ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಕ್ಷೇತ್ರದ ಅಭಿವೃದ್ದಿಗೆ ಅನುದಾನದ ಅಗತ್ಯ ಇದೆ. ಅದಕ್ಕಾಗಿ ಶಾಸಕರಾದವರು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಮುಖ್ಯಮಂತ್ರಿ, ಮಂತ್ರಿ ಮಹೋದಯರು ಹೇಳಿದ ಸಮಯಕ್ಕೆ ಸರಿಯಾಗಿ ಭೇಟಿಯಾಗಿ ಜನರ ಸಮಸ್ಯೆಗಳ ಗಮನಕ್ಕೆ ತಂದಾಗ ಅವರು ಪರಿಹಾರ ನೀಡುತ್ತಾರೆ. ಇದನ್ನು ಸಹಿಸದೇ ಬೆಂಗಳೂರು ಶಾಸಕ ಎಂದು ಆರೋಪ ಮಾಡುವವರಿಗೆ ಅನುಭವದ ಕೊರತೆ ಇದೆ ಎಂದು ಶಾಸಕ ಮಾನಪ್ಪ ಡಿ. ವಜ್ಜಲ್ ತಿವಿದರು.ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರಾದವರು ಕ್ಷೇತ್ರದಲ್ಲಿ ಇರುವ ಜೊತೆಗೆ ಕ್ಷೇತ್ರದ ಜನರ ಸಮಸ್ಯೆಗಳ ಪರಿಹಾರಕ್ಕೆ ಯೋಜನೆಗಳುಬೇಕು. ಶಾಸಕರಾದವರು ಮನೆಯಲ್ಲಿ ಇದ್ದರೆ ಸರ್ಕಾರ ಅನುದಾನ, ಯೋಜನೆಗಳನ್ನು ಮನೆಗೆ ಬಂದು ನೀಡುವುದಿಲ್ಲ. ಅಭಿವೃದ್ಧಿ ಇಚ್ಛಾಶಕ್ತಿ ಇದ್ದಾಗ ಅನುದಾನಕ್ಕಾಗಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು, ವಿಧಾನಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್ ಕಚೇರಿಗಳಿಗೆ ದುಂಬಾಲು ಬೀಳಬೇಕು ಇಲ್ಲದೇ ಹೋದರೆ ಜನರ ಜಠಿಲ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅದಕ್ಕಾಗಿ ಬೆಂಗಳೂರಿಗೆ ಹೋಗುವುದು ಅನಿವಾರ್ಯವಾಗಿದೆ. ಬೆಂಗಳೂರಿಗೆ ಮಜಾ ಮಾಡಲು ಹೋಗಲು ಮಜಾ ಮಾಡುವ ವಯಸ್ಸು, ಜಾಯಮಾನ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು. ಬೇಸಿಗೆ ಹಂಗಾಮಿನ ಬೆಳೆಗೆ ನೀರಿನ ಅಗತ್ಯತೆ ಅರಿತು ಸರ್ಕಾರಕ್ಕೆ ರೈತರ ಸಮಸ್ಯೆ ಮನವರಿಕೆ ಮಾಡಿದಾಗ ಸರ್ಕಾರದ ಬಲದಂಡೆ ನಾಲೆಗೆ ನೀರು ಬಿಟ್ಟಿತ್ತು. ಇಂತಹ ಅನೇಕ ಜನಪರ, ರೈತಪರ ಕೆಲಸಗಳು ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ದುಡಿಯುವುದು ಶಾಸಕನ ಕರ್ತವ್ಯ. ಅಭಿವೃದ್ಧಿ ಕೆಲಸದಲ್ಲಿ ಪ್ರಚಾರ ಪಡೆಯುವ ಜಾಯಮಾನ ನನ್ನದಲ್ಲ. ಪ್ರಚಾರಕ್ಕಿಂತ ಜನರ ಸಮಸ್ಯೆ ಪರಿಹಾರ ಕಾಣಬೇಕಿದೆ ಎಂದು ತಿಳಿಸಿದರು.ಈ ಹಿಂದೆ ಲಿಂಗಸುಗೂರು ಪಟ್ಟಣದ ಹೃದಯ ಭಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ ಕೆಲವರ ವಿರೋಧದಿಂದ ಪಟ್ಟಣದಿಂದ ಅನತಿ ದೂರದಲ್ಲಿ ತಹಸಿಲ್ ಕಚೇರಿ ನಿರ್ಮಿಸಲಾಗಿದೆ. ಇದು ಜನರಿಗೆ ಅನಾನುಕೂಲ ಆಗಿದೆ. ಅದನ್ನು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಲು ಪ್ರಜಾ ಭವನ ಮಂಜೂರಿಗೆ ಕಂದಾಯ ಸಚಿವರಿಗೆ 2 ಸಲ ಭೇಟಿಯಾಗಿ ಮನವಿ ಮಾಡಿರುವೆ, ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೂ ಅವಕಾಶ ನೀಡುವುದಿಲ್ಲ. ಲಿಂಗಸುಗೂರು ಪಟ್ಟಣದಲ್ಲಿ ಇರುವ ಯಾವುದೇ ಕಚೇರಿ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ. ಸರ್ಕಾರ ನಮ್ಮ ಮಾತು ಮೀರಿ ಸ್ಥಳಾಂತರ ಮಾಡಿದರೆ ಅದರ ವಿರುದ್ದ ಹೋರಾಟಕ್ಕೆ ಸಿದ್ದ ಎಂದರು. ಜಾತಿ ಗಣತಿ, ಜನಿವಾರದಂತಹ ಕೃತ್ಯಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಗದ ಜನರ ಸೆಳೆಯಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಜನಿವಾರ ಒಂದೇ ಅಲ್ಲ, ಶಿವದಾರ, ಉಡುದಾರ, ಲಿಂಗದಾರ, ಮಹಿಳೆಯರ ತಾಳಿ ಸೇರಿದಂತೆ ಸಂಪ್ರದಾಯಿಕ ಉಡುಗೆ-ತೊಡುಗೆಗೆ ರಾಜ್ಯದಲ್ಲಿ ಆಪತ್ತು ಬರಲಿದೆ ಇದು ಕೂಡಾ ಗ್ಯಾರಂಟಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನ್ಯಾಯವಾದಿ ಅಯ್ಯಪ್ಪ ಮಾಳೂರು, ಪುರಸಭೆ ಸದಸ್ಯ ಮುದಕಪ್ಪ ನಾಯಕ, ಗಿರಿಮಲ್ಲನಗೌಡ, ಬಸನಗೌಡ ಚಿತ್ತಾಪುರ, ಲಿಂಗಣ್ಣ ದೇವಿಕೇರಿ, ಪರಶುರಾಮ ಕೆಂಬಾವಿ ಇದ್ದರು.
ಜನಾಕ್ರೋಶಕ್ಕೆ 4 ಸಾವಿರ ಜನ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೆಲೆ ಏರಿಕೆ ನೀತಿ ವಿರೋಧಿಸಿ ಇದೇ ಏ.23ರಂದು ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಹೋರಾಟದಲ್ಲಿ ಲಿಂಗಸುಗೂರು ಕ್ಷೇತ್ರದಿಂದ 4 ಸಾವಿರ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳಿದ್ದಾರೆ. ರಾಜ್ಯ ಸರ್ಕಾರ ಹಲವು ಭಾಗ್ಯಗಳು, ಗ್ಯಾರಂಟಿ ಯೋಜನೆಗಳಿಗೆ ಅವೈಜ್ಞಾನಿಕವಾಗಿ ಹಣ ನೀಡಿದೆ. ಪರಿಣಾಮ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಾಗುತ್ತಿದೆ ಇದನ್ನು ಖಂಡಿಸಿ ಹೋರಾಟ ಮಾಡಲಾಗುವುದೆಂದು ಶಾಸಕ ವಜ್ಜಲ್ ಹೇಳಿದರು.