ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಬಳಿಕ ಮಾತನಾಡಿದ ಅವರು, ಎಚ್ಐವಿ, ಏಡ್ಸ್ ಬಗ್ಗೆ ಜಾಗರೂಕರಾಗುವ ಅವಶ್ಯವಿದೆ. ಎಲ್ಲರೂ ಮನುಷ್ಯರೇ ಆಗಿರುವುದರಿಂದ ಸಮಾಜದಲ್ಲಿ ಏಡ್ಸ್ ಸೋಂಕಿತರನ್ನು ಕೀಳಾಗಿ ನೋಡಿ ಕಡೆಗಣಿಸಬಾರದು. ಅವರಿಗೆ ಆತ್ಮಸ್ಥೈರ್ಯ ತುಂಬಿ ಇತರರಂತೆ ಬದುಕುವ ಅವಕಾಶ ಮಾಡಿಕೊಡಬೇಕು. ಅವರೊಂದಿಗೆ ಮಾತನಾಡುವುದರಿಂದ, ಕೈ ಕುಲುಕುವುದರಿಂದ ಎಚ್ಐವಿ, ಏಡ್ಸ್ ಹರಡುವುದಿಲ್ಲ. ಪ್ರಜ್ಞಾವಂತ ನಾಗರಿಕರಾದ ನಾವೆಲ್ಲರೂ ಅವರ ಜೊತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದರು.
ಏಡ್ಸ್ ಕಾಯಿಲೆಗೆ ಚಿಕಿತ್ಸೆ ಇದೆ. ಮುಖ್ಯವಾಗಿ ಯುವಕರು ಇತರರಿಗೂ ಅರಿವು ಮೂಡಿಸಬೇಕು. ಸಾಮುದಾಯಿಕ ಪ್ರಜ್ಞೆ ಜಾಗೃತವಾಗಬೇಕು. ಎಚ್.ಐ.ವಿ ಏಡ್ಸ್ ನಿಯಂತ್ರಣ, ಜಾಗೃತಿ ಸರ್ಕಾರದ ಇಲಾಖೆಗಳ ಕೆಲಸ ಮಾತ್ರವಲ್ಲ. ನಗರದ ರೋಟರಿ ಸಂಸ್ಥೆ, ಸ್ನೇಹಜ್ಯೋತಿ ನೆಟ್ವರ್ಕ್, ಸಮತಾ ಸೊಸೈಟಿ ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳು ಏಡ್ಸ್ ಕುರಿತು ತಳಮಟ್ಟದಿಂದ ಕೆಲಸ ಮಾಡುತ್ತಿವೆ. ಜಾಗೃತಿ ನಿರಂತರವಾಗಿರಬೇಕು ಮುಂದಿನ ದಿನಗಳಲ್ಲಿ ಆರೋಗ್ಯಪೂರ್ಣ ಚಾಮರಾಜನಗರಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.ಆರಂಭದಲ್ಲಿ ಯಳಂದೂರಿನ ರಂಗದೇಗುಲ ಕಲಾವೇದಿಕೆಯ ಶಾಂತರಾಜು ಮತ್ತು ತಂಡದವರು ಎಚ್.ಐ.ವಿ. ಏಡ್ಸ್ ಬಗ್ಗೆ ಜನಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ರವಿಕುಮಾರ್, ಸಿಮ್ಸ್ನ ನಿವಾಸಿ ವೈದ್ಯಾಧಿಕಾರಿ ಡಾ. ಮಹೇಶ್, ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ರಕ್ತನಿಧಿ ಕೇಂದ್ರದ ಮಹದೇವಪ್ರಸಾದ್, ರೋಟರಿ ಸಿಲ್ಕ್ ಸಿಟಿ ಶಮೀತ್ ಇದ್ದರು.