ಯುವ ಪೀಳಿಗೆ ಜ್ಞಾನದ ಮೂಲಕ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳುವುದು ಅವಶ್ಯ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : May 16, 2024, 12:50 AM IST
15ಎಚ್‌ವಿಆರ್‌4- | Kannada Prabha

ಸಾರಾಂಶ

ನಮ್ಮ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳು ನಮ್ಮ ಪರಿವಾರದಲ್ಲಿ ಉಳಿದುಕೊಂಡಿವೆ ಎಂದರೆ ಅದು ತಾಯಿಂದಿರಿಂದ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಮುಂಬರುವ ಯುವ ಪೀಳಿಗೆ ವೈಚಾರಿಕವಾಗಿ ಜ್ಞಾನದ ಮೂಲಕ ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವದು ಅವಶ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಜರುಗಿದ ಅಕ್ಕನ ಬಳಗದ 50ನೇ ವರ್ಷದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಭಕ್ತಿಯ ಕ್ರಾಂತಿ ನಿರಂತರವಾಗಿ ನಡೆದಿರುವುದು ಭಾರತದಲ್ಲಿ, ಅದೂ ಕನ್ನಡ ನಾಡಿನಲ್ಲಿ. ಸವಣೂರಿನ ಅಕ್ಕನ ಬಳಗ ಕ್ರೀಯಾಶೀಲವಾಗಿ 50 ವರ್ಷ ಕಾಲ ಕೆಲಸ ಮಾಡಿಕೊಂಡು ಬಂದಿದೆ. ಶುದ್ಧ ಅಂತಃಕರಣ, ಭಕ್ತಿಯ ಭಾವ ಇರುವಂತದ್ದು ಅಕ್ಕ ಮಹಾದೇವಿ ಅವರ ವಚನದಲ್ಲಿದೆ. ಯಾವುದನ್ನು ಬಯಸದೆ ಶುದ್ಧ ಅಂತಃಕರಣದಲ್ಲಿ ಲೀನವಾಗಿ ಕರಗಿರುವ ಶರಣೆ ಅಕ್ಕಮಹಾದೇವಿ. ಅಂತಹ ಶರಣರು ನಡೆದಾಡಿದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಧನ್ಯರು. ನಮ್ಮ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳು ನಮ್ಮ ಪರಿವಾರದಲ್ಲಿ ಉಳಿದುಕೊಂಡಿವೆ ಎಂದರೆ ಅದು ತಾಯಿಂದಿರಿಂದ. ತಾಯಂದಿರು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತಿಯ ಭಾವ, ಮಠಗಳ ಪಾತ್ರದಿಂದ ಕನ್ನಡ ನಾಡಿನಲ್ಲಿ ಇಂದು ಸದ್ಭಾವನಾ, ಸದ್ವಿಚಾರದ ಸಂಸ್ಕಾರದಿಂದ ಇರಲು ಸಾಧ್ಯವಾಗಿದೆ. ಇವುಗಳನ್ನು ಉಳಿಸಿ, ಬೆಳಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ನೆರವೇರಿಸಿ ಮಾತನಾಡಿದರು. ಚೆನ್ನಮ್ಮ ಬೊಮ್ಮಾಯಿ ಅವರು ಅಕ್ಕನ ವಚನಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಕಲ್ಮಠದ ಮಹಾಂತ ಸ್ವಾಮೀಜಿ, ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ, ಸದಾಶಿವಪೇಟೆ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಕ್ಕನ ಬಳಗದ ಅಧ್ಯಕ್ಷೆ ಕವಿತಾ ಬಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ದಂಪತಿ ಸನ್ಮಾನಿಸಲಾಯಿತು.

ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಪತ್ನಿ ಅಲಕಾ ಸಿಂಧೂರ ಅವರಿಗೆ ಅಕ್ಕನ ಬಳಗದ ವತಿಯಿಂದ ತ್ರಿವಿಧ ದಾಸೋಹ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಅಕ್ಕನಬಳಗದ ಶರಣೆಯರು, ಸಾರ್ವಜನಿಕರು ಹಾಗೂ ಇತರರು ಪಾಲ್ಗೊಂಡಿದ್ದರು. ಐಶ್ವರ್ಯ ಸೋಲಾರಗೊಪ್ಪ ಕಾರ್ಯಕ್ರಮ ನಿರ್ವಹಿಸಿದರು.ಶಿಗ್ಗಾಂವಿ, ಸವಣೂರು ಜನತೆಯನ್ನು ಮರೆಯಲ್ಲ

ನಾನು ಎಂಪಿ ಆಗಲಿ, ಆಗದೆ ಇರಲಿ, ಶಾಸಕ ಇರಲಿ, ಇರದೇ ಇರಲಿ ಸವಣೂರ-ಶಿಗ್ಗಾಂವಿ ಜನತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ. ನನಗೆ ಸ್ಥಾನಕ್ಕಿಂತ ಕಳೆದ 16 ವರ್ಷ ನೀಡಿದ ನಿಮ್ಮ ಪ್ರೀತಿ ವಿಶ್ವಾಸ ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ. ನಿಮ್ಮನ್ನು ನಾನೆಂದೂ ಮರೆಯುವದಿಲ್ಲ.

ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ಆಕ್ರೋಶ : ರೈಲ್ವೆ ಪರೀಕ್ಷೆ ಮುಂದಕ್ಕೆ
ಎತ್ತಿನಹೊಳೆ ಯೋಜನೆಗೆ ಅರಣ್ಯ ಪ್ರದೇಶ ಬಳಕೆ : ಕೇಂದ್ರ ಷರತ್ತಿನ ಅಸ್ತು