ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ನಗರನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಸಂಸದ ಶ್ರೇಯಸ್ ಎಂ.ಪಟೇಲ್ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಕುರಿತು ಗಮನ ಸೆಳೆದ ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿ, ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಜನರ ನಂಬಿಕೆಗೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ."ನಗರನಹಳ್ಳಿ ಪ್ರೌಢಶಾಲೆಯಲ್ಲಿ ೧೨೬ ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು! ಗ್ರಾಮಸ್ಥರ ಅಳಲು ", ಸಂಸದ ಶ್ರೇಯಸ್ಗೆ ಮನವಿ ವಿಡಿಯೋ ವೈರಲ್ ಎಂಬ ಶೀರ್ಷಿಕೆಯಡಿ ಡಿ.೨೫ರ ಬುಧವಾರದ ಸುದ್ದಿಯನ್ನು ಓದಿದ ಸಂಸದರು ಅಂದೇ ಬಿಇಒ ಸೋಮಲಿಂಗೇಗೌಡ ಅವರಿಗೆ ಗಮನಹರಿಸುವಂತೆ ಸುಚಿಸಿದ್ದರು ಎನ್ನಲಾಗಿದೆ. ಶನಿವಾರ ಸಂಸದ ಶ್ರೇಯಸ್ ಎಂ.ಪಟೇಲ್ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ೮ ಶಿಕ್ಷಕರ ಇರಬೇಕಿದ್ದ ಶಾಲೆಯಲ್ಲಿ ಕನ್ನಡ, ಪಿಸಿಎಂಬಿ ಹಾಗೂ ಚಿತ್ರಕಲೆ ಶಿಕ್ಷಕರು ಹೊರತಾಗಿ ಉಳಿಕೆ ಐದು ಶಿಕ್ಷಕರಿಲ್ಲವೆಂದು ತಿಳಿದುಬಂದಿದೆ. ಇಬ್ಬರು ನಿಯೋಜಿತ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರು ಕಳೆದ ೧೫ ದಿನಗಳಿಂದ ಶಾಲೆಗೆ ಬಂದಿಲ್ಲ, ಜತೆಗೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಲ್ಲ, ಆದರೆ ಬಿಇಒ ಅವರು ಬುಧವಾರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶಿಕ್ಷಕರು ಗೈರುಹಾಜರಿ ಕುರಿತು ಪ್ರಶ್ನಿಸದೇ ಸಹಿ ಮಾಡಿ ತೆರಳಿದ್ದಾರೆ, ಇದನ್ನು ಗಮನಿಸಿದ ಸಂಸದರು ಕರ್ತವ್ಯ ಲೋಪ ಕುರಿತು ಡಿಡಿಪಿಐ ಅವರ ಗಮನಕ್ಕೆ ತಂದಿದ್ದಾರೆ.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ೧೨೬ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ೧೦ನೇ ತರಗತಿಯಲ್ಲಿ ೫೨ ವಿದ್ಯಾರ್ಥಿಗಳು, ೯ನೇ ತರಗತಿಯಲ್ಲಿ ೪೯ ವಿದ್ಯಾರ್ಥಿಗಳು ಹಾಗೂ ೮ನೇ ತರಗತಿಯಲ್ಲಿ ೨೫ ವಿದ್ಯಾರ್ಥಿಗಳು ಇದ್ದಾರೆ.ಗ್ರಾಮದ ನಿಂಗರಾಜು ಎಂಬುವರು ಮಾತನಾಡಿ, ಶಾಲೆಯ ೧೦ನೇ ತರಗತಿಯಲ್ಲಿ ೪೦ ವಿದ್ಯಾರ್ಥಿನಿಯರು ಹಾಗೂ ೧೨ ವಿದ್ಯಾರ್ಥಿಗಳು ಇದ್ದಾರೆ. ಮಹಿಳಾ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ಎನ್ನುವ ಸರ್ಕಾರದ ಘೋಷಣೆಗಳು ಪ್ರಕಟಣೆಗೆ ಮಾತ್ರ ಎಂದು ಬೇಸರ ವ್ಯಕ್ತಪಡಿಸಿ, ಗ್ರಾಮೀಣ ಪ್ರದೇಶದಲ್ಲಿ ೧೦ನೇ ತರಗತಿಯಲ್ಲಿ ಹೆಣ್ಣು ಮಕ್ಕಳು ನಾಪಾಸಾದರೇ ಪೋಷಕರು ಮದುವೆ ಮಾಡುವ ಚಿಂತನೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಕೂಡಿದ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿಕೊಳ್ಳವ ಕನಸು ಮೊಟಕಾಗುತ್ತದೆ ಎಂದು ಬೇಸರದಿಂದ ಕಾಳಜಿಯ ಮಾತುಗಳನ್ನಾಡಿದ್ದರು.
ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್, ಮುಖ್ಯ ಶಿಕ್ಷಕಿ ಲತಾ, ಮುಖಂಡರಾದ ಎಚ್.ಟಿ.ಲಕ್ಷ್ಮಣ, ಇತರರು ಇದ್ದರು.