ಹೊಸಪೇಟೆ: ಬಳ್ಳಾರಿ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧವಾಗಿದೆ. ಕೌರವ-ಪಾಂಡವರ ನಡುವಿನ ಸೆಣಸಾಟದಲ್ಲಿ ಅರ್ಜುನನಂತಿರುವ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಜಯಭೇರಿ ಬಾರಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಕೋಟಿ ಸುಳ್ಳಿನ ಸರ್ದಾರ ಆಗಿದ್ದಾರೆ. ಬಳ್ಳಾರಿ ಭಾಗದಲ್ಲಿ ಅವರಿಗೆ ನಾವು ಮತ ನೀಡುವುದಿಲ್ಲ. ವಿಜಯನಗರ ಭಾಗದಲ್ಲೂ ಸಿನಿಮಾ ಡೈಲಾಗ್ಗಳನ್ನು ಹೇಳುತ್ತಾ ಬರುತ್ತಾರೆ. ಮೋಸಕ್ಕೆ ಬೀಳಬೇಡಿ, ಜಾಣ್ಮೆಯಿಂದ ಅವರನ್ನು ಶಾಶ್ವತವಾಗಿ ಮನೆಗೆ ಕಳುಹಿಸಿ ಎಂದರು.
ಸಂಡೂರು ಶಾಸಕ ತುಕಾರಾಂ ಹೊಸಪೇಟೆ ತಾಲೂಕಿನ ಕಮಲಾಪುರದ ಅಳಿಯರಾಗಿದ್ದಾರೆ. ಬಳ್ಳಾರಿ ಶಾಸಕ ಭರತ್ ರೆಡ್ಡಿ ಕೂಡ ಹೊಸಪೇಟೆಯ ಅಳಿಯ. ಬಳ್ಳಾರಿ-ವಿಜಯನಗರ ಅಖಂಡವಾಗಿದೆ. ನಮಗೆ ಭೇದಭಾವ ಇಲ್ಲ. ಈ ಬಾರಿ ಕಾಂಗ್ರೆಸ್ನಿಂದ ತುಕಾರಾಂ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿಯಿಂದ ಗೆದ್ದರೆ ಸೋನಿಯಾ ಗಾಂಧಿಗೆ ಉಡುಗೊರೆ ನೀಡಿದಂತಾಗುತ್ತದೆ ಎಂದರು.ಶ್ರೀರಾಮುಲು ಅವರನ್ನು ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಈ ನಾಗೇಂದ್ರ ಸೋಲಿಸಿ ಕಳುಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಈ.ತುಕಾರಾಂ ಸೋಲಿಸುತ್ತಾರೆ. ಶ್ರೀರಾಮುಲು ಶಾಶ್ವತವಾಗಿ ಮನೆಗೆ ಹೋಗುತ್ತಾರೆ ಎಂದರು.
ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಈಗಿನ ಕೇಂದ್ರ ಸರ್ಕಾರವು ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಒಂದೇ ಸರ್ಕಾರಿ ಸಂಸ್ಥಯನ್ನು ಕಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಾ. ಎನ್.ಟಿ.ಶ್ರೀನಿವಾಸ್, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತಾ ಸಿಂಗ್ ಮಾತನಾಡಿದರು. ಮುಖಂಡರಾದ ಕೆ.ಎಸ್.ಎಲ್. ಸ್ವಾಮಿ, ಬಿ.ವಿ. ಶಿವಯೋಗಿ, ವೆಂಕಟೇಶ್ ಪ್ರಸಾದ್, ಕುರಿ ಶಿವಮೂರ್ತಿ, ಸೈಯದ್ ಮೊಹಮ್ಮದ್, ಎಲ್.ಸಿದ್ದನಗೌಡ, ವಿನಾಯಕ ಶೆಟ್ಟರ್, ಖಾಜಾಹುಸೇನ್, ಬಣ್ಣದಮನೆ ಸೋಮಶೇಖರ್, ಕೆ.ಮಹೇಶ್, ಗುಜ್ಜಲ ನಿಂಗಪ್ಪ, ಡಿ. ವೆಂಕಟರಮಣ, ಕೆ. ರವಿಕುಮಾರ, ಎಚ್.ಜಿ. ಗುರುದತ್, ಎಲ್. ಸಂತೋಷ್ ಇದ್ದರು.