ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲೋ ಒಂದು ಕಡೆ ಕರ್ನಾಟಕ ಸರಕಾರವು ನಮ್ಮ ಜನಾಂಗವನ್ನು ಕೂಡ ಗುರುತಿಸುವ ಕೆಲಸ ಮಾಡಿದೆ. ರಾಜ್ಯದಲ್ಲಿ ನಮ್ಮ ಜನಾಂಗದ ಸಂಖ್ಯೆ ೪೦ ಲಕ್ಷಕ್ಕೂ ಹೆಚ್ಚು ಇದ್ದು, ಹಾಸನ ಜಿಲ್ಲೆಯಲ್ಲಿ ಆರರಿಂದ ಏಳು ಸಾವಿರ ಜನಸಂಖ್ಯೆ ಇರಬಹುದು. ಆದರೆ ಇಲ್ಲಿ ನಾವು ಅಲ್ಪಸಂಖ್ಯಾತರು ಎನಿಸಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದರೆ ನಮ್ಮ ಜನಾಂಗದ ನಾಯಕರ ಕೊಡುಗೆ ಅಪಾರವಿದೆ ಎಂದರು. ನಮ್ಮ ಮುಖಂಡರಾದ ಪಿ.ಆರ್. ರಮೇಶ್ ಅವರು ಸರಕಾರದಲ್ಲಿ ಒಂದು ಭಾಗವಾಗಿ ಕೆಲಸ ಮಾಡಿದ್ದು, ಏನಾದರೂ ಬೇಡಿಕೆ ಈಡೇರಬೇಕಾದರೆ ರಮೇಶ್ ಅವರು ಗಮನಸೆಳೆಯುವ ಕೆಲಸ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ನಾವೆಲ್ಲಾ ಸಂಘಟಿತರಾಗಿ ಎಲ್ಲಾ ಗ್ರಾಮದಿಂದ ಇಂತಹ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಆರಾಧ್ಯ ದೇವರು ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಆಗಿದ್ದರೂ ಕೂಡ ನಮ್ಮ ಸಮುದಾಯದಲ್ಲಿ ಶ್ರೀರಾಮನನ್ನು ಕೂಡ ಪೂಜಿಸುತ್ತೇವೆ. ತಮಿಳುನಾಡಿನಲ್ಲಿ ನಮ್ಮ ಜನಾಂಗದ ೪೮ ಜನ ಶಾಸಕರು ಇದ್ದು, ತುಮಕೂರು ಜಿಲ್ಲೆಯಲ್ಲಿ ನಮ್ಮವರು ಬಹುಸಂಖ್ಯಾತರು. ಕನಿಷ್ಟ ಮೂವರು ಶಾಸಕರನ್ನು ಗೆಲ್ಲಿಸಬಹುದು, ಆದರೆ ತೆಗೆದುಕೊಳ್ಳಲು ಆಗುತ್ತಿಲ್ಲ. ನಮ್ಮಲ್ಲಿ ಸಂಘಟನೆಯ ಕೊರತೆ ಎದ್ದು ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಆಗಿರುವ ತಪ್ಪನ್ನು ತಿದ್ದಿಕೊಂಡು ಮುಂದೆ ಒಗ್ಗಟ್ಟನ್ನು ಪ್ರದರ್ಶಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಇದೆ ವೇಳೆ ನಗರಸಭೆ ತಹಸೀಲ್ದಾರ್ ಅಶ್ವಿನಿ, ಶಾಂತಿಗ್ರಾಮ ವೃತ್ತದ ಆರಕ್ಷಕ ನಿರೀಕ್ಷಕರಾದ ಎ.ಟಿ. ಭಾನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಪಿ. ತಾರಾನಾಥ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಆರ್.ಎಸ್. ಮಹೇಶ್ ಉಪಸ್ಥಿತರಿದ್ದರು. ಯದೀಶ್ ಕಾರ್ಯಕ್ರಮ ನಿರೂಪಿಸಿದರು.