It is necessary to take action against those who destroy water resources: Dr. G.N. Mallikarjunappa suggests
-ವಿಶ್ವ ಜಲದಿನ ಕಾರ್ಯಕ್ರಮ ಉದ್ಘಾಟನಾ ಸಮಾರಂಭ
-----
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಜಲಸಂರಕ್ಷಣೆಗಾಗಿ ನದಿ ನೀರಿಗೆ ಆರತಿ ಎತ್ತುವುದಕ್ಕಿಂತ ಜಲಸಂಪನ್ಮೂಲವನ್ನು ಹಾಳು ಮಾಡುವವರ ವಿರುದ್ಧ ಲಾಠಿ ಎತ್ತುವುದು ಅಗತ್ಯವೆಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್,ಐಕ್ಯುಎಸಿ ಮತ್ತು ಎನ್ ಎಸ್ ಎಸ್ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನೀರಿನ ಸಂರಕ್ಷಣೆ, ನೀರಿನ ಪ್ರಾಮುಖ್ಯತೆ ಬಗ್ಗೆ ಬರೀ ಭಾಷಣ ಮಾಡುವ ಬದಲು, ಜನಸಾಮಾನ್ಯರಿಗೆ. ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಪ್ರತಿವರ್ಷವೂ ಪ್ರಮುಖ ಘೋಷವಾಕ್ಯಗಳ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಿತರಿಗೆ ತಿಳಿಸಿಕೊಡಬೇಕಾಗಿದೆ. ಭೂಮಿಯ ಮೇಲಿನ ಪ್ರತಿ ಜೀವಿಗೂ ನೀರು ಅತ್ಯವಶ್ಯಕ. ಅತ್ಯಂತ ಪ್ರಮುಖವಾದ ನೈಸರ್ಗಿಕ ಸಂಪನ್ಮೂಲ. ಬಹುತೇಕ ನಾಗರೀಕತೆಗಳು ನೀರಿನ ಮೂಲದಿಂದಲೇ ಉಗಮವಾಗಿವೆ. ಇಡೀ ಮಾನವ ಇತಿಹಾಸದಲ್ಲಿ ನೀರು ಪ್ರಮುಖವಾಗಿ ಬಳಕೆಯಾಗುವ ಉಪಯುಕ್ತ ಅಂಶವಾಗಿದೆ. ಭೂಮಿಯ ಮೇಲೆ ನೀರು ಇಲ್ಲದಿದ್ದಲ್ಲಿ ಬಹುತೇಕ ಜೀವಿಗಳ ಉಗಮವಾಗಲೀ, ಜೀವನವಾಗಲೀ ಸಾಗುತ್ತಲೇ ಇರಲಿಲ್ಲ. ನೀರು ಇಲ್ಲದ ಜಗತ್ತಿನಲ್ಲಿ ಯಾವ ಜೀವಿಯೂ ಬದುಕಲಾರದು " ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ಕೆ.ಎಂ.ವೀರೇಶ್ ಮಾತನಾಡಿ ಯಾವುದೇ ರೀತಿಯ ವ್ಯವಸ್ಥೆ ಒಳಿತಾಗಬೇಕಾದರೆ ಜನರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮೂಡಿಸುವುದು ಇಂದಿನ ಅವಶ್ಯ. ಬೇಜವಾಬ್ದಾರಿ ಕಾನೂನುಗಳನ್ನು ಜಾರಿಗೆ ತರುವುದು ಅನವಶ್ಯಕ ಎಂದರು.
ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ನೀರು ಇಲ್ಲದೇ ಇರುವ ಈ ಭೂಮಿಯನ್ನು ಊಹಿಸಲೂ ಸಾಧ್ಯವಿಲ್ಲ. ನೀರು ಇಲ್ಲದೇ ಹೋಗಿದ್ದಲ್ಲಿ ರಾಜ್ಯ ರಾಜ್ಯಗಳ ನಡುವೆ, ರಾಷ್ಟ್ರ ರಾಷ್ಟ್ರಗಳ ನಡುವೆ ಜಗಳ ನಡೆಯುತ್ತಲೇ ಇರಲಿಲ್ಲ. ಒಂದು ವೇಳೆ ಮೂರನೇ ಮಹಾಯುದ್ಧ ಭವಿಷ್ಯದಲ್ಲಿ ನಡೆದಲ್ಲಿ ಅದು ನೀರಿಗಾಗಿ ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಎಂ.ಆರ್.ಜಯಲಕ್ಷ್ಮಿ, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ಉಪಸ್ಥಿತರಿದ್ದರು.
-----------
ಪೋಟೋ ಕ್ಯಾಪ್ಸನ್
ಚಿತ್ರದುರ್ಗದಲ್ಲಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು.-----
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.