ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಂಗಳವಾರ ಗಣೇಶ್ ಶೇಟ್ ಅವರ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಕೆಲವೊಂದಿಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಇಲ್ಲಿನ ಅಶೋಕನಗರದ ಅವರ ನಿವಾಸ, ಗಣೇಶಪೇಟೆಯ ಕೆಜಿಪಿ ಆಭರಣ ಮಳಿಗೆ, ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ಸ್ ಆ್ಯಂಡ್ ಸ್ಯಾರೀಸ್, ಅಮರಗೋಳದ ರಾಯಲ್ ರಿಟ್ಜ್ ರೆಸಾರ್ಟ್, ಹೊಸಪೇಟೆಯ ತಾರಾ ಪ್ಯಾಲೇಸ್, ಸಿಲ್ಕ್ ಸ್ಯಾರೀಸ್ ಮಳಿಗೆಗಳ ಮೇಲೆ ಈ ದಾಳಿ ನಡೆದಿದೆ.ಕೆಜಿಪಿ ಜ್ಯುವೆಲ್ಲರ್ಸ್ ಮಳಿಗೆಗೆ ಗಣೇಶ್ ಶೇಟ್ ಪುತ್ರ ಶ್ರೀಗಂಧ ಶೇಟ್ ರನ್ನು ಕರೆಸಿದ ಅಧಿಕಾರಿಗಳು, ಕೆಲ ಸಮಯ ವಿಚಾರಣೆ ನಡೆಸಿದರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ, ಬೆಳಗಾವಿ, ಗೋವಾದ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.