20 ದಿನದಲ್ಲಿ ಕೆರೆಗಳಿಗೆ ತೋಟಿ ಏತ ನೀರಾವರಿ ನೀರು: ಶಾಸಕ ಸಿ.ಎನ್.ಬಾಲಕೃಷ್ಣ

KannadaprabhaNewsNetwork | Published : Oct 7, 2024 1:37 AM

ಸಾರಾಂಶ

ಸುಮಾರು 70 ಕೋಟಿ ರು. ವೆಚ್ಚದ ತೋಟಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ 20 ದಿನಗಳಲ್ಲಿ ಮೊದಲು ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು. ನುಗ್ಗೇಹಳ್ಳಿಯಲ್ಲಿ ತುಂತುರು ನೀರಾವರಿ ಪೈಪ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ತುಂತುರು ನೀರಾವರಿ ಪೈಪ್‌ ವಿತರಣೆಗೆ ಚಾಲನೆ

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಸುಮಾರು 70 ಕೋಟಿ ರು. ವೆಚ್ಚದ ತೋಟಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಕೆರೆಗಳಿಗೆ 20 ದಿನಗಳಲ್ಲಿ ಮೊದಲು ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಭಾನುವಾರ ತುಂತುರು ನೀರಾವರಿ ಪೈಪ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಅಕ್ಕನಹಳ್ಳಿ, ಜಿನ್ನೇನಹಳ್ಳಿ, ಬೆಳಗಿಹಳ್ಳಿ, ಮಟ್ಟನವಿಲೆ, ಜಂಬೂರು, ಗೌಡಗೆರೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತೋಟಿಕೆರೆ, ಮಾದಲಗೆರೆ, ಬೆಳಗಿಹಳ್ಳಿ, ಮೇಟಿಕೆರೆ, ಕಟಗಿಹಳ್ಳಿ, ಅಕ್ಕನಹಳ್ಳಿ, ಸೋಸಲಗೆರೆ, ಬದ್ದಿಕೆರೆ, ಹೆಬ್ಬಳಲು, ಬಾಣನಕೆರೆ, ಸಮುದ್ರಹಳ್ಳಿ, ಮುದ್ದನಹಳ್ಳಿ, ಹುಲಿಕೆರೆ, ಅತ್ತಿಹಳ್ಳಿ, ಕಗ್ಗೆರೆ, ಕಾವಲು ಹೊಸೂರು, ನರಸಿಂಹರಾಜಪುರ, ಬಳ್ಳಾರಿ ಕಾವಲು, ಚಿಕ್ಕೋನಹಳ್ಳಿ, ರಾಜಪುರ, ಮಾವಿನಹಳ್ಳಿ, ಮಟ್ಟನವಿಲೆ, ದೊಡ್ಡೇರಿ, ಎಂ. ಹೊನ್ನೇನಹಳ್ಳಿ, ಗೂಳಿ ಹೊನ್ನೇನಹಳ್ಳಿ, ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಿ ತೆಂಗು ಬೆಳೆ ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಂತೆ ಶಿವರ ನೀರಾವರಿ ಯೋಜನೆಗೆ 5 ಪೈಪ್‌ಗಳ ಜಾಗದ ಸಮಸ್ಯೆ ಇದೆ. ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಲಾಗುವುದು. ತೋಟವನ್ನು ಐದು ನೇಗಿಲು ಟ್ರ್ಯಾಕ್ಟರ್ ಉಳುಮೆ ಮಾಡಬೇಡಿ. ಇದರಿಂದ ಬೇರುಗಳು ಹರಿಯುತ್ತವೆ. 9 ಹಲ್ಲಿನ ಕಲ್ಟಿವೇಟರ್ ಉಪಯೋಗಿಸಿ ಎಂದು ತಿಳಿಸಿದರು.

ತಾಲೂಕಿನಲ್ಲಿ 600 ತುಂತುರು ನೀರಾವರಿ ಘಟಕಗಳ ಬೇಡಿಕೆ ಇದೆ. ಒಂದು ಯೂನಿಟ್ ಸ್ಪಿಂಕ್ಲರ್ ಸೆಟ್ ಬೆಲೆ 23,525 ರೈತರ ವಂತಿಕೆ 4139 ಸಹಾಯಧನ 19420 ರು. ಇರುತ್ತದೆ. ಇನ್ನೂ ಹೆಚ್ಚು ರೈತರಿಗೆ ಸ್ಪಿಂಕ್ಲರ್ ಸೆಟ್‌ಗಳನ್ನು ಕೊಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಹಾಯಕ ಕೃಷಿ ಅಧಿಕಾರಿ ಮೋಹನ್ ಮಾತನಾಡಿ, ಎಣ್ಣೆ ಗಾಣ, ರಾಗಿ ಹಿಟ್ಟು, ಮೌಲ್ಯವರ್ಧನೆ ಮಾರಾಟ ಹಾಗೂ ಬೇಕರಿ ಉತ್ಪನ್ನ ತಯಾರು ಮಾಡುವವರಿಗೆ ಸರ್ಕಾರದಿಂದ 50% ಸಹಾಯಧನವಿದೆ. ಆಸಕ್ತಿ ಇರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಕೃಷಿ ಅಧಿಕಾರಿ ಜೀ.ವಿ. ದಿನೇಶ್, ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಟ್ಟಲ್ ಕುಮಾರ್, ಮುಖಂಡರಾದ ತೋಟಿ ನಾಗರಾಜ್, ಬಿ.ಆರ್. ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಯುವ ಮುಖಂಡ ಹುಲಿಕೆರೆ ಎಚ್.ಪಿ.ಸಂಪತ್ ಕುಮಾರ್, ಕೃಪಾ ಶಂಕರ್, ಸುರೇಶ್, ರಂಗಸ್ವಾಮಿ, ಶಂಕರ್, ಅಕ್ಕಿ ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೊಪ್ಪಲು ಮಂಜುನಾಥ್, ಹೊನ್ನೇಗೌಡ, ಸಮುದ್ರಳ್ಳಿ ರಾಮಚಂದ್ರು, ಯಲ್ಲಪ್ಪ, ಜಾವೇದ್, ಅಪ್ಪಾಜಿ, ಗುಂಡಣ್ಣ, ಎಚ್‌.ಎಂ.ರಮೇಶ್ ಹಾಜರಿದ್ದರು.

Share this article