ಹಾನಗಲ್ಲ: ಪಂಚೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಅಂಗವಾದ ಶ್ರವಣಾಂಗವನ್ನು ದೋಷವಿಲ್ಲದಂತೆ ನಿರ್ವಹಣೆ ಮಾಡಿಕೊಳ್ಳುವುದು ತೀರ ಅಗತ್ಯವಾಗಿದ್ದು, ಜಿಲ್ಲಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ಪೂಜಾ ತಿಳಿಸಿದರು.
ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡಿ ಕಿವಿಗಳಲ್ಲಿ ಯಾವುದೇ ವಸ್ತುವನ್ನು ಅಳವಡಿಸುವುದರಿಂದ ಹಾಗೂ ಜೋರಾದ ಶಬ್ದದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ತಿಳಿವಳಿಕೆ ನೀಡಿ, ಶಾಲೆಯಲ್ಲಿ ಮಕ್ಕಳು ಪಠ್ಯದ ಕಡೆಗೆ ಗಮನಕೊಡದಿದ್ದರೆ ಆ ಮಗುವಿಗೆ ಶ್ರವಣ ಪರೀಕ್ಷೆಯನ್ನು ಮಾಡಿಸಲು ಸೂಚಿಸಬೇಕು. ಯಾರಿಗೂ ಕಿವಿಯ ಮೇಲೆ ಹೊಡೆಯಬೇಡಿ. ಇದರಿಂದ ಶ್ರವಣ ಶಕ್ತಿ ಕುಂದಬಹುದು. ಕಿವಿಯಲ್ಲಿ ನೋವು ಹಾಗೂ ಕಿವಿಯಲ್ಲಿ ಸೋರಿಕೆ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದರು.
ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬೇಡಿ, ಮಗುವಿನ ಕಿವಿಯ ಮೇಲೆ ಹೊಡೆಯಬೇಡಿ, ಜೋರಾದ ಶಬ್ದದಿಂದ ಮಗುವನ್ನು ದೂರವಿಡಿ, ಸುರಕ್ಷಿತ ಆಡಿಯೋ ಡಿವೈಸ್ ಮೂಲಕ ಕೇಳುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.ಹಾನಗಲ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಸ್ವಾತಿ ಮಾತನಾಡಿ, ಗದ್ದಲದ ಸ್ಥಳಗಳಲ್ಲಿರುವಾಗ ಕಿವಿ ಕವಚವನ್ನು ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕಬಾರದು, ನೀವು ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂದು ವೈದ್ಯರಿಂದ ತಿಳಿದುಕೊಳ್ಳಿ, ನೀವು ಕಿವಿಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ, ಅಗತ್ಯವಿದ್ದಲ್ಲಿ ವೈದ್ಯರು ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಶಿಕ್ಷಣಾರ್ಥಿ ಉಮಾ ಸ್ವಾಗತಿಸಿದರು, ಪವಿತ್ರಾ ಪ್ರಾರ್ಥಿಸಿದರು, ಸ್ಫೂರ್ತಿ ನಾಯಕ ನಿರೂಪಿಸಿ, ವಂದಿಸಿದರು.