ಮಕ್ಕಳಲ್ಲಿ ನೈತಿಕ ಭಾವನೆ ತುಂಬುವುದು ಅತ್ಯವಶ್ಯ

KannadaprabhaNewsNetwork | Published : May 13, 2025 1:27 AM
Follow Us

ಸಾರಾಂಶ

ಬದುಕಿಗೆ ಬೆಳಕಾಗುವ ಮಾನವೀಯ ಮೌಲ್ಯಗಳನ್ನು ಕಲಿಸಿದಾಗ ಮಾತ್ರ ಪ್ರತಿಯೊಬ್ಬರ ಜೀವನ ಸುಂದರವಾಗಲು ಸಾಧ್ಯ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಶಿಕ್ಷಣ ವ್ಯಾಪಾರೀಕರಣವಾಗದೇ ಜನರಲ್ಲಿ ಮಹತ್ವದ ಮೌಲ್ಯಗಳನ್ನು ತುಂಬುವಲ್ಲಿ ಪ್ರಯತ್ನಿಸಬೇಕು. ಮೌಲ್ಯವಿಲ್ಲದ ಶಿಕ್ಷಣಕ್ಕೆ ಯಾವತ್ತೂ ಸಮಾಜದಲ್ಲಿ ಬೆಲೆ ಇಲ್ಲವಾಗಿದೆ. ಮಕ್ಕಳಲ್ಲಿ ನೈತಿಕ ಭಾವನೆ ತುಂಬುವುದು ಅತ್ಯವಶ್ಯವಾಗಿದೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಸಂಪಗಾಂವಿ ಗ್ರಾಮದ ಆರ್‌ಇಎಸ್ ಪ್ರೌಢಶಾಲೆಯ ಆವರಣದಲ್ಲಿ ವಿಶ್ವ ಮಾನವ ಬಂಧುತ್ವ ವೇದಿಕೆ ಹಾಗೂ ಸಂಪಗಾಂವ ನಾಗರಿಕರ ಸಹಯೋಗದಲ್ಲಿ ಶನಿವಾರ ನಡೆದ ಶೈಕ್ಷಣೀಕ ಸಮಾವೇಶ ಮತ್ತು ವಿವಿಧ ಕ್ಷೇತ್ರದ ಸಾಧಕರ, ನಿವೃತ ನೌಕರರ, ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸ್ವಾರ್ಥಕ್ಕಾಗಿ ಆಗುತ್ತಿದ್ದು ತುಂಬಾ ವಿಷಾದನೀಯವಾಗಿದೆ. ಶಿಕ್ಷಣದ ಬೋಧನೆಯಿಂದ ವಿದ್ಯಾರ್ಥಿ ಸೇರಿದಂತೆ ಇಡೀ ಸಮಾಜ ಬೆಳಗಬೇಕು. ಬದುಕಿಗೆ ಬೆಳಕಾಗುವ ಮಾನವೀಯ ಮೌಲ್ಯಗಳನ್ನು ಕಲಿಸಿದಾಗ ಮಾತ್ರ ಪ್ರತಿಯೊಬ್ಬರ ಜೀವನ ಸುಂದರವಾಗಲು ಸಾಧ್ಯವಾಗಲಿದೆ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ, ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಊರಿನ ಜನರು ಒಗ್ಗಟ್ಟಾಗಬೇಕು. ಗ್ರಾಮದಲ್ಲಿರುವ ಶೈಕ್ಷಣಿಕ ಅಡಚಣೆಗಳನ್ನು ನಿವಾರಿಸಿಕೊಂಡು ಎಲ್ಲರೂ ಸುಶಿಕ್ಷಿತರಾಗಲು ಪ್ರಯತ್ನಿಸಬೇಕು. ಜ್ಞಾನವಂತರಾದಂತೆ ಅಲ್ಲಿನ ಮತಕ್ಷೇತ್ರವೂ ಕೂಡಾ ಸುಂದರವಾಗಲು ಸಾಧ್ಯವಾಗಲಿದೆ. ಹೀಗಾಗಿ ಆಯಾ ಶಾಲೆಗಳಲ್ಲಿ ಕಲಿತಂತಹ ಹಳೆಯ ವಿದ್ಯಾರ್ಥಿಗಳು ಶಾಲೆಗಳ ಬಗ್ಗೆ ಗಮನ ಹರಿಸಿ ಸಹಾಯ, ಸಹಕಾರ ನೀಡಿ ಕುಂದುಕೊರತೆ ನಿವಾರಿಸಿದಾಗ ಮಾತ್ರ ಅಲ್ಲಿನ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ ಎಂದರು.

ಸಂಪಗಾಂವ ಗ್ರಾಮದ ಕಟಾಪೂರಿಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಹಸೀಲ್ದಾರ್‌ ಹಣಮಂತ ಶಿರಹಟ್ಟಿ, ಜಿಪಂ ಸದಸ್ಯ ರೋಹಿಣಿ ಪಾಟೀಲ, ಆರ್‌ಇಎಸ್ ಸಂಸ್ಥೆ ಚೇರಮನ್ ಶಂಕರೆಪ್ಪ ಶಿದ್ನಾಳ, ಕ.ಸ.ನೌ.ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಗ್ರಾಪಂ ಅಧ್ಯಕ್ಷ ಅನಿಲದೇವ ನೇಸರಗಿ, ಉಪಾಧ್ಯಕ್ಷ್ಯೆ ಜಯಲಕ್ಷ್ಮೀ ಮಾಡಮಗೇರಿ, ಸಂಪಾಗಾಂವಿ ಗ್ರಾಪಂ ಸದಸ್ಯ ಮಂಜುನಾಥ ಶಿಡ್ಲೆವ್ವಗೋಳ, ಜಿಲ್ಲಾ ನಿವೃತ ನೌಕರರ ಸಂಘದ ಅಧ್ಯಕ್ಷ ಎಸ್.ಜಿ.ಶಿದ್ನಾಳ, ಆರ್‌ಇಎಸ್ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಉಳ್ಳೇಗಡ್ಡಿ, ಹುಬ್ಬಳ್ಳಿ ಚೇತನ ಕಾಲೇಜು ಸಂಸ್ಥಾಪಕ ಗುರಶಾಂತ ವಳಸಂಗ, ಎಸ್‌ಎನ್‌ವಿವಿಎಸ್ ಸಂಸ್ಥೆಯ ನಿಧೆರ್ರ್ಶಕ ವೀರುಪಾಕ್ಷ ಕೋರಿಮಠ, ಆರ್‌ಇಎಸ್ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಉಳ್ಳೇಗಡ್ಡಿ, ಡಾ.ಬಿ.ಬಿ.ಪುಟ್ಟಿ, ಭಾರತ ವೈಭವ ಸಂಪಾದಕ ಪ್ರಶಾಂತ ಐಹೊಳೆ, ಅನಂತಕುಮಾರ ಬ್ಯಾಕೋಡ, ಸಿ.ಬಿ.ಪುಟ್ಟಿ, ಡಾ.ಬಾಬು ನಾಯ್ಕ, ರುದ್ರಪ್ಪ ಟೊಣ್ಣಿ ಮುಂತಾದವರು ವೇದಿಕೆ ಮೇಲಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಯು.ಡಿ.ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್.ಡಿ.ಗಂಗಣ್ಣವರ ಸ್ವಾಗತಿಸಿ, ಶಿಕ್ಷಕರಾದ ಎಂ.ಎಸ್.ಕೋಳಿ ನಿರೂಪಿಸಿ, ಬಸವರಾಜ ಚಿವಟಗುಂಡಿ ವಂದಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಮಾಜಿ ಸೈನಿಕರು, ನಿವೃತ ನೌಕರರು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.