಫ್ ಅಂಡರ್ ಸ್ಟಾಂ ಡಿಂಗ್) ರೈಟ್ ಫೇತ್, ರೈಟ್ ಎಜುಕೇಷನ್ ಎನ್ನುವ ಧ್ಯೇಯದೊಂದಿಗೆ ಇಡೀ ಜಿಲ್ಲೆಯಲ್ಲಿಯೇ ಇದು ವಿನೂತನ ಪ್ರಯೋಗ. ತಾಲೂಕಿನ ಯಗಟಿ ರಸ್ತೆಯ ಜ್ಞಾನಗಂಗೋತ್ರಿ ಶಿಕ್ಷಣ ಸಂಸ್ಥೆ ಅಕ್ಷರ ಜೈನ್ ಟೆಕ್ನೋ ಸ್ಕೂಲ್ನಲ್ಲಿ ಈ ತಂತ್ರಜ್ಞಾನದ ಶಿಕ್ಷಣ ವ್ಯವಸ್ಥೆ ಅಳವಡಿಸಲಾಗುವುದು ಎಂದು ವಿವರಿಸಿದರು. ಈಗಾಗಲೇ ಅಕ್ಷರ ಜೈನ್ ಟೆಕ್ನೋ ಸ್ಕೂಲ್ನಲ್ಲಿ 5 ನೇ ತರಗತಿವರೆಗೆ ರಾಜ್ಯ ಸರ್ಕಾರದ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಣ ನೀಡಲಾಗುತ್ತಿದೆ. 2026-27ನೇ ಸಾಲಿಗೆ ಸಿಬಿಎಸ್ಇ ಪಠ್ಯಕ್ರಮದ ಜತೆ ಹೊಸ ಪದ್ಧತಿ ಜಾರಿ ಮಾಡಲಾಗುವುದು. ಇದರಿಂದ ಮಕ್ಕಳಲ್ಲಿ ಊಹಾ ಶಕ್ತಿ, ಬುದ್ಧಿ ಬಲ, ಯೋಚನಾ ಲಹರಿ ಪ್ರೇರೇಪಿಸುವ ಶಿಕ್ಷಣ ಆಗಲಿದೆ ಎಂದು ಮಾಹಿತಿ ನೀಡಿದರು. ಇದೇ ಶನಿವಾರ ಮಾ.14ರಂದು ಸಂಜೆ ನಡೆಯುವ ಸಮ್ಯಜ್ಞಾನ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸುವರು. ಡಿಡಿಪಿಐ ತಿಮ್ಮರಾಜು ಡಿಜಿಟಲ್ ಕೊಠಡಿಗಳ ಉದ್ಘಾಟನೆ ನೆರವೇರಿಸುವರು. ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ವಿಷನ್ ಅಂಡ್ ಮಿಷನ್ ಸ್ಟೇಟ್ಮೆಂಟ್ ಅನಾವರಣಗೊಳಿಸುವರು. ಚಿತ್ರನಟ ಕಡೂರು ಧರ್ಮಣ್ಣ, ಶಾಲೆ ಕಾನೂನು ಸಲಹೆಗಾರ ಪ್ರಸನ್ನ ಗೋತೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. -- ಬಾಕ್ಸ್ ಸುದ್ದಿ -- ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ್ದ ನಲಿ-ಕಲಿ ಯೋಜನೆ ಅಧ್ಯಯನ ಮಾಡಿ ಸಿಂಗಾಪುರದ ಶಿಕ್ಷಣ ವ್ಯವಸ್ಥೆಯಲ್ಲಿ ಫೆಲಿಸಿಟೇಟಿಂಗ್ ಎಜುಕೇಷನ್ ಎಂದು ಪರಿಗಣಿಸಿ ಅಳವಡಿಸಲಾಗಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಶ್ರೀಮಂತ, ಬಡವ ಮತ್ತು ಮಧ್ಯಮ ವರ್ಗದವರು ಎಂದು ಶ್ರೇಣೀಕೃತ ಗೊಂಡಿದೆ.
ಲಕ್ಷ್ಮೀಶ ಪಿ.ಶಿರಹಟ್ಟಿ.11ಕೆಕೆಡಿಯು2.ಲಕ್ಷ್ಮೀಶ ಪಿ.ಶಿರಹಟ್ಟಿ.