ಲೋಕಸಭೆಗೆ ಜೆಡಿಎಸ್‌ನಿಂದ 6 ಕ್ಷೇತ್ರಗಳಿಗೆ ಬೇಡಿಕೆ: ಜಿಟಿಡಿ

KannadaprabhaNewsNetwork |  
Published : Feb 10, 2024, 01:47 AM IST
ಜಿ.ಟಿ.ದೇವೇಗೌಡ | Kannada Prabha

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ 6 ಕ್ಷೇತ್ರ ಬಿಟ್ಟುಕೊಡುವಂತೆ ಮೈತ್ರಿ ಪಕ್ಷ ಬಿಜೆಪಿಯನ್ನು ಕೇಳುತ್ತಿದ್ದೇವೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಕನ್ನಡ್ರಭ ವಾರ್ತೆ ಹುಬ್ಬಳ್ಳಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ 6 ಕ್ಷೇತ್ರ ಬಿಟ್ಟುಕೊಡುವಂತೆ ಮೈತ್ರಿ ಪಕ್ಷ ಬಿಜೆಪಿಯನ್ನು ಕೇಳುತ್ತಿದ್ದೇವೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ನೆಲೆ ಇರುವ ಮಂಡ್ಯ, ಮೈಸೂರು, ಹಾಸನ, ಕೋಲಾರ, ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದೇವೆ. ಬಿಜೆಪಿಯವರು ಎಷ್ಟು ಕೊಡುತ್ತಾರೆ ನೋಡಬೇಕು. ಮಂಡ್ಯ ಕೊಡದಿದ್ದರೆ ಅದರ ಬದಲಾಗಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.

ಎಚ್‌.ಡಿ.ದೇವೇಗೌಡರ ಕುಟುಂಬದಿಂದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರಜ್ವಲ್‌ ರೇವಣ್ಣ ಇಬ್ಬರೂ ಸ್ಪರ್ಧಿಸುತ್ತಾರೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದರೆ ಪ್ರಜ್ವಲ್‌ ಮಾತ್ರ ಕಣಕ್ಕಿಳಿಯಲಿದ್ದು, ಎಚ್‌ಡಿಕೆ ಮತ್ತು ನಿಖಿಲ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಬಿಜೆಪಿ ಜತೆ ಮೈತ್ರಿ ಕುರಿತಾಗಿ ಜೆಡಿಎಸ್‌ನಲ್ಲಿ ವಿರೋಧವಾಗಿಲ್ಲ. ಬಿಜೆಪಿ ತತ್ವ ಸಿದ್ದಾಂತವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ನಲ್ಲಿ ಬಿಟ್ಟುಕೊಡುವುದಿಲ್ಲ. ಮೋದಿ ಕಾರಣಕ್ಕೆ ಹೊಂದಾಣಿಕೆಯಾಗಿದ್ದೇವೆ. ಕೆರೆಗೋಡು ಧ್ವಜ ಪ್ರಕರಣದಲ್ಲಿ ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರಷ್ಟೆ. ಅದೇನು ಬಿಜೆಪಿ ಶಾಲು ಅಲ್ವಲ್ಲ?, ತಪ್ಪೇನು? ಎಂದು ಸಮರ್ಥಿಸಿಕೊಂಡರು.

ಲೋಕಸಭೆ ಅಷ್ಟೆ ಅಲ್ಲ, ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂಬುದು ಜೆಡಿಎಸ್‌ನ ಇರಾದೆ. ಮುಂದೇನಾಗುತ್ತದೆ ನೋಡೋಣ ಎಂದರು.

ಸಂಸದೆ ಸುಮಲತಾ ಅವರು ಮಂಡ್ಯದಿಂದ ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಜೆಡಿಎಸ್‌ ಸ್ವಾಗತಿಸುತ್ತದೆ. ಆದರೆ, ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದ ನಾರಾಯಣಗೌಡ ಈಗ ಸಿದ್ದರಾಮಯ್ಯನವರ ಸಂಪರ್ಕದಲ್ಲಿದ್ದಾರೆ. ಹೀಗಾಗಿ, ಸುಮಲತಾ ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!