ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ಸರಿಯಲ್ಲ: ನಾರಾಯಣಸ್ವಾಮಿ

KannadaprabhaNewsNetwork | Published : Apr 30, 2024 2:09 AM

ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಚಲಿತರಾಗಿದ್ದಾರೆ. ಹೀಗಾಗಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಏಕವಚನದಲ್ಲಿ ಮಾತನಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಾಂಗ್ರೆಸ್ಸಿನವರು ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಚಲಿತರಾಗಿದ್ದಾರೆ. ಹೀಗಾಗಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಅದೇ ರೀತಿ ಮಾಡಿದ್ದು ನೋವು ತಂದಿದೆ ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಾತನಾಡುವ ವೇಳೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂವ, ಇಂವ ಎಂದೆಲ್ಲ ಮಾತನಾಡುತ್ತಿರುವುದು ಸರಿಯಲ್ಲ ಎಂದರು. ಅವರು ಅಧಿಕಾರ ಸಿಗುವುದಿಲ್ಲ ಎಂದು ಎಷ್ಟು ವಿಚಲಿತರಾಗಿದ್ದಾರೆ ಎಂದರೆ, ವೋಟ್ ಹಾಕದಿದ್ದರೂ ಮಣ್ಣಿಗಾದರೂ ಬನ್ನಿ ಎಂದು ಭಾವನಾತ್ಮಕ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ಸಿನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ವಿಡಿಯೋಗಳು ತಪ್ಪಾಗಿ ಎಡಿಟ್ ಮಾಡುವುದರಲ್ಲಿಯೂ ಎತ್ತಿದ ಕೈ. ತೆಲಂಗಾಣದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಮಾತನಾಡಿದ್ದನ್ನು ಎಡಿಟ್ ಮಾಡಿದ್ದಾರೆ. ಸಂವಿಧಾನ ತೆಗೆದು ಹಾಕಲಿದ್ದಾರೆ, ಮೀಸಲಾತಿ ತೆಗೆದುಹಾಕಿದ್ದಾರೆ ಎನ್ನುವ ಅರ್ಥದಲ್ಲಿ ಮಾಡಿದ್ದಾರೆ. ಇದರ ವಿರುದ್ಧ ಈಗಾಗಲೇ ದೂರು ಸಹ ದಾಖಲಾಗಿದೆ ಎಂದರು.

ಮೀಸಲಾತಿಯನ್ನು ತೆಗೆದುಹಾಕುವುದಿಲ್ಲ. ಮತ್ತೆ ಅಂಬೇಡ್ಕರ್ ಬಂದರೂ ಸಹ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಆದರೂ ಪದೇ ಪದೆ ಅದನ್ನೇ ಹೇಳಿ, ಮತದಾರರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ವಿಪ ಸದಸ್ಯೆ ಹೇಮಲತಾ ನಾಯಕ, ಸೋಮನಗೌಡ, ಈಶಪ್ಪ ಹಿರೇಮನಿ, ಸುಂಗಪ್ಪ ಮಾಲಗಿತ್ತಿ, ವೆಂಕಟೇಶ ಪಾಟೀಲ್, ಗಣೇಶ ಹೊರತಟ್ನಾಳ, ವೆಂಕಟೇಶ ಹಾಲವರ್ತಿ ಇದ್ದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ:

ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ನಡೆದ ಮೇಲೆ ಸತ್ಯ ಬೆಳಕಿಗೆ ಬರುತ್ತದೆ ಎಂದರು.

ಇದು, ಅವರ ವೈಯಕ್ತಿಕ ವಿಷಯವಾಗಿದೆ. ಹೀಗಾಗಿ, ಇದರಿಂದ ಪಕ್ಷಕ್ಕೇನು ಸಮಸ್ಯೆ ಇಲ್ಲ. ಯಾರೋ ತಪ್ಪು ಮಾಡಿದವರು ಓಡಿ ಬಂದು ಪಕ್ಷ ಸೇರಿದರೆ ಅದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಮೈತ್ರಿ ಇರುವುದು ನಿಜವಾದರೂ ಅದು ಅವರ ವೈಯಕ್ತಿಕ ವಿಷಯ ಎಂದರು.

ನೇಹಾ ಪ್ರಕರಣಕ್ಕೂ ಇದಕ್ಕೂ ಸಂಬಂಧ ಕಲ್ಪಿಸಲು ಬರುವುದಿಲ್ಲ. ಅದೇ ಬೇರೆ ಇದೇ ಬೇರೆ. ಅದು ಕೊಲೆ ಪ್ರಕರಣ ಎಂದರು.

ಎಲ್ಲ ನೊಂದ ಮಹಿಳೆಯರು ಬಂದು ದೂರು ನೀಡಲಿ, ಆಗ ಸತ್ಯ ಇನ್ನು ಗೊತ್ತಾಗುತ್ತದೆ ಎಂದರು.