ಕನ್ನಡಪ್ರಭ ವಾರ್ತೆ, ತುಮಕೂರು ಕನ್ನಡ ಭಾಷೆ ಬಹಳ ಶ್ರೀಮಂತವಾದ ಭಾಷೆ. ಮುಂದಿನ ಪೀಳಿಗೆಗೆ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ನಗರದ ದಿಬ್ಬೂರಿನಲ್ಲಿ ದಿಬ್ಬೂರು ಕನ್ನಡಿಗರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 13ನೇ ವೈಭವದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಅನೇಕ ಭಾಷೆಗಳಿದ್ದರೂ ಸಹ ನಮ್ಮ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದರೆ ನಮ್ಮ ಭಾಷೆಗೆ ಎಷ್ಟು ಪ್ರಾಮುಖ್ಯತೆಯ ಇದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಣೆ ಮಾಡಿದೆ. ಇದಕ್ಕೆ ನಮ್ಮ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಾಧನೆಗಳೇ ಕಾರಣ ಎಂದರು. ಮಹಾಭಾರತದಲ್ಲಿ ಕನ್ನಡ ನಾಡನ್ನು ಕರುನಾಡು ಎಂದು ಕರೆದಿದ್ದಾರೆ. ಕರುನಾಡಲ್ಲಿ ಕನ್ನಡವನ್ನು ಉಳಿಸಬೇಕು ಎಂದು ಹೋರಾಟ ಮಾಡುವಂತಹ ಅನಿವಾರ್ಯತೆ ಎದುರಾದಾಗಲೂ ಕನ್ನಡಿಗರು ಬಹಳ ಸಹನಶೀಲತೆ, ಸಂಯಮದಿಂದ ವರ್ತನೆ ಮಾಡಿದರು ಎಂದರು. ಕನ್ನಡವನ್ನು ನಾಶ ಮಾಡುವಂತಹ ಪರಿಸ್ಥಿತಿ ಬರುವಾಗ ಒಂದು ಕಡೆ ಮಹಾರಾಷ್ಟ್ರದ ಮರಾಠಿ, ಮತ್ತೊಂದು ಕಡೆ ಮಲೆಯಾಳಿ ಮಾತಾಡುವ ಕೇರಳದ ಜನ, ಮತ್ತೊಂದು ಕಡೆ ತಮಿಳು ಮಾತನಾಡುವಂತಹ ತಮಿಳರು, ಇನ್ನೊಂದು ಕಡೆ ತೆಲುಗು ಮಾತನಾಡುವ ಆಂಧ್ರದವರು ಈ ನಾಲ್ಕು ಜನರ ಮಧ್ಯೆ ಅತ್ಯಂತ ಶ್ರೇಷ್ಠವಾದ ಭಾಷೆ ಕನ್ನಡ ನಾಶವಾಗಬಾರದು ಎಂದು ಗೋಕಾಕ್ ಚಳವಳಿ ಎಂಬ ಹೋರಾಟವನ್ನು ಕೈಗೆತ್ತಿಕೊಳ್ಳಲಾಯಿತು. ಈ ಹೋರಾಟದಲ್ಲಿ ವರನಟ ಡಾ. ರಾಜ್ಕುಮಾರ್ ಹಾಗೂ ಅನೇಕ ಸಾಹಿತಿಗಳು ಭಾಗವಹಿಸಿದ್ದರು ಎಂದು ಸ್ಮರಿಸಿದರು.ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಉಳಿದಿದ್ದರೆ ಅದು ರಾಜ್ಕುಮಾರ್ ರವರ ಅಭಿಮಾನಿಗಳ ಸಂಘದಿಂದ ಎಂದು ಹೆಮ್ಮೆಯಿಂದ ಹೇಳಬಹುದು. ಇದರೊಂದಿಗೆ ಅನೇಕರು ಸಹ ಹೋರಾಟ ಮಾಡಿದ್ದಾರೆ. ಭಾರತೀಯರು ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ವಿಜ್ಞಾನಿಗಳು ಅದರಲ್ಲೂ ಕನ್ನಡಿಗ ವಿಜ್ಞಾನಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು. ಹೀಗಾಗಿ ಮುಖ್ಯಮಂತ್ರಿಗಳು ಸಹ ಕಡತಕ್ಕೆ ಸಹಿ ಮಾಡುವಾಗ ಕನ್ನಡದಲ್ಲೇ ಮಾಡಬೇಕು ಎಂದು ಹೇಳಿದ್ದಾರೆ. ನಾವೆಲ್ಲರೂ ಸಹ ಕನ್ನಡದಲ್ಲೇ ಕಡತಕ್ಕೆ ಸಹಿ ಮಾಡುತ್ತೇವೆ ಎಂದು ಹೇಳಿದರು.