ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಸಿಪಿಐ ನಾಗರಾಜ ಮಾಡಳ್ಳಿ

KannadaprabhaNewsNetwork |  
Published : Aug 27, 2024, 01:37 AM IST
೨೬ಎಸ್.ಎಚ್.ಟಿ೧ಕೆಶಿರಹಟ್ಟಿ ಪಟ್ಟಣದ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿದರು. | Kannada Prabha

ಸಾರಾಂಶ

ಗಣೇಶ ಹಬ್ಬವನ್ನು ಶಾಂತಿ-ಶಿಸ್ತಿನಿಂದ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ನಾಗರಾಜ ಮಾಡಳ್ಳಿ ಎಚ್ಚರಿಸಿದರು.

ಶಿರಹಟ್ಟಿ: ಪಟ್ಟಣ ಕೋಮು ಸೌಹಾರ್ಧ ಮತ್ತು ಭಾವೈಕ್ಯತೆಯ ನಾಡು. ಈ ಪಟ್ಟಣದಲ್ಲಿ ಗೌರಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಗಣೇಶ ಹಬ್ಬವನ್ನು ಶಾಂತಿ-ಶಿಸ್ತಿನಿಂದ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ನಾಗರಾಜ ಮಾಡಳ್ಳಿ ಎಚ್ಚರಿಸಿದರು.ಸೋಮವಾರ ಪಟ್ಟಣದ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ತಾಲೂಕು ಆಡಳಿತ ಪೊಲೀಸ್ ಇಲಾಖೆಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಮಾಡುವ ಪ್ರಯುಕ್ತ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಮಂಡಳಿಯ ಸದಸ್ಯರು ಕಾರ್ಯಕರ್ತರ ಹೆಸರು ಹಾಗೂ ಫೋನ್ ನಂಬರ್‌ಗಳನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದು ಸಲಹೆ ನೀಡಿದರು.

ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಬೇಕು. ಕನಿಷ್ಠ ಶಬ್ದದ ಧ್ವನಿ ವರ್ಧಕಗಳನ್ನು ಬಳಸಿ. ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉತ್ತಮ. ಹೊಸ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಟ್ರಾಫಿಕ್ ತೊಂದರೆ ಮಾಡಬೇಡಿ. ಶಾಂತಿ ಸುವ್ಯವಸ್ಥೆಯಿಂದ ಗೌರಿ ಗಣೇಶ ಹಬ್ಬ ಆಚರಿಸಬೇಕು. ಹಬ್ಬಗಳು ವಿಶ್ವಾಸ, ಬಾಂಧವ್ಯ ಪ್ರೀತಿಯನ್ನು ಕೆಡಿಸುವ ರೀತಿಯಲ್ಲಿ ನಡೆಯಬಾರದು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪೆಂಡಾಲ್ ಹಾಕಲು ಕಡ್ಡಾಯವಾಗಿ ಪಟ್ಟಣ ಪಂಚಾಯತ್‌, ಹೆಸ್ಕಾಂ, ಅಗ್ನಿಶಾಮಕ ಠಾಣೆಯಿಂದ ಅನುಮತಿ ಪಡೆಯಬೇಕು. ಅಂದರೆ ಮಾತ್ರ ಪೊಲೀಸ್ ಇಲಾಖೆಯಿಂದ ದ್ವನಿವರ್ಧಕಕ್ಕೆ ಪರವಾನಗಿ ನೀಡಲಾಗುವುದು. ಮಂಡಳಿಯವರು ಪ್ರತಿ ದಿನ ನಡೆಯಲಿರುವ ಕಾರ್ಯಕ್ರಮ, ಸಭೆ, ಮೆರವಣಿಗೆ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಜನತೆ ಓಡಾಡುವ ಸ್ಥಳಗಳಲ್ಲಿ ಮಂಟಪ, ಶಾಮಿಯಾನ ಹಾಕಬಾರದು ಎಂದು ತಿಳಿಸಿದರು.

ಹಬ್ಬದಲ್ಲಿ ಯಾವುದೇ ರೀತಿಯ ಡಿಜೆ ಹಚ್ಚಲು ಅವಕಾಶ ಇರುವುದಿಲ್ಲ. ಮೆರವಣಿಗೆಯಲ್ಲಿ ಕಲಾವಿದರನ್ನು ಕರೆಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲು ಸೂಚನೆ ನೀಡಿದರು.

ಕಾರ್ಯಕ್ರಮದ ಬಗ್ಗೆ ಮತ್ತು ಪಾಲ್ಗೊಳ್ಳಲಿರುವ ಅತಿಥಿ ಮಹೋದಯರ ಬಗ್ಗೆ ಮಾಹಿತಿ ನೀಡಬೇಕು. ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗದ ವಿವರ ನೀಡಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ವಿಸರ್ಜನೆಗೆ ಮೊದಲು ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು ಎಂದು ಸೂಚನೆ ನೀಡಿದರು.

ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಕಾನೂನು ಸುವ್ಯವಸ್ಥೆಗೆ ಅಡೆತಡೆ ಆಗದಂತೆ ಶಾಂತಿಯುತವಾಗಿ ಹಬ್ಬ ಆಚರಣೆಗೆ ಮುಂದಾಗಬೇಕು. ಕಾನೂನು ಪರಿಮಿತಿಯಲ್ಲಿ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಹಬ್ಬ ಆಚರಣೆಗೆ ಮುಂದಾಗಬೇಕು. ಡಿಜೆ ಹಚ್ಚುವ ನೆಪದಲ್ಲಿ ಮತ್ತು ಅದರ ಖುಷಿಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯಬಾರದು ಎಂದು ಸೂಚನೆ ನೀಡಿದರು.

ಪ್ರತಿ ವರ್ಷದಂತೆ ಶಾಂತಿ ಸೌಹಾರ್ದದಿಂದ ಗಣೇಶ ಹಬ್ಬವನ್ನು ಆಚರಿಸಬೇಕು. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಈಗಾಗಲೇ ಎಲ್ಲ ಕಡೆ ಶಾಂತಿ ಸಭೆ ನಡೆಸಲಾಗಿದೆ. ಈ ಬಾರಿ ಯಾವುದೇ ರೀತಿಯ ಅನಾನುಕೂಲವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಿದೆ ಎಂದು ತಿಳಿಸಿದರು.

ಪಿಎಸ್‌ಐ ಶಿವಾನಂದ ಲಮಾಣಿ, ಶೇಖರ್ ಕಡಬಿನ, ಚಾಂದಸಾಬ ಮುಳಗುಂದ, ಮುತ್ತು ಬಾವಿಮನಿ, ಹೊನ್ನಪ್ಪ ಶಿರಹಟ್ಟಿ, ಮಾಬುಸಾಬ ಲಕ್ಷ್ಮೇಶ್ವರ, ದೇವಪ್ಪ ಆಡೂರ, ಅಸರಹತ್ ಢಾಲಾಯತ, ರಫೀಕ ಆದ್ರಳ್ಳಿ, ಪರಮೇಶ ಗುಡಿಮನಿ ಹಾಗೂ ಗಣೇಶ ಕಮಿಟಿಯವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ