ಮುಂಡರಗಿ: ಮಕ್ಕಳಿಗೆ ಶಾಲೆಯಲ್ಲಿ ಗುರುಗಳು, ಗುರುಮಾತೆಯರು ಶಿಕ್ಷಣ ಕಲಿಸಿದರೆ ಅದರ ಜೊತೆಯಲ್ಲಿ ಮನೆಯಲ್ಲಿ ಪಾಲಕರು ಉತ್ತಮವಾದ ಸಂಸ್ಕಾರ ಕಲಿಸಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಅವರು ಮಂಗಳವಾರ ಪಟ್ಟಣದ ರೋಟರಿ ಶಿಕ್ಷಣ ಸಂಸ್ಥೆಯ ಶ್ರೀ ವಿ.ಜಿ. ಲಿಂಬಿಕಾಯಿ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಂಡರಗಿ, ಶ್ರೀಮತಿ ಸರಸ್ವತಮ್ಮ ಲಿಂಬಿಕಾಯಿ ಪೂರ್ವ ಪ್ರಾಥಮಿಕ ಶಾಲೆ ಮುಂಡರಗಿ ಇವುಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇಂದು ಆಂಗ್ಲಭಾಷಾ ಶಿಕ್ಷಣ, ಮಾತೃಭಾಷಾ ಶಿಕ್ಷಣ ಎನ್ನುವ ಭೇದ ಭಾವವಿಲ್ಲದೇ ಮಕ್ಕಳ ಬುದ್ಧಿಮಟ್ಟಕ್ಕೆ ತಕ್ಕಂತೆ ಅವರನ್ನು ಓದಿಸಿದರೆ ಆ ಮಗು ಓದಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಹೆಚ್ಚು ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು. ಇಂದಿನ ಪಾಲಕರು ತಮ್ಮ ಮಕ್ಕಳಿಗೆ ದುಬಾರಿ ಮೊಬೈಲ್ ಕೊಡಿಸಿ ಅದಕ್ಕೆ ಇಂಟರ್ ನೆಟ್ ಹಾಕಿಸಿ ಕೊಟ್ಟರೆ ಸಾಲದು. ಮಗು ಆ ಮೊಬೈಲನ್ನು ಕಲಿಕೆಗೆ ಬಳಸಿಕೊಳ್ಳುತ್ತಾನೋ ಅಥವಾ ಅದರಿಂದ ದಾರಿ ತಪ್ಪುತ್ತಿದ್ದಾನೋ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯ, ಮೊಬೈಲ್ನಲ್ಲಿ ಆಟವಾಡಿ ಸಮಯ ವ್ಯರ್ಥ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಓದಿ ಸಾಧನೆ ಶಿಖರವನ್ನು ಮುಟ್ಟಬೇಕು ಎಂದರು. ಶಾಸಕ ಡಾ. ಚಂದ್ರು ಲಮಾಣಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ನಶಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಇಷ್ಟೊಂದು ಮಕ್ಕಳನ್ನು ಹೊಂದಿದ ಶಾಲೆಯನ್ನು ನೋಡುವುದು ಅಪರೂಪ.
ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಕ್ಕಮಹಾದೇವಿ ಕಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ಡಿ. ಮೋರನಾಳ, ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಎಸ್.ವಿ. ಲಿಂಬಿಕಾಯಿ, ಕೆ.ಎಫ್. ಅಂಗಡಿ, ಡಾ.ಎ.ಎಂ. ಮೇಟಿ, ಎಸ್.ವೈ. ನಾಡಗೌಡ್ರ, ಪಾಲಾಕ್ಷಗೌಡ ಪಾಟೀಲ, ಜಗನ್ನಾಥ ಅಳವಂಡಿ, ಪವಿತ್ರಾ ಕಲ್ಲುಕುಟಗರ್, ಪವನ್ ಮೇಟಿ, ಮುಖ್ಯೋಪಾಧ್ಯಾಯರಾದ ಸಿ.ವಿ. ಪಾಟೀಲ, ಎಂ.ಬಿ. ನಾಗರಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.