ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮುಖ್ಯ: ಹುಲಿಕಲ್ ನಟರಾಜ್

KannadaprabhaNewsNetwork |  
Published : Feb 09, 2026, 01:30 AM IST
8ಎಚ್ಎಸ್ಎನ್4 :  | Kannada Prabha

ಸಾರಾಂಶ

ರಾಜ್ಯದ ೯೩ ಕ್ಲಬ್‌ನ ಸದಸ್ಯರು ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಯತ್ರೋಪಕರಣಗಳ ಖರೀದಿಗೆ ₹೧.೫ ಕೋಟಿ ಅಗತ್ಯವಾಗಿದ್ದು ಧರ್ಮಸ್ಥಳದ ವೀರೇಂದ್ರ ಹೆಗ್ಡೆಯವರ ಬಳಿ ಸಹಾಯ ಕೇಳಲಾಗುವುದು.

ಕನ್ನಡಪ್ರಭ ವಾರ್ತೆ ಹಾಸನ

ಮೂಢನಂಬಿಕೆಗಳಿಂದ ಹೊರಬಂದು ವಿಜ್ಞಾನಪರ ಚಿಂತನೆಯತ್ತ ಸಾಗಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವುದು ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಹುಲಿಕಲ್ ನಟರಾಜ್ ತಿಳಿಸಿದರು.

ನಗರದ ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಭವನದಲ್ಲಿ ಭಾನುವಾರ ಲಯನ್ಸ್ ಕ್ಲಬ್ ಹಾಸನ ಹಾಗೂ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಅಂತರ್ ಜಿಲ್ಲಾ ಟ್ವಿನ್ ಕ್ಲಬ್ ಸಭೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಜ್ಞಾನಾಧಾರಿತ ಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ. ವೈದ್ಯಕೀಯ ಚಿಕಿತ್ಸೆಯ ಬದಲು ಮಂತ್ರ, ತಂತ್ರಗಳ ಹಿಂದೆ ಹೋಗುವುದು ಜೀವಕ್ಕೆ ಅಪಾಯಕಾರಿಯೆಂದು ತಿಳಿಸಿದರು. ಮಕ್ಕಳಲ್ಲಿ ಪ್ರಶ್ನಿಸುವ ಗುಣ, ತರ್ಕಬದ್ಧ ಚಿಂತನೆ ಹಾಗೂ ಸಾಕ್ಷ್ಯಾಧಾರಿತ ನಂಬಿಕೆಗಳು ಸಮಾಜದ ಪ್ರಗತಿಗೆ ದಾರಿ ಮಾಡಿಕೊಡುತ್ತವೆ. ಮೂಢನಂಬಿಕೆಗಳಿಂದ ದೂರವಿದ್ದು, ವಿಜ್ಞಾನವನ್ನು ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಆರೋಗ್ಯಕರ, ಸಮಾನತೆಯುಳ್ಳ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ‘ನಾನು ವಿಜ್ಞಾನಿ’ ಎಂಬ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ಯಶಸ್ವಿಯಾಗಿದೆ ಎಂದರು.

ಬಳಿಕ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಸಾಧನೆ ಕುರಿತು ಮಾತನಾಡಿದ ಅವರು, ನಮ್ಮ ಲಯನ್ಸ್ ಕ್ಲಬ್ ಕಳೆದ ವರ್ಷ ₹೭೫ ಲಕ್ಷದಲ್ಲಿ ಕಟ್ಟಡ ನಿರ್ಮಾಣಮಾಡಿತ್ತು. ಡಯಾಲಿಸಿಸ್ ಆಸ್ಪತ್ರೆ ಹಾಗೂ ಮಾನಸಿಕ ಆಸ್ಪತ್ರೆ ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತಿದ್ದು, ಈ ವರ್ಷ ದಾನಿಗಳಿಂದ ಹೆಚ್ಚಿನ ಸಿಎಸ್‌ಆರ್ ಫಂಡ್ ಬರುತ್ತಿದ್ದು, ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ೯೩ ಕ್ಲಬ್‌ನ ಸದಸ್ಯರು ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಯತ್ರೋಪಕರಣಗಳ ಖರೀದಿಗೆ ₹೧.೫ ಕೋಟಿ ಅಗತ್ಯವಾಗಿದ್ದು ಧರ್ಮಸ್ಥಳದ ವೀರೇಂದ್ರ ಹೆಗ್ಡೆಯವರ ಬಳಿ ಸಹಾಯ ಕೇಳಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ‘ನಾನು ವಿಜ್ಞಾನಿ’ ಕಾರ್ಯಕ್ರಮದಲ್ಲಿ ೧೬೨ ವಿದ್ಯಾರ್ಥಿಗಳು ಟಿಲಿಸ್ಕೋಪ್ ತಯಾರಿಸಿ ಏಷ್ಯಾಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿದ್ದು, ಜಿಲ್ಲೆಯ ಪುಷ್ಪಗಿರಿಯಲ್ಲಿ ಏಪ್ರಿಲ್ ಅಂತ್ಯ ಇಲ್ಲವೇ ಮೇ ತಿಂಗಳ ಮೊದಲ ವಾರ ನಡೆಯುವ ನಾನು ವಿಜ್ಞಾನಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಭಾಗವಹಿಸಲಿದ್ದು, ಇನ್ನೂ ಹೆಚ್ಚಿನ ದಾಖಲೆ ಮಾಡುವ ಸಾಧನೆಯನ್ನು ಸಾವಿರಾರು ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಎರಡು ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಸೇವಾ ಚಟುವಟಿಕೆಗಳು, ಮುಂದಿನ ಕಾರ್ಯಕ್ರಮಗಳ ಯೋಜನೆ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಲಯನ್ಸ್ ಕ್ಲಬ್‌ನ ಜಿಲ್ಲಾಧ್ಯಕ್ಷ ಎಚ್. ರಮೇಶ್ ವಹಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಗೌರವಾಧ್ಯಕ್ಷ ಕಮಲ್‌ಕುಮಾರ್, ರವಿಕುಮಾರ್, ಜಿಲ್ಲಾ ಲಯನ್ಸ್ ದೊಡ್ಡಬಳ್ಳಾಪುರ ಅಧ್ಯಕ್ಷ ನಂಜುಂಡೇಶ್ವರ, ಜಗದೀಶ್, ಹಾಸನದ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಎಚ್.ಆರ್. ಚನ್ನೇಗೌಡ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನ್‌ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’