ಹೊಸದುರ್ಗ: ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನೆ ಬಳಸುವ ಮೂಲಕ ಅಯೋಡಿನ್ ಕೊರತೆಯ ನ್ಯೂನ್ಯತೆಗಳನ್ನು ತಡೆಗಟ್ಟಿರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್.ರಾಘವೇಂದ್ರ ಪ್ರಸಾದ್ ಕರೆ ನೀಡಿದರು.
ಅಯೋಡಿನ್ ನ್ಯೂನ್ಯತೆಯಿಂದ ಮಕ್ಕಳಲ್ಲಿ ಬುದ್ಧಿ ಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆಯಂತಹ ಸಮಸ್ಯೆಗಳು, ವಯಸ್ಕರಲ್ಲಿ ನಿಶ್ಯಕ್ತಿ, ಕಾರ್ಯನಿರ್ವಹಣೆಯ ವೈಫಲ್ಯ ಮತ್ತು ಗಳಗಂಡ ರೋಗ ಹಾಗೂ ಗರ್ಭಿಣಿಯರಲ್ಲಿ ಗರ್ಭಪಾತ ಮತ್ತು ಸತ್ತು ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಳವಾಗುವ ಸಮಸ್ಯೆಗಳುಂಟಾಗುತ್ತವೆ ಎಂದು ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೆಂದ್ರ ಪಾಟೀಲ್ ಮಾತನಾಡಿ, ಅಯೋಡಿನ್ ಮಾನವನಿಗೆ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದ್ದು, ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದ್ದು, ಸಮುದ್ರದಲ್ಲಿನ ಆಹಾರಗಳಾದ ಮೀನು, ಸೀಗಡಿ ಮತ್ತು ಸಮುದ್ರ ಕಳೆಗಳಲ್ಲಿ ಹೇರಳವಾಗಿರುತ್ತದೆ. ಇದನ್ನು ಮನಗಂಡು ಎಲ್ಲಾ ಸಾರ್ವಜನಿಕರಿಗೆ ಅಯೋಡಿನ್ ಕೋರತೆ ನೀಗಿಸಲು ಅಯೋಡಿನ್ ಉಪ್ಪನ್ನು ಪರಿಚಯಿಸಲಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಆರೋಗ್ಯ ಸುರಕ್ಷಿತಾಧಿಕಾರಿ ಆಶಾ, ಸಮುದಾಯ ಆರೋಗ್ಯಾಧಿಕಾರಿ ಶಶಿಧರ್ ಮತ್ತಿತರರಿದ್ದರು.ಕಾರ್ಯಕ್ರಮದಲ್ಲಿ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ಸಪ್ತಾಹ-2024 ರ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು, ಚಂದನ ಪ್ರಥಮ, ಅಮೂಲ್ಯ ದ್ವಿತೀಯ ಮತ್ತು ಚಿನ್ಮಯ್ ತೃತೀಯ ಬಹುಮಾನ ಪಡೆದರು.