ಹೊಂಡದಲ್ಲಿ ರಸ್ತೆಯೋ, ರಸ್ತೆಯಲ್ಲಿ ಹೊಂಡವೋ?

KannadaprabhaNewsNetwork |  
Published : May 10, 2026, 02:30 AM IST
ನಂದಿಗದ್ದೆ ಯಲ್ಲಿ ನಡು ರಸ್ತೆಯಲ್ಲಿ ಕಳೆದ ವರ್ಷ ಬಿದ್ದ ಹೊಂಡ | Kannada Prabha

ಸಾರಾಂಶ

ತಾಲೂಕಿನ ಗುಂದ-ಉಳವಿ ರಸ್ತೆಯ ಕಾನೇರಿಯಿಂದ ಗುಂದದ ಉಳವಿ ಕ್ರಾಸ್‌ವರೆಗೆ ರಸ್ತೆ ಹದಗೆಟ್ಟಿದ್ದು, ಹೊಂಡದಲ್ಲಿ ರಸ್ತೆ ಇದೆಯೋ, ರಸ್ತೆಯಲ್ಲಿ ಹೊಂಡವಿದೆವೋ ತಿಳಿಯದಂತಾಗಿದೆ.

ಕಾನೇರಿಯಿಂದ ಗುಂದದ ಉಳವಿ ಕ್ರಾಸ್ ವರೆಗೆ ಹದಗೆಟ್ಟ ರಸ್ತೆ

ಎರಡು ವರ್ಷವಾದರೂ ಮುಗಿಯದ 12 ಕಿಮೀ ಕಾಮಗಾರಿಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಿನ ಗುಂದ-ಉಳವಿ ರಸ್ತೆಯ ಕಾನೇರಿಯಿಂದ ಗುಂದದ ಉಳವಿ ಕ್ರಾಸ್‌ವರೆಗೆ ರಸ್ತೆ ಹದಗೆಟ್ಟಿದ್ದು, ಹೊಂಡದಲ್ಲಿ ರಸ್ತೆ ಇದೆಯೋ, ರಸ್ತೆಯಲ್ಲಿ ಹೊಂಡವಿದೆವೋ ತಿಳಿಯದಂತಾಗಿದೆ. ಕಳೆದ 3 ವರ್ಷಗಳಿಂದ ಜನರು ಈ ರಸ್ತೆಯಲ್ಲಿ ಓಡಾಡಿ ಸಾಕಪ್ಪ ಸಾಕು ಈ ರಸ್ತೆಯ ಸಹವಾಸ ಎನ್ನುತ್ತಿದ್ದಾರೆ. ಉತ್ತಮ ರಸ್ತೆ ಮಾಡುವಲ್ಲಿ ಕಾಳಜಿ ತೋರದ ಜನಪ್ರತಿನಿಧಿಗಳಿಗೆ ಶಾಪ ಹಾಕದ ದಿನಗಳಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ನಂದಿಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಶಾಸಕರಿಗೆ ಹೆಚ್ಚಿನ ಬೆಂಬಲ ನೀಡಿದ್ದರೂ ಅಭಿವೃದ್ಧಿಯಲ್ಲಿ ಕಡೆಗಣಿಸಲಾಗಿದೆ ಎಂಬ ನೋವು ಇಲ್ಲಿಯ ಮತದಾರರನ್ನು ಕಾಡುತ್ತಿದೆ. ಇದಕ್ಕೆಲ್ಲ ಲೋಕೋಪಯೋಗಿ ಇಲಾಖೆಯ ನಿಷ್ಕಾಳಜಿಯೇ ಕಾರಣವಾಗಿದೆ. ಈ ರಸ್ತೆ ಸುಧಾರಣೆ ಕಾಮಗಾರಿ ಏಪ್ರಿಲ್ 2025ರಲ್ಲೇ ಶುರುವಾಗಿತ್ತು. ಆದರೆ, ಗುತ್ತಿಗೆದಾರನ ನಿಧಾನಗತಿಯ ಹಾಗೂ ನಿರ್ಲಕ್ಷ್ಯದ ಕಾರಣದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಇಂತಹ ರಸ್ತೆಯಲ್ಲಿ ಸಂಚರಿಸಿ ಸ್ಥಳೀಯರು, ಪ್ರವಾಸಿಗರು ಹೈರಾಣಾಗಿದ್ದಾರೆ.

ಕಾನೇರಿಯಿಂದ-ಹೆಣಕೋಳ ಕ್ರಾಸ್‌ ವರೆಗೆ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹9 ಕೋಟಿ ಮಂಜೂರು ಮಾಡಲಾಗಿತ್ತು. ಆದರೆ, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಎರಡು ವರ್ಷವಾದರೂ 12 ಕಿಮೀ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ. ಮುಂದೆ ಮಳೆಗಾಲ ಆರಂಭವಾಗುತ್ತದೆ. ಅಷ್ಟರೊಳಗೆ ಕಾನೇರಿಯಿಂದ ಗುಂದ ಕ್ರಾಸ್ ತನಕ ರಸ್ತೆ ಮಾಡಿಕೊಡಿ ಎಂದು ನಂದಿಗದ್ದೆ ಗ್ರಾಪಂ ಜನತೆ ಒತ್ತಾಯಿಸಿದ್ದಾರೆ.

ಈಗಾಗಲೇ ಹೆಣಕೊಳ ಕ್ರಾಸ್‌ನಿಂದ ರಸ್ತೆ ಕೆಲಸ ಪ್ರಾರಂಭಿಸಿ ಸುಮಾರು 7 ಕಿಮೀ ಕೆಲಸ ಮುಗಿದಿದ್ದು, ಇನ್ನೂ 5 ಕಿಮೀ ಕೆಲಸ ಮಾಡಬೇಕಿದೆ. ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ಕೆಲಸ ಪ್ರಾರಂಭಿಸದೆ ಹೆಣಕೊಳ ಕ್ರಾಸ್‌ನಿಂದ 2ಕಿಮೀ ರಸ್ತೆಗೆ ಕಡೀಕರಣ, ಡಾಂಬರೀಕರಣ ಮಾಡಲು ಒಂದು ವರ್ಷ ಗುತ್ತಿಗೆದಾರ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಶಾಸಕರ ಒತ್ತಾಯದ ಮೇರೆಗೆ ಗುತ್ತಿಗೆದಾರ ಭಾಗವತಿ ಕಡೆ ಕೆಲಸ ಮಾಡಿಸುತ್ತಿದ್ದಾನೆ. ಅಲ್ಲಿ ಕಾಮಗಾರಿ ಮುಗಿದ ತಕ್ಷಣ ಗುಂದ ರಸ್ತೆ ಮಳೆಗಾಲದ ಮೊದಲೇ ಮುಗಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಧಿಕಾರಿಗಳ ಸೂಚನೆಯಂತೆ ಗುತ್ತಿಗೆದಾರ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದಕ್ಕೆಲ್ಲ ಶಾಸಕರೇ ಉತ್ತರಿಸಬೇಕು ಎನ್ನುವುದು ಈ ಭಾಗದ ಜನರ ಮಾತಾಗಿದೆ.

ಉಳವಿ ನಂದಿಗದ್ದೆ ಗುಂದ ಭಾಗದಲ್ಲಿ ರಸ್ತೆಗಳ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದ್ದು ಶಾಸಕರು ಈ ಬಗ್ಗೆ ಕಾಳಜಿ ವಹಿಸಿ ಮಂಜೂರಾದ ಕೆಲಸ‌ ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಹೇಳಬೇಕು. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆಯ ಹಿರಿಯ ಅಭಿಯಂತ ಬಸವರಾಜ್ ಕೂಡಲೇ ಹಾಳಾದ ರಸ್ತೆ ಸರಿಪಡಿಸಲು ಗುತ್ತಿಗೆದಾರರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಚ್ಛ ಕುಶಾಲನಗರ ಕಾರ್ಯಕ್ರಮ ಮಾದರಿ: ಟಿ.ಕೆ.ರಾಮಕೃಷ್ಣ ಮೆಚ್ಚುಗೆ
ಹಿರಿಯ ಪತ್ರಕರ್ತ ಚಿ.ನಾ.ಸೋಮೇಶ್‌ಗೆ ಸನ್ಮಾನ