ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿರುವ ರಾಜ್ಯ ಸರ್ಕಾರ

KannadaprabhaNewsNetwork |  
Published : May 12, 2026, 01:15 AM IST
2 | Kannada Prabha

ಸಾರಾಂಶ

ವ್ಯಭಿಚಾರ, ದರೋಡೆ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಸರ್ಕಾರವೇ ಕ್ಲೀನ್ ಚಿಟ್ ನೀಡುತ್ತಾ ಹೋದರೆ, ಶಿಕ್ಷೆ ಕೊಡುವುದಾದರೂ ಯಾರಿಗೆ?

ಕನ್ನಡಪ್ರಭ ವಾರ್ತೆ ಮೈಸೂರು

ಭ್ರಷ್ಟಾಚಾರ, ದರೋಡೆ ಮತ್ತು ಅವ್ಯವಹಾರ ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ರಾಜ್ಯ ಸರ್ಕಾರವು ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದರು.ವ್ಯಭಿಚಾರ, ದರೋಡೆ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಸರ್ಕಾರವೇ ಕ್ಲೀನ್ ಚಿಟ್ ನೀಡುತ್ತಾ ಹೋದರೆ, ಶಿಕ್ಷೆ ಕೊಡುವುದಾದರೂ ಯಾರಿಗೆ? ಸಾಮಾನ್ಯ ಜನರಿಗೆ ನ್ಯಾಯ ಸಿಗುವುದು ಎಲ್ಲಿ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಇಲವಾಲ ಜಂಕ್ಷನ್ ದರೋಡೆ ಪ್ರಕರಣದಲ್ಲೂ ಕ್ಲೀನ್‌ ಚಿಟ್ ನೀಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಮೇಲೆ ಗುರುತರ ಆರೋಪಗಳು ಕೇಳಿ ಬಂದಿವೆ. ಆದರೂ ಅವರ ಮೇಲಿನ ಅಮಾನತು ರದ್ದುಪಡಿಸಿ ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ವಾಹನವನ್ನು ಅವರ ಪುತ್ರಿ ಬಳಸಿದ್ದಾರೆ. ಸಾಕ್ಷ್ಯವಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅವರು ಕಿಡಿಕಾರಿದರು.ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಬಟ್ಟೆ ಬ್ಯಾಗ್ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪಲು ರೋಹಿಣಿ ಸಿಂಧೂರಿ ಪ್ರಮುಖ ಕಾರಣ. ಹೆರಿಟೇಜ್ ಕಟ್ಟಡದ ಪೀಠೋಪಕರಣ ಕಳ್ಳತನ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ಹೈಕೋರ್ಟ್ ಆದೇಶ ನೀಡಿದ್ದರೂ, ಅಧಿಕಾರಿಗಳು ಸರ್ಕಾರದ ಅನುಮತಿ ಇಲ್ಲದೆ ಸುಪ್ರೀಂಕೋರ್ಟ್‌ ನಿಂದ ತಡೆಯಾಜ್ಞೆ ತಂದಿರುವುದರ ಹಿಂದೆ ಯಾರ ಕೈವಾಡವಿದೆ? ನೀವು ಅನುಮತಿ ನೀಡದೆ ಕೋರ್ಟ್ ಮೆಟ್ಟಿಲೇರಿದ್ದಾರೆಯೇ? ನಿಯಂತ್ರಣ ನಿಮ್ಮ ಕೈಯ್ಯಲ್ಲಿ ಇಲ್ಲವೇ ಮುಖ್ಯಮಂತ್ರಿಗಳೇ ಎಂದು ಅವರು ಪ್ರಶ್ನಿಸಿದರು.ಬೌರಿಂಗ್ ಆಸ್ಪತ್ರೆ ಸಾವಿನ ಬಗ್ಗೆ ತನಿಖೆ ನಡೆಸುವ ಮುಖ್ಯಮಂತ್ರಿಗಳೇ, ಅಂದು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 32 ಜನ ಸತ್ತಾಗ ವಿರೋಧ ಪಕ್ಷದ ನಾಯಕರಾಗಿ ವೀರಾವೇಶದಿಂದ ಹೋಗಿದ್ದೀರಲ್ಲಾ ಆ ತನಿಖಾ ವರದಿ ಏನಾಯಿತು? ಮೃತರ ಕುಟುಂಬಕ್ಕೆ ನ್ಯಾಯ ಸಿಕ್ಕಿದಿಯಾ? ದಕ್ಷ ಅಧಿಕಾರಿಗಳಿದ್ದ ಈ ರಾಜ್ಯದಲ್ಲಿ ಈಗಿನ ಮುಖ್ಯ ಕಾರ್ಯದರ್ಶಿಗಳು ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ರಾಜ್ಯದ ಜನರ ತೆರಿಗೆ ಹಣ ಲೂಟಿಯಾಗುವುದು ಖಚಿತ ಎಂದು ಅವರು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು