ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡಿಗರ ಸಂವೇದನಾಶೀಲತೆಯನ್ನು ಪರಭಾಷಿಗರು ದುರುಪಯೋಗಪಡಿಸಿಕೊಳ್ಳಬಾರದು ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ನಗರದ ವಿದ್ಯಾರಣ್ಯಪುರಂನ ಮಿಲ್ಕ್ ಸೆಂಟರ್ ರಸ್ತೆಯಲ್ಲಿ ಕನ್ನಡ ಗೆಳೆಯರ ಬಳಗವು ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದವಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡಿಗರಾಗಿ ಈ ಭೂಮಿಯಲ್ಲಿ ನಾವು ಹುಟ್ಟಿರುವುದೇ ನಮ್ಮ ಅದೃಷ್ಟ. ಅಪರಿಮಿತ ಸಂಪತ್ತನ್ನು ಒಳಗೊಂಡಿರುವ ನೆಲ ಕರುನಾಡು ಎಂದರು.
ರಾಜ್ಯೋತ್ಸವ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ, ವಿದೇಶದ ನೆಲದಲ್ಲಿಯೂ ಕನ್ನಡಿಗರು ಒಂದೆಡೆ ಆಚರಿಸುವ ಹಬ್ಬ. ನೂರಾರು ಜಾತಿ, ಹಲವಾರು ಧರ್ಮದ ಜನರಿದ್ದರೂ ನಾಡು ನುಡಿಯ ಬಗ್ಗೆ ಅಪಾರ ಗೌರವ ಪ್ರೀತಿಯನ್ನು ಇರಿಸಿಕೊಂಡು ಜಾತಿ ಮತಗಳ ಮೀರಿ ಆಚರಿಸುವ ಧೀಮಂತ ಶಕ್ತಿ ಕನ್ನಡಿಗರಿಗಿದೆ. ಕನ್ನಡವನ್ನು ನಾವು ಕೇವಲ ಭಾಷೆಯಾಗಿ ಮಾತ್ರ ಕಾಣದೆ ನಮ್ಮ ಅಸ್ಮಿತೆ, ಉಸಿರಾಗಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.ಆಧುನಿಕತೆ, ತಂತ್ರಜ್ಞಾನ, ವೈಜ್ಞಾನಿಕ ನಾಗಾಲೋಟದ ಕಾರಣಕ್ಕಾಗಿ ಇಂಗ್ಲಿಷಿನ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ಮರೆಯಬಾರದು. ಬೇರೆ ರಾಜ್ಯದ, ದೇಶದ ಜನರು ತಮ್ಮ ಜೀವನಕ್ಕಾಗಿ ಕರ್ನಾಟಕದಲ್ಲಿ ಬಂದು ನೆಲೆಯೂರಿದ್ದಾರೆ. ಅವರೆಲ್ಲರಿಗೂ ನಮ್ಮ ಜನ ವಸತಿ, ಉದ್ಯೋಗ, ರಕ್ಷಣೆ ಎಲ್ಲವನ್ನೂ ಕೊಟ್ಟು ನಮ್ಮವರೇ ಎಂಬ ಮಾನವೀಯತೆಯಿಂದ ಸಮಾನತೆಯ ಭಾವವನ್ನು ಬೆಸೆದಿದ್ದಾರೆ. ಆದರೂ ಪರಭಾಷಿಗರು ಅದನ್ನೆ ಅಸ್ತ್ರವಾಗಿ ತೆಗೆದುಕೊಂಡು ಕನ್ನಡಿಗರು ಸೂಕ್ಷ್ಮ ಸಂವೇದನೆವುಳ್ಳ ಹೃದಯವಂತರು ಎಂಬುದನ್ನು ಅರಿತು ಬೇರೆ ಭಾಷೆಯಲ್ಲಿ ವ್ಯವಹರಿಸಿ ಕನ್ನಡತನಕ್ಕೆ ಕಪ್ಪುಚುಕ್ಕೆ ತಂದರೆ ಕನ್ನಡಿಗರು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಇನ್ನೂ ಮುಂದುವರೆದು ಕೈಗಾರಿಕೆಗಳು, ತಂತ್ರಜ್ಞಾನ ಆಧಾರಿತ ಬಹುರಾಷ್ಟ್ರೀಯ ಕಂಪನಿಗಳು ಕೇವಲ ಲಾಭ ಗಳಿಸುವ ದೃಷ್ಟಿಯಿಂದ ಸಂಸ್ಥೆಗಳಲ್ಲಿ ಉತ್ತರ ಭಾರತೀಯರು, ಪರಭಾಷಿಗರಿಗಷ್ಟೇ ಅವಕಾಶಗಳನ್ನು ಕೊಟ್ಟು ಕನ್ನಡಿಗರಿಗೆ ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ ಹೋರಾಟಗಳು ಅನಿವಾರ್ಯವಾಗುತ್ತದೆ ಎಂದರು.ಕನ್ನಡ ನೆಲ ಜಲದ ವಿಷಯ ಬಂದಾಗ ಬಡವ ಶ್ರೀಮಂತ, ಜಾತಿ, ಧರ್ಮ ಎಲ್ಲವನ್ನೂ ಬಿಟ್ಟು ಕೇವಲ ನಾವೆಲ್ಲರೂ ಕನ್ನಡಿಗರು ಎಂಬ ಒಗ್ಗಟ್ಟಿನ ಭಾವದಿಂದ ಹೋರಾಟಕ್ಕೆ ಧುಮುಕಬೇಕು. ಆ ಮೂಲಕ ಭಾಷೆಯ ಬಗ್ಗೆ ಗೌರವ ನಿರೂಪಿಸಬೇಕು. ಇಲ್ಲವಾದಲ್ಲಿ ಹೆತ್ತ ತಾಯಿಗೆ ದ್ರೋಹ ಬಗೆದಷ್ಟೇ ಅಪರಾಧವಾಗುತ್ತದೆ. ಅಷ್ಟೇ ಅಲ್ಲದೆ ಕನ್ನಡ ಕೇವಲ ಭಾಷೆ ಮಾತ್ರವಲ್ಲ ಅದು ಕನ್ನಡಿಗರ ಭಾವನೆ ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದರು.
ಪಾಲಿಕೆ ಮಾಜಿ ಸದಸ್ಯ ಎಂ. ಸುನೀಲ್, ಮುಖಂಡರಾದ ಆರ್.ಸಿ. ಜೋಗಿ ಮಹೇಶ್, ಶಂಕರ್, ರವಿಶಂಕರ್, ವಿನಯ್ ಕುಮಾರ್, ಕುಮಾರ್, ಮಂಜುನಾಥ್, ರಾಮ್, ವಿಶ್ವ, ನಾಗರಾಜು, ನಂದ, ಶಶಿ, ನಾಗೇಶ್, ಸ್ವರೂಪ, ಸಾಗರ್ ಮೊದಲಾದವರು ಇದ್ದರು.ಬದುಕಿನಲ್ಲಿ ಸಂಸ್ಕಾರ, ಭರವಸೆ ತುಂಬುವ ಭಾಷೆ ಕನ್ನಡ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡತನ ಬದುಕಿಗೆ ಸಂಸ್ಕಾರವನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಭರವಸೆಯನ್ನೂ ಕಲಿಸುತ್ತದೆ ಎಂದು ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ ತಿಳಿಸಿದರು.
ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಗತ್ತಿನ ಸುಂದರ ಭಾಷೆಗಳಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ. ಕನ್ನಡವು ಹಿಂದೆ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಎಂಬ ರೂಪಾಂತರಗಳನ್ನು ಹೊಂದಿರುವುದರೊಂದಿಗೆ ಏಕತಾನತೆ ಹೊಂದದೆ ಆಯಾ ಪ್ರದೇಶದ ಪ್ರಾದೇಶಿಕತೆಯನ್ನು ಅಳವಡಿಸಿಕೊಂಡು ವಿಭಿನ್ನ ರೂಪಗಳಲ್ಲಿ ಬಳಕೆಯಾಗುತ್ತ ತನ್ನ ಸೊಗಡನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವೈದ್ಯಕೀಯ ವಿಷಯಗಳನ್ನು ಕೂಡ ಕನ್ನಡದಲ್ಲಿ ತಾವು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಅದನ್ನು ಆಸ್ವಾದಿಸುತ್ತಿದ್ದರು. ತಾವು ರಚಿಸಿರುವ ಕನ್ನಡ ವೈದ್ಯಕೀಯ ನಿಘಂಟು ಕನ್ನಡದಲ್ಲಿ ವೈದ್ಯಕೀಯ ವಿಷಯಗಳನ್ನು ಅರಿಯಲು ಸಹಕಾರಿಯಾಗಿದೆ ಎಂದರು.
ಸುಯೋಗ್ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಅರುಣ್ ಕುಮಾರ್, ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಟಿ. ನಾಗಮಣಿ, ಎನ್. ಅನಂತ್ ಮೊದಲಾದವರು ಇದ್ದರು.