ಕನ್ನಡಪ್ರಭ ವಾರ್ತೆ ರಾಮದುರ್ಗ
ಜೀವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವ ಇಚ್ಛಾಶಕ್ತಿ ಆತ್ಮ ಬಲ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲ್ಲಿ ಯಶಸ್ಸು ದೊರೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಸಾಧಿಸುವ ಮೊದಲೆ ಕೈಚೆಲ್ಲಿ ಕುಳಿತುಕೊಳ್ಳಬಾರದು ಎಂದು ಸವದತ್ತಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.ತಾಲೂಕಿನ ಸುರೇಬಾನ ಗ್ರಾಮದ ಪಾರ್ವತಿ ಸುಬ್ರಾಯಪ್ಪ ಮೋಟೆ ವೇದಿಕೆಯಲ್ಲಿ ಅವರಾದಿ ಶಿವಪೇಟೆಯ ಓಂ ಶಿವ ಮೇಳ ತಂಡ ಆಯೋಜಿಸಿದ್ದ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆ ಎಲ್ಲರಿಗೂ ಒಲಿಯುವ ವಿದ್ಯೆ ಅಲ್ಲ. ಅದು ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ ಎಂದು ಹೇಳಿದರು.
ಪ್ರಸಕ್ತ ಮೊಬೈಲ್ ಯುಗದಿಂದ ಜಾನಪದ ಕಲೆ ನಸಿಶಿ ಹೋಗುತ್ತಿದೆ. ಇದರ ಮಧ್ಯೆ ಎಲ್ಲಿಯೋ ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರು ಬೆಳಗಾಗುವಷ್ಟರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರೀಯರಾಗುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಪಿ.ಎಲ್. ಮಿಸಾಳೆ ಮಾತನಾಡಿ, ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ ಸಂಭ್ರಮ ಎಂಬ ಹೊಸ ಅಧ್ಯಾಯ ಜಾರಿಗೆ ತರುವುದರಿಂದ ಅಳಿದು ಹೋಗುತ್ತಿರುವ ಜಾನಪದ ಕಲೆಗೆ ಉತ್ತೇಜನ ನೀಡಿದಂತಾಗುತ್ತದೆ. ಇದರಿಂದ ಹೊಸ ಪೀಳಿಗೆಗೆ ಮತ್ತಷ್ಟು ಜಾನಪದ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅವರಾದಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಎಸ್. ಗುಡದನ್ನವರ ಉಪನ್ಯಾಸ ನೀಡಿದರು. ಸುರೇಬಾನ ಗ್ರಾಪಂ ಅಧ್ಯಕ್ಷೆ ನಾಗರತ್ನ ಜಡಿ, ಉಪಾಧ್ಯಕ್ಷೆ ಬಸವ್ವ ಭಜಂತ್ರಿ, ನಿಂಗಪ್ಪ ಮೆಳ್ಳಿಕೇರಿ, ಶಂಕ್ರಯ್ಯಸ್ವಾಮಿ ಹಿರೇಮಠ, ಬಸವಂತಪ್ಪ ಮದಕಟ್ಟಿ, ಶ್ರೀಶೈಲ ಗಂಗರಗಿ, ಸರಸ್ವತಿ ಬೀಳಗಿ, ಕಾಶಪ್ಪ ಕಾರಜೋಳ, ಫಕೀರಪ್ಪ ಹಾವೋಜಿ, ಕರಿಯಪ್ಪ ವಡ್ಡರ, ಮರಿಯಪ್ಪ ದೊಡಮನಿ, ಕುಮಾರ ವಡ್ಡರ, ಭೀಮಣ್ಣ ಭಾವಿಕಟ್ಟಿ ಸೇರಿದಂತೆ ಅನೇಕರು ಇದ್ದರು.ರಾಮದುರ್ಗದ ಕುಬೇರ ಗರಡಿಮನಿ, ರೋಣ ತಾಲೂಕಿನ ಕೊತಬಾಳದ ಶಂಕ್ರಣ್ಣ ಸಂಕಣ್ಣವರ, ಧಾರವಾಡದ ಇಮಾಮಸಾಬ ವಲ್ಲೆಪ್ಪನವರ, ಗದಗಿನ ಯಲ್ಲಪ್ಪ ಡೊಕ್ಕನ್ನವರ, ಸುರೇಬಾನದ ಶಿವಾನಂದ ಶಿರೂರ, ಮಾರುತಿ ಪ್ಯಾಟಿ, ಚೆನ್ನಾಪೂರದ ಮೈಲಾರಪ್ಪ ಗೊಂದೆಪ್ಪನವರಿಗೆ ಜಾನಪದ ಶಿವೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾರುತಿ ಪೂಜಾರ ಸ್ವಾಗತಿಸಿದರು. ಎಂ.ಎನ್. ಗವನ್ನವರ ಕಾರ್ಯಕ್ರಮ ನಿರೂಪಿಸಿದರು. ಆನಂದ ಹಕ್ಕೆನ್ನವರ ವಂದಿಸಿದರು.