ಕನ್ನಡಪ್ರಭ ವಾರ್ತೆ ಉಡುಪಿಕಣ್ಣಿನ ಕಾಯಿಲೆಗಳಲ್ಲಿ ಗ್ಲುಕೋಮಾ ಎಂಬುದು ಅತ್ಯಂತ ಅಪಾಯಕಾರಿ, ಕಣ್ಣನ್ನು ಕೆಂಪಾಗಿಸದೆ, ಯಾವುದೇ ನೋವನ್ನು ನೀಡದೆ ಅತ್ಯಂತ ಗೌಪ್ಯವಾಗಿ ಪ್ರವೇಶ ಮಾಡಿ, ಪೂರ್ಣ ದೃಷ್ಟಿಯನ್ನು ಕದಿಯುವ ಚೋರ ಗ್ಲುಕೋಮಾ ಎಂದು ಮಣಿಪಾಲ ಕೆ.ಎಂ.ಸಿ.ಯ ನೇತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ನೀತಾ ಕೆ.ಐ.ಆರ್ ಎಚ್ಚರಿಸಿದರು.ಅವರು ಇಲ್ಲಿನ ನೇತ್ರ ಜ್ಯೋತಿ ಕಾಲೇಜಿನಲ್ಲಿ ಜರುಗಿದ ವಿಶ್ವ ಆಪ್ತಮೆಟ್ರಿ ದಿನ ಮತ್ತು ಗ್ಲುಕೋಮಾ ಅರಿವಿನ ಮಾಸಾಚರಣೆಯಲ್ಲಿ ಮಾತನಾಡಿದರು.ಕಣ್ಣಿನ ಪೊರೆ, ರೆಟಿನಾ ಸಮಸ್ಯೆಗಳ ಬಗ್ಗೆ ಜನರಲ್ಲಿ ಸ್ವಲ್ಪ ಅರಿವಿದೆ, ಆದರೆ ಗ್ಲುಕೋಮಾ ಕಾಯಿಲೆ ಬಗ್ಗೆ ಅರಿವಿಲ್ಲದೆ ಅದಕ್ಕೆ ಬಲಿಯಾಗುತ್ತಿದ್ದಾರೆ. ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಗ್ಲುಕೋಮಾವು ಸ್ನೇಹಿತನಂತೆ ಜೋತು ಬೀಳುತ್ತದೆ. ಕಣ್ಣಿನೊಳಗೆ ಹೆಚ್ಚಾದ ದ್ರವ ಒತ್ತಡದಿಂದ ಮೆದುಳಿಗೆ ಚಿತ್ರಗಳನ್ನು ರವಾನಿಸುವ ಅಪ್ಟಿಕ್ ನರಗಳನ್ನು ಹಾನಿಗೊಳಗಾಗುತ್ತವೆ. ಗ್ಲುಕೋಮಾ ಕಾಯಿಲೆನ್ನು ಆರಂಭಿಕ ಹಂತದಲ್ಲಿ ಗುರುತಿಸಿದರೆ ಪೂರ್ಣವಲ್ಲದಿದ್ದರೂ ಉಳಿದಿರುವ ದೃಷ್ಟಿಯನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.ಪ್ರಸಾದ್ ನೇತ್ರಾಲಯದ ರೆಟಿನಾ ತಜ್ಞೆ ಡಾ. ಶ್ರುತಿ ಪೈ ಅವರು ರೆಟಿನಾ ಕಾಯಿಲೆಯ ಲಕ್ಷಣಗಳು, ಬಾರದಂತೆ ತಡೆಯುವುದು, ಬಂದಲ್ಲಿ ನಿಭಾಯಿಸುವುದು ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು.