ಕನ್ನಡಪ್ರಭ ವಾರ್ತೆ ಮಂಡ್ಯ
ಶತಮಾನದಷ್ಟು ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತಿಗಳೇ ಅಧ್ಯಕ್ಷರಾಗುವುದು ಅಲಿಖಿತವಾದ ಸಂವಿಧಾನವಾಗಿದೆ ಎಂದು ಹಿರಿಯ ಸಾಹಿತಿ ಜಗದೀಶ್ ಕೊಪ್ಪ ಹೇಳಿದರು.ಸಾಹಿತಿಗಳೇ ಅಧ್ಯಕ್ಷರಾಗಬೇಕೆಂದು ಪರಿಷತ್ತಿನ ಬೈಲಾದಲ್ಲಿಲ್ಲ ಎನ್ನುವುದು ನಿಜ. ಆದರೆ, ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬರುತ್ತಿರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ. ಆ ಪರಂಪರೆಯನ್ನು ಮಂಡ್ಯ ನೆಲದಲ್ಲಿ ಮೊಟಕುಗೊಳಿಸುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಸಾಹಿತಿಗಳ ಕಡೆಗಣನೆ:ನಾವೇನು ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ವಿರೋಧಿಗಳೂ ಅಲ್ಲ, ಅವರನ್ನು ದ್ವೇಷಿಸುವುದೂ ಇಲ್ಲ. ತಾತ್ವಿಕವಾದ ವಿಚಾರಗಳ ಕುರಿತಂತೆ ಅವರ ನಿಲುವುಗಳನ್ನು ವಿರೋಧಿಸುತ್ತಿದ್ದೇವೆ. ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವಾಗ ಈ ಮಣ್ಣಿನ ಹಿರಿಯ ಸಾಹಿತಿಗಳಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ನಾಗತೀಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳ ಸಭೆ ಕರೆದು ಸಮಾಲೋಚನೆ ನಡೆಸಿ ಸಮ್ಮೇಳನ ಹೇಗೆ ನಡೆಸಬಹುದೆಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಕನಿಷ್ಠ ಪ್ರಜ್ಞೆಯೂ ಅಧ್ಯಕ್ಷರಿಗಿಲ್ಲ ಎಂದರೆ ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಅಧ್ಯಕ್ಷರ ಅವಿವೇಕತನದ ಪರಮಾವಧಿ:ಡಾ. ಮಹೇಶ್ ಜೋಶಿ ಪದೇ ಪದೇ ನಾನು ೬೮ ಸಾವಿರ ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ ಎಂದು ಹೇಳುತ್ತಿರುವುದು ಸರಿಯಲ್ಲ. ಈತನಿಗೆ ಮತ ಕೊಟ್ಟವರು ಮಾತ್ರ ಕನ್ನಡಿಗರು, ಉಳಿದವರು ಕನ್ನಡಿಗರಲ್ಲವೇ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಸಾಹಿತ್ಯ ಲೋಕದ ದಿಗ್ಗಜರನ್ನು ಕಡೆಗಣಿಸಿ ಸಾಹಿತ್ಯೇತರರನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಕರೆತರಲು ಮುಂದಾಗಿರುವುದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಅವಿವೇಕತನದ ಪರಮಾವಧಿ. ಸಾಹಿತ್ಯೇತರರನ್ನು ಗುರುತಿಸುವಂತೆ ಸ್ವಾಮೀಜಿ, ರಾಜಕಾರಣಿಗಳು ಸೇರಿದಂತೆ ಇತರರಿಂದ ಪತ್ರ ಬಂದಿದೆ ಎನ್ನುವುದು ಅಧ್ಯಕ್ಷರ ಆತ್ಮವಂಚನೆಯ ಮಾತುಗಳು ಎಂದು ಕಿಡಿಕಾರಿದರು.ಜೋಶಿ ಹುಚ್ಚಾಟಗಳಿಗೆಲ್ಲಾ ಸರ್ಕಾರ ಕುಣಿತ:
ಅಧ್ಯಕ್ಷ ಮಹೇಶ್ ಜೋಶಿ ಹುಚ್ಚಾಟಗಳಿಗೆಲ್ಲಾ ಸರ್ಕಾರ ಮತ್ತು ಜಿಲ್ಲಾಡಳಿತ ಕುಣಿಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ೫೦ ರಿಂದ ೬೦ ಎಕರೆ ಪ್ರದೇಶದಲ್ಲಿ ೫ ಕೋಟಿ ರು. ವೆಚ್ಚದಲ್ಲಿ ವೇದಿಕೆ ನಿರ್ಮಿಸಿ ಜಾತ್ರೆ ಮಾಡಲು ಹೊರಟಿದ್ದಾರೆ. ಹಾಗಾದರೆ ಸಾಹಿತ್ಯ ಸಮ್ಮೇಳನದ ಹೆಸರಿಗೆ ಬದಲು ಕನ್ನಡಮ್ಮನ ಸಮ್ಮೇಳನ ಮಾಡಲಿ. ಸಮ್ಮೇಳನದ ಹೆಸರಿನಲ್ಲಿ ಇವರು ದಂಧೆ ಮಾಡುತ್ತಿದ್ದಾರೆಯೇ. ಇವರಿಗೆ ಕಿವಿಹಿಂಡಿ ಜಿಲ್ಲಾಡಳಿತ ಬುದ್ಧಿ ಹೇಳಬೇಕು ಎಂದು ಹರಿಹಾಯ್ದರು.ಸಮ್ಮೇಳನಗಳಿಗೆ ಲಕ್ಷ ಲಕ್ಷ ಜನರು ಬರುತ್ತಾರೆ ಎನ್ನುವ ಇವರು ಸಮ್ಮೇಳನಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎಷ್ಟು ಸಾವಿರ ಜನರಿರುತ್ತಾರೆಂಬ ಬಗ್ಗೆ ದಾಖಲೆಗಳನ್ನು ಕೊಡಲಿ. ಕನಿಷ್ಠ ೩ ಸಾವಿರ ಜನರಿದ್ದರೆ ಅದೇ ಹೆಚ್ಚು. ಲಕ್ಷ ಲಕ್ಷ ಜನರನ್ನು ಸೇರಿಸುವುದು ಮುಖ್ಯವಲ್ಲ. ಸಮ್ಮೇಳನ ಸಾರ್ಥಕತೆ ಪಡೆಯುವುದು ಮುಖ್ಯ ಎಂದು ಕುಟುಕಿದರು.
ಸಾಹಿತಿಗಳಿಗೆ ಅಧಿಕಾರದಾಹ, ಪ್ರಶಸ್ತಿಗಳ ವ್ಯಾಮೋಹ:ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿ ಮಾಡುವ ಕೂಗೆದ್ದಿದ್ದರೂ ಸಾಹಿತಿಗಳಾದವರು ತುಟಿಬಿಚ್ಚುತ್ತಿಲ್ಲ. ಅದರ ವಿರುದ್ಧ ಚಾಟಿಯನ್ನೂ ಬೀಸುತ್ತಿಲ್ಲ. ಸರ್ಕಾರಿ ಸಂಸ್ಥೆಗಳ ಅಧಿಕಾರ ದಾಹ, ಪ್ರಶಸ್ತಿಗಳ ವ್ಯಾಮೋಹಕ್ಕೆ ಒಳಗಾಗಿರುವ ಅವರು ಮೌನವಹಿಸಿರುವುದು ದುರಂತದ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಂಡ್ಯ ಪ್ರತಿನಿಧಿಗಳು, ಸಾಹಿತಿಗಳು ನಗಣ್ಯ: ಪ್ರೊ.ಜಿ.ಟಿ.ವೀರಪ್ಪ
ಕನ್ನಡಪ್ರಭ ವಾರ್ತೆ ಮಂಡ್ಯವರ್ತಮಾನದ ತಲ್ಲಣಗಳನ್ನು ಸಾಹಿತಿಯ ಮೂಲಕ ಸರ್ಕಾರಕ್ಕೆ ತಲುಪಿಸುವುದು ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಅದನ್ನೇ ಮರೆತು ಮಹೇಶ್ ಜೋಶಿ ಏಕಪಕ್ಷೀಯವಾಗಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಟೀಕಿಸಿದರು.
ಸಾಹಿತ್ಯೇತರ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದರೆ ಮೂರು ದಿನಗಳಲ್ಲಿ ನಡೆಯುವ ವಿಚಾರಗೋಷ್ಠಿಗಳನ್ನು ಅರ್ಥೈಸಿಕೊಂಡು, ವಿಶ್ಲೇಷಿಸಿ ಅದಕ್ಕೆ ಅಂತಿಮ ರೂಪವನ್ನು ಹೇಗೆ ನೀಡಲು ಸಾಧ್ಯ. ಯಾರ ಪ್ರಚೋದನೆಗೆ ಒಳಗಾಗಿ ಡಾ.ಮಹೇಶ್ ಜೋಶಿ ಅವರು ಇಂತಹ ತೊಡಕುಗಳನ್ನು ಉಂಟುಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿಧನರಾಗಿರುವುದರಿಂದ ಆ ಜಾಗಕ್ಕೆ ಪ್ರಭಾರಿ ಅಧ್ಯಕ್ಷರ ಆಯ್ಕೆಯಾಗದೆ ಆ ಸ್ಥಾನದ ಅನುಪಸ್ಥಿತಿಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಮ್ಮೇಳನ ನಡೆಸುತ್ತಿದ್ದಾರೆ. ಸಮ್ಮೇಳನ ಸಂಪೂರ್ಣವಾಗಿ ಬೆಂಗಳೂರು ಕೇಂದ್ರಿತವಾಗಿದೆ. ಸಮ್ಮೇಳನ ನಡೆಸುವ ಜಾಗ, ಅಧ್ಯಕ್ಷತೆ ಸೇರಿದಂತೆ ಪ್ರತಿಯೊಂದರಲ್ಲೂ ಬೆಂಗಳೂರಿನ ಕೇಂದ್ರ ಸ್ಥಾನವೇ ಆಕ್ರಮಿಸಿಕೊಂಡಿದೆ. ಅತಿಥೇಯ ಮಂಡ್ಯ ಸಮರ್ಥ ಪ್ರತಿನಿಧಿಗಳಿಲ್ಲದೆ ನಗಣ್ಯವಾಗಿದೆ. ಸಮ್ಮೇಳನದ ಜವಾಬ್ದಾರಿಗಳು ಮತ್ತು ಅಧಿಕಾರಗಳು ವಿಕೇಂದ್ರೀಕರಣಗೊಳ್ಳುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಎಲ್ಲ ವ್ಯವಹಾರಗಳು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಇರಬೇಕೆಂಬ ಕಾರಣದಿಂದ ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ಸೋಷಿಯಲ್ ಆಡಿಟ್ನ್ನು ಕಡ್ಡಾಯವಾಗಿ ಮಾಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.ಗೋಷ್ಠಿಯಲ್ಲಿ ಚಿಕ್ಕಮರಳಿ ಬೋರೇಗೌಡ, ಹುಲ್ಲುಕೆರೆ ಮಹದೇವು, ಬಿ.ಟಿ.ವಿಶ್ವನಾಥ್, ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ ಇದ್ದರು.